
ಚೆನ್ನೈ(ಅ. 08): ಕಳೆದ ಕೆಲ ದಿನಗಳಿಂದ ತೀವ್ರ ಆನಾರೋಗ್ಯಕ್ಕೀಡಾಗಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವ ತಮಿಳುನಾಡಿನ ಸಿಎಂ ಜಯಲಲಿತಾ ಅವರ ಬದಲಾವಣೆಗೆ ಕಾಲ ಸನ್ನಿಹಿತವಾಗುತ್ತಿದೆ. ಒಂದು ಕಡೆ ಕರ್ನಾಟಕ ಹಾಗೂ ತಮಿಳುನಾಡು ಮಧ್ಯೆ ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಕೇಂದ್ರದಿಂದ ತಜ್ಞರ ತಂಡ ಆಗಮಿಸುತ್ತಿದ್ದು, ತಮಿಳುನಾಡಿಗೂ ಭೇಟಿ ನೀಡಲಿದೆ. ಇದರ ಬಗ್ಗೆ ಸರ್ಕಾರ ಯಾವ ರೀತಿ ಸಿದ್ಧತೆ ಮಾಡಿಕೊಂಡಿದೆ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ತಮಿಳುನಾಡಿನ ಹಂಗಾಮಿ ರಾಜ್ಯಪಾಲ ಡಾ.ವಿದ್ಯಾಸಾಗರ್ ಸಚಿವರನ್ನು ರಾಜಭವನಕ್ಕೆ ಕರೆಸಿದ್ರು. ಕೇಂದ್ರದಿಂದ ಬರುವ ತಜ್ಞರ ತಂಡವನ್ನು ಯಾವ ರೀತಿ ಸಂಬಾಳಿಸಿ ಅವರಿಗೆ ನೀರು ಬಿಡಲು ಮನವೊಲಿಸುತ್ತೀರಿ ಎಂದು ಪ್ರಶ್ನಿಸಿದರು.
ಜಯಲಲಿತಾ ಅವರ ಆರೋಗ್ಯ ಬಗ್ಗೆ ಹಂಗಾಮಿ ರಾಜ್ಯಪಾಲ ಡಾ.ವಿದ್ಯಾಸಾಗರ್ ಸಚಿವರ ಬಳಿ ಮಾಹಿತಿ ಪಡೆದರು. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹೇಗಿದೆ? ಸಾಮಾನ್ಯ ಜನರ ಜೀವನ ಮತ್ತು ಆಡಳಿತ ಹೇಗಿದೆ ಎಂಬುದನ್ನು ಮುಖ್ಯ ಕಾರ್ಯದರ್ಶಿಯಿಂದ ಮಾಹಿತಿ ಪಡೆದುಕೊಂಡರು. ಈ ವೇಳೆ ಮಧ್ಯ ಪ್ರವೇಶಿಸಿದ ಹಣಕಾಸು ಸಚಿವ ಓ.ಪನ್ನೀರ್ ಸೆಲ್ವಂ, ಜಯಲಲಿತಾ ಅವರು ಆರೋಗ್ಯವಾಗಿದ್ದಾರೆ. ರಾಜ್ಯದಲ್ಲಿ ಶಾಂತಿಗೆ ಎಲ್ಲೂ ಭಂಗವಾಗಿಲ್ಲ ಎಂದು ಸ್ಪಷ್ಟಪಡಿಸಿದರೆನ್ನಲಾಗಿದೆ.
ಬೇರೆ ಯಾರಿಗಾದರೂ ಸಿಎಂ ಸ್ಥಾನ ನೀಡಬಹುದೆ?
ಸದ್ಯದಲ್ಲಿ ಸಿಎಂ ಸ್ಥಾನವನ್ನು ಬೇರೆ ಯಾರಿಗಾದ್ರೂ ನೀಡುವುದು ಸೂಕ್ತ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಹಂಗಾಮಿ ರಾಜ್ಯಪಾಲರ ಮಾತಿಗೆ ಯಾರು ಉತ್ತರಿಸಿದೇ, ನೇರವಾಗಿ ಆಸ್ಪತ್ರೆಯ ಕಡೆಗೆ ಮೂರು ಮಂದಿಯೂ ಹೆಜ್ಜೆ ಹಾಕಿದರೆಂದು ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಇದೇ ವೇಳೆ, ಸಿಎಂ ಬದಲಾವಣೆ ವಿಚಾರದಲ್ಲಿ ಹಂಗಾಮಿ ರಾಜ್ಯಪಾಲರ ಪ್ರಶ್ನೆಯನ್ನು ಸಿಎಂ ಜಯಲಲಿತಾ ಅವರ ಕಿವಿಗೆ ಹಾಕಿದ್ದು, ಎಲ್ಲ ಸಚಿವರು ಕೂಡಲೇ ಆಸ್ಪತ್ರೆಗೆ ಬರುವಂತೆ ಕರೆ ಮಾಡಲಾಗಿದೆ. ಮೊದಲು ಸಭೆಗೆ 28 ಮಂದಿ ಸಚಿವರು ಮಾತ್ರ ಹಾಜರಾಗಿದ್ದು, ನಂತರ ಇನ್ನುಳಿದ 4 ಮಂದಿ ಮಂತ್ರಿಗಳು ಸಭೆ ಬಂದಿದ್ದಾರೆ. ಇನ್ನು, ರಾಜ್ಯದಲ್ಲಿ ಸಿಎಂ ಬದಲಾವಣೆಯ ಪ್ರಸ್ತಾಪಿಸಿರುವ ಹಂಗಾಮಿ ರಾಜ್ಯಪಾಲರಿಗೆ ಏನು ಉತ್ತರವನ್ನು ಕೊಡಬೇಕು ಎಂಬುದರ ಬಗ್ಗೆ ಸಾಕಷ್ಟು ಮಾತುಕತೆ ನಡೆದಿದ್ದು, ಇನ್ನೂ ಯಾವುದೇ ಹೆಸರುಗಳು ಅಂತಿಮವಾಗಿಲ್ಲ ಎಂಬುದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಶೀಲಾ ಬಾಲಕೃಷ್ಣನ್ ಹೆಸರು?
ಜಯಲಲಿತಾ ಅವರು ಸಂಕಷ್ಟಕ್ಕೀಡಾದಾಗ ಸಿಎಂ ಸ್ಥಾನವನ್ನು ಅಲಂಕರಿಸಿ ನಂಬಿಕಸ್ಥ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹಣಕಾಸು ಸಚಿವ ಓ.ಪನ್ನೀರ್ ಸೆಲ್ವಂ ಅವರ ಬದಲಿಗೆ ನಿವೃತ್ತ ಐಎಎಸ್ ಅಧಿಕಾರಿ ಶೀಲಾ ಬಾಲಕೃಷ್ಣನ್ ಅವರನ್ನು ಸಿಎಂ ಸ್ಥಾನಕ್ಕೆ ಕೂರಿಸಿದ್ರೆ ಒಳಿತು ಎಂಬ ಮಾತುಕತೆಗಳು ಕೇಳಿ ಬಂದಿದೆ. ಸದ್ಯ ತಮಿಳುನಾಡಿನ ಆಡಳಿತವನ್ನೆಲ್ಲಾ ಶೀಲಾ ಅವರೇ ನಿಭಾಯಿಸುತ್ತಿರುವುದು ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುವಂತಿದೆ.
ಇಂದು ಮತ್ತೆ ಸಂಪುಟದ ಎಲ್ಲಾ ಸಚಿವರು ಒಂದೆಡೆ ಸೇರಿ ನಂತರ ಹಂಗಾಮಿ ರಾಜ್ಯಪಾಲರ ಬಳಿ ಹೋಗುವ ಸಾಧ್ಯತೆಯಿದೆ. ಆದ್ರೆ ನಿಜಕ್ಕೂ ಸಿಎಂ ಸ್ಥಾನವನ್ನು ಜಯಾ ಈ ಸ್ಥಿತಿಯಲ್ಲಿ ನಿಭಾಯಿಸುವುದು ಕಷ್ಟದ ಕೆಲಸವಾಗಿದ್ದು, ಈಗ ತಮಿಳುನಾಡಿಗೆ ಉತ್ತರಾಧಿಕಾರಿ ಯಾರು ಎಂಬುದು ಸದ್ಯಕ್ಕೆ ತಿಳಿಯದಂತಾಗಿದೆ.
- ಪಿ. ಮಧುಸೂದನ್, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.