
ನವದೆಹಲಿ (ಜು.02): ಗೂಂಡಾಗಿರಿ ತೋರಿದ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರನ್ನು ಜೈಲಿಗೆ ಅಟ್ಟುವ ಧೈರ್ಯ ತೋರಿದ್ದ ಮಹಿಳಾ ಪೊಲೀಸ್ ಅಧಿಕಾರಿ ಶ್ರೇಷ್ಠಾ ಠಾಕೂರ್’ಗೆ ನೇಪಾಳದ ಗಡಿಗೆ ಉತ್ತರಪ್ರದೇಶ ಸರಕಾರ ವರ್ಗಾವಣೆ ಮಾಡಿ ಶಿಕ್ಷೆ ನೀಡಿದೆ. ಅದಕ್ಕೆ ಪ್ರತಿಕ್ರಿಯಿಸಿದ ಶ್ರೇಷ್ಠಾ, ‘ಮಿತ್ರರೇ ಚಿಂತಿಸಬೇಡಿ, ನನಗೆ ಸಂತೋಷವಾಗಿದೆ. ನನ್ನ ಉತ್ತಮ ಕೆಲಸಕ್ಕೆ ಸಿಕ್ಕ ಪ್ರತಿಫಲ ಇದಾಗಿದೆಯೆಂದು ನಾನು ಭಾವಿಸುತ್ತೇನೆ, ಎಂದು ಹೇಳಿದ್ದಾರೆ.
ಬುಲಂದ್'ಶಹರ್ ಜಿಲ್ಲೆಯ ಸ್ಯಾನಾ’ದಿಂದ ನೇಪಾಳ ಗಡಿಯಲಲಿರುವ ಬಹರೈಚ್ ಜಿಲ್ಲೆಗೆ ಶ್ರೇಷ್ಠಾರನ್ನು ಯೋಗಿ ಸರ್ಕಾರ ವರ್ಗಾವಣೆ ಮಾಡಿದೆ.
ಘಟನೆ ವಿವರ:
ಶ್ರೇಷ್ಠಾ ಮತ್ತಿತರ ಪೊಲೀಸರು ಜೂನ್ 22ರಂದು ಸ್ಯಾನಾ ಪ್ರದೇಶದಲ್ಲಿ ವಾಹನಗಳ ತಪಾಸಣೆ ನಡೆಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದ ಪ್ರಮೋದ್ ಕುಮಾರ್ ಎಂಬಾತನನ್ನು ಪೊಲೀಸರು ತಡೆದು 200 ರೂಪಾಯಿ ದಂಡ ವಿಧಿಸುತ್ತಾರೆ. ಬಿಜೆಪಿ ಮುಖಂಡನೆಂದು ಹೇಳಿಕೊಂಡ ಪ್ರಮೋದ್ ಕುಮಾರ್ ಮತ್ತು ಪೊಲೀಸ್ ಅಧಿಕಾರಿ ಶ್ರೇಷ್ಠಾ ನಡುವೆ ವಾಗ್ವಾದವಾಗುತ್ತದೆ. ಬಳಿಕ ಪ್ರಮೋದ್ ಕುಮಾರ್ ದೂರವಾಣಿ ಕರೆ ಮಾಡಿದ ಬಳಿಕ ನಗರ ಬಿಜೆಪಿ ಅಧ್ಯಕ್ಷ ಮುಕೇಶ್ ಭಾರದ್ವಜ್ ಸೇರಿದಂತೆ ಕೆಲ ಸ್ಥಳೀಯ ಬಿಜೆಪಿ ಮುಖಂಡರು ಧಾವಿಸಿ ಬರುತ್ತಾರೆ. ಆ ನಂತರ ಪೊಲೀಸರಿಗೂ ಬಿಜೆಪಿ ಮುಖಂಡರಿಗೂ ತೀವ್ರ ವಾಗ್ವಾದ, ತಳ್ಳಾಟಗಳಾಗುತ್ತವೆ. ಸರಕಾರಿ ಅಧಿಕಾರಿಯ ಕರ್ತವ್ಯ ಪಾಲನೆಗೆ ಅಡ್ಡಿಪಡಿಸಿದ ಆರೋಪದ ಮೇಲೆ ಶ್ರೇಷ್ಠಾ ಠಾಕೂರ್ ಐವರು ಬಿಜೆಪಿ ಮುಖಂಡರನ್ನು ಬಂಧಿಸಿ ಲಾಕಪ್'ಗೆ ಹಾಕುತ್ತಾರೆ.
ಕೂಡಲೇ ಪೊಲೀಸ್ ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಜನಪ್ರತಿನಿಧಿಗಳ ತಂಡವು ಹೈಕಮಾಂಡ್ ಮೇಲೆ ಒತ್ತಡ ಹೇರಿತು. ಪಕ್ಷದ ಮುಖಂಡರ ಒತ್ತಡಕ್ಕೆ ಮಣಿದ ಸಿಎಂ ಯೋಗಿ ಆದಿತ್ಯನಾಥ್ ಅವರು ಶ್ರೇಷ್ಠಾ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಲು ನಿರ್ಧರಿಸಿದರೆನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.