ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಹಲವು ಪ್ರದೇಶಗಳು ಜಲಾವೃತವಾಗಿವೆ. ನದಿಗಳು ಉಕ್ಕಿ ಹರಿಯುತ್ತಿವೆ.
ಗುವಾಹಟಿ/ಪಾಟ್ನಾ : ಅಸ್ಸಾಂ, ಬಿಹಾರ ರಾಜ್ಯಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ.
ಎರಡೂ ರಾಜ್ಯಗಳಲ್ಲಿ ಹಲವು ನದಿಗಳು ಉಕ್ಕಿ ಹರಿಯುತ್ತಿದ್ದು, ಬಹುತೇಕ ಭಾಗಗಳು ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿವೆ. ಲಕ್ಷಾಂತರ ಜನರು ತತ್ತರಿಸಿದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ.
ಅಸ್ಸಾಂನಲ್ಲಿ ಉಂಟಾದ ಪ್ರವಾಹದಿಂದ ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಶೇ.90 ರಷ್ಟುಜಲಾವೃತ್ತಗೊಂಡಿದೆ. ಇದರಿಂದ ಪ್ರಾಣಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿವೆ.
ಪ್ರಾಣಿಗಳ ರಕ್ಷಣೆ ಕಾರ್ಯ ಭರದಿಂದ ಸಾಗಿದೆ. ಪ್ರವಾಹದಿಂದ ಅಭಯಾರಣ್ಯದಲ್ಲಿನ 199 ಪ್ರಾಣಿ ಬೇಟೆ ತಡೆ ಶಿಬಿರಗಳಲ್ಲಿ 150 ಶಿಬಿರಗಳು ತೀವ್ರ ಹಾನಿಗೀಡಾಗಿದೆ.ಪ್ರವಾಹಕ್ಕೆ ಸಿಲುಕಿದ ಪ್ರಾಣಿಗಳು ಉದ್ಯಾನದಲ್ಲಿನ ಎತ್ತರದ ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡರೆ, ಇನ್ನೂ ಕೆಲವು ರಾಷ್ಟ್ರೀಯ ಹೆದ್ದಾರಿ 37ನ್ನು ದಾಟಿ ದಕ್ಷಿಣದ ಎತ್ತರದ ಪ್ರದೇಶ ಕರ್ಬಿ ಅಂಗ್ಲಾಂಗ್ ಕಡೆ ವಲಸೆ ಹೋಗುತ್ತಿವೆ.
ಪ್ರವಾಹ ಸಂಬಂಧಿತ ದುರಂತದಲ್ಲಿ 5 ಪ್ರಾಣಿಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಕಾಜಿರಂಗ ಉದ್ಯಾನದ ಮೂಲಕ ಜನ ಸಂಚಾರ ನಿಷೇಧಿಸಲಾಗಿದೆ.