
ಇಸ್ಲಾಮಾಬಾದ್(ಡಿ.11):ಪಾಕಿಸ್ತಾನ ರಾಜಧಾನಿಯಲ್ಲಿ ವಾಸಿಸುತ್ತಿರುವ ಹಿಂದೂಗಳ ಬಹುದಿನಗಳ ಬೇಡಿಕೆಯಾಗಿರುವ ದೇವಾಲಯ ನಿರ್ಮಾಣ, ಸಮುದಾಯ ಭವನ ಮತ್ತು ಸ್ಮಶಾನಕ್ಕಾಗಿ ಜಾಗ ನೀಡಲು ಅಲ್ಲಿನ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ನಾಗರಿಕರ ಸೌಲಭ್ಯಗಳು ಮತ್ತು ರಾಜಧಾನಿ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಿಂದೂ ದೇವಸ್ಥಾನ, ಸಮುದಾಯ ಕೇಂದ್ರ ಮತ್ತು ಸ್ಮಶಾನಕ್ಕಾಗಿ ಅರ್ಧ ಎಕರೆ ಜಾಗ ನೀಡಲು ಇಲಾಖೆ ಸಮ್ಮತಿಸಿದೆ ಎಂದು ‘ದಿ ಎಕ್ಸ್ಪ್ರೆಸ್ ಟ್ರಿಬ್ಯೂನ್’ ಪತ್ರಿಕೆ ವರದಿ ಮಾಡಿದೆ.
‘‘ಇದು ಹಿಂದೂ ಸಮುದಾಯಕ್ಕೆ ಸೇರಿದವರ ದೀರ್ಘಕಾಲದ ಬೇಡಿಕೆಯಾಗಿದ್ದು, ಈಗ ಅದು ಈಡೇರಿದೆ,’’ ಎಂದು ವರದಿ ತಿಳಿಸಿದೆ. ಇಸ್ಲಾಮಾಬಾದ್ನಲ್ಲಿ ಸುಮಾರು 800 ಮಂದಿ ಹಿಂದೂಗಳಿದ್ದು, ದೇವಾಲಯಗಳಿಲ್ಲದ ಕಾರಣ ಅವರೆಲ್ಲರೂ ದೀಪಾವಳಿ ಸೇರಿದಂತೆ ಎಲ್ಲ ಹಬ್ಬಗಳನ್ನೂ ಮನೆಯಲ್ಲೇ ಆಚರಿಸಬೇಕಾಗಿತ್ತು. ಇಲ್ಲಿ ಸ್ಮಶಾನವಿಲ್ಲದ ಕಾರಣ ಮೃತದೇಹಗಳನ್ನು ರಾವಲ್ಪಿಂಡಿಗೆ ಒಯ್ಯಬೇಕಾಗಿತ್ತು.
ಸಂಸತ್ತಿಗೆ ತೃತೀಯ ಲಿಂಗಿಗಳ ಆಹ್ವಾನ:
ಇನ್ನೊಂದೆಡೆ, ಪಾಕಿಸ್ತಾನದಲ್ಲಿ ತೃತೀಯ ಲಿಂಗಿಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಅವರ ಹಕ್ಕುಗಳ ಉಲ್ಲಂಘನೆ ತಡೆಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದರ ಬಗ್ಗೆ ಚರ್ಚೆ ಮಾಡಲು ಅವರನ್ನು ಸಂಸತ್ತಿಗೆ ಆಹ್ವಾನಿಸಲು ಪಾಕಿಸ್ತಾನದ ಸೆನೆಟ್ ನಿರ್ಧರಿಸಿದೆ. ಶುಕ್ರವಾರ ನಡೆದ ಪಾಕಿಸ್ತಾನ ಸಂಸತ್ತಿನ ಕಲಾಪದಲ್ಲಿ ತೃತೀಯ ಲಿಂಗಿಗಳ ಸಮಸ್ಯೆಗಳ ಬಗ್ಗೆ ಸಂಸದ ವೌಲಾನಾ ಹಫೀಜ್ ಹಮ್ದುಲ್ಲಾಹ್ ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಚರ್ಚೆ ನಡೆಸುವ ವಿಚಾರವನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.