
ನವದೆಹಲಿ (ಅ.08): ಪತ್ನಿಯರೇ ಹುಷಾರ್! ನಿಮ್ಮ ಪತಿಯನ್ನು ಅವರ ಹೆತ್ತವರಿಂದ ದೂರ ಮಾಡಬೇಕೆಂಬ ಸಣ್ಣ ಯೋಚನೆಯನ್ನೂ ನೀವಿನ್ನು ಮಾಡುವಂತಿಲ್ಲ. ಅಂತಹ ಪ್ರಯತ್ನವನ್ನೇನಾದರೂ ಮಾಡಿದಲ್ಲಿ, ನಿಮ್ಮ ಪತಿ ನಿಮಗೆ ವಿಚ್ಛೇದನ ನೀಡಬಹುದು.
ವಯಸ್ಸಾದ ಹೆತ್ತವರಿಂದ ಮಗನನ್ನು ದೂರ ಮಾಡಲು ಯತ್ನಿಸಿದರೆ, ಅಂತಹ ಪತ್ನಿಗೆ ವಿಚ್ಛೇದನ ನೀಡಬಹುದು ಎಂಬ ಮಹತ್ವದ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ. ಈ ಮೂಲಕ, ಮದುವೆಯಾದ ಬಳಿಕ ಪುತ್ರ ತಮ್ಮಿಂದ ದೂರವಾಗುತ್ತಾನೆ ಎಂಬ ಪೋಷಕರ ಆತಂಕವನ್ನೂ ನ್ಯಾಯಾಲಯ ದೂರ ಮಾಡಿದೆ.
1992ರಲ್ಲಿ ವಿವಾಹವಾಗಿದ್ದ ಕರ್ನಾಟಕ ಮೂಲದ ದಂಪತಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ‘‘ ಹಿಂದೂ ಸಂಪ್ರದಾಯದ ಪ್ರಕಾರ, ಮದುವೆಯಾದ ಬಳಿಕ ಮಹಿಳೆಯು ಪತಿಯ ಕುಟುಂಬದ ಅವಿಭಾಜ್ಯ ಅಂಗವಾಗಿರುತ್ತಾಳೆ.
ಅಂಥ ಸ್ಥಾನದಲ್ಲಿರುವ ಆಕೆ ಪತಿಯ ಆದಾಯವನ್ನು ತಾನೊಬ್ಬಳೇ ಅನುಭವಿಸಬೇಕೆಂಬ ಹಂಬಲದಿಂದ ಕುಟುಂಬವನ್ನು ಬೇರ್ಪಡಿಸುವುದು ಸರಿಯಲ್ಲ,'' ಎಂದು ನ್ಯಾಯಮೂರ್ತಿಗಳಾದ ಅನಿಲ್ ಆರ್. ದವೆ ಮತ್ತು ಎಲ್. ನಾಗೇಶ್ವರರಾವ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಆ ಕಾರಣಕ್ಕಾಗಿ ಪತಿಯನ್ನು ಆತನ ಪೋ ಷಕರಿಂದ ಪ್ರತ್ಯೇಕಗೊಳಿಸಲು ಯತ್ನಿಸುವ ಪತ್ನಿಗೆ ವಿಚ್ಛೇದನ ನೀಡಬಹುದು ಎಂದು ಹೇಳಿದೆ. ‘‘ವಿವಾಹದ ಬಳಿಕ ಪತಿಯನ್ನು ತಂದೆ-ತಾಯಿಯಿಂದ ಬೇರ್ಪಡಿಸುವುದು ನಮ್ಮ ಸಂಸ್ಕೃತಿಗೆ ಹೊಂದಿಕೊಳ್ಳುವುದಿಲ್ಲ. ಮಗುವನ್ನು ಹೆತ್ತು, ಸಾಕಿ, ಸಲುಹಿ, ವಿದ್ಯಾಭ್ಯಾಸ ಕೊಡಿಸಲು ಪೋಷಕರು ಸಾಕಷ್ಟುಶ್ರಮ ವಹಿಸಿರುತ್ತಾರೆ. ವಯಸ್ಸಾದ ಪೋಷಕರು ತಮ್ಮ ಖಚುರ್- ವೆಚ್ಚಗಳನ್ನು ಪುತ್ರ ನಿಭಾಯಿಸುತ್ತಾನೆ ಎಂಬ ನಂಬಿಕೆ ಇಟ್ಟಿರುತ್ತಾರೆ. ಹಾಗಾಗಿ, ಮದುವೆಯಾದ ಬಳಿಕವೂ ವಯಸ್ಸಾದ ಪೋಷಕರನ್ನು ರಕ್ಷಣೆ ಮಾಡುವುದು ಮಗನ ನೈತಿಕ ಮತ್ತು ಕಾನೂನಾತ್ಮಕ ಹೊಣೆಗಾರಿಕೆ,'' ಎಂದು ನ್ಯಾಯಪೀಠ ಪ್ರತಿಪಾದಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.