
ರಾಮನಗರ(ಆ.16): ಮಗನ ವಿದ್ಯಾಭ್ಯಾಸಕ್ಕೆ ಹಣ ನೀಡಿ ತನಗೆ ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಶಿಕ್ಷಕಿಯೊಬ್ಬಳನ್ನು ಪಾಠ ಮಾಡುತ್ತಿದ್ದ ವೇಳೆ ಪೆಟ್ರೋಲ್ ಸುರಿದು ಕೊಲ್ಲಲೆತ್ನಿಸಿದ ಘಟನೆ ಮಾಗಡಿ ತಾಲೂಕಿನ ಸಂಜೀವಯ್ಯನ ಪಾಳ್ಯ ಸಮೀಪದ ಶಂಭಯ್ಯನಪಾಳ್ಯದಲ್ಲಿ ನಡೆದಿದೆ.
ಶಂಭಯ್ಯನಪಾಳ್ಯದ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಸುನಂದ ಗಾಯಗೊಂಡವರು. ಈಕೆಯ ಪತಿ ರೇಣುಕಾರಾಧ್ಯ ಕುಣಿಗಲ್ ಮೂಲದವನಾಗಿದ್ದಾನೆ. ವಿಧವೆಯಾಗಿದ್ದ ಶಿಕ್ಷಕಿ ಸುನಂದಳ ಜೊತೆ ಎರಡನೇ ಮದುವೆಯಾಗಿದ್ದ ಆರೋಪಿ ರೇಣುಕಾರಾದ್ಯ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದ.2 ಲಕ್ಷ ರೂ. ಹಣ ಹಾಗೂ ಆಕೆಯ ಬಳಿ ಇರುವ ಒಡವೆ ನೀಡುವಂತೆ ಒತ್ತಾಯಿಸುತ್ತಿದ್ದ.
ತನ್ನ ಬಳಿ ಹಣವಿಲ್ಲವೆಂದು ಪತಿಗೆ ತಿಳಿಸಿದ್ದ ಶಿಕ್ಷಕಿ ಸುನಂದ ತನ್ನ ಮಗನನ್ನ ಇತ್ತೀಚೆಗೆ ಬೆಂಗಳೂರಿನ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ದಾಖಲಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ರೇಣುಕಾರಾದ್ಯ ಇಂದು ಪೆಟ್ರೋಲ್'ನೊಂದಿಗೆ ಶಾಲೆಗೆ ಆಗಮಿಸಿ ಶಿಕ್ಷಕಿ ಸುನಂದ ಜೊತೆ ಜಗಳವಾಡಿದ್ದಾನೆ. ಗಲಾಟೆ ಮಾಡುತ್ತಲೆ ಶಿಕ್ಷಕಿ ಮಕ್ಕಳಿಗೆ ಪ್ರವಚನ ಮಾಡುತ್ತಿದ್ದಾಗಲೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾನೆ.
ಸ್ಥಳದಲ್ಲಿದ್ದ ಸಹ ಶಿಕ್ಷಕರು ಬೆಂಕಿ ನಂದಿಸಿ ಮಾಗಡಿ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆಯಲ್ಲಿ ಶೇ 40 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿರುವ ಶಿಕ್ಷಕಿ ಸುನಂದಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.