
ಬೆಂಗಳೂರು: ರಾಜ್ಯ ಇಂಧನ ಇಲಾಖೆಯಲ್ಲಿ 2004ನೇ ಸಾಲಿನಿಂದ 2014ನೇ ಸಾಲಿನವರೆಗೆ ವಿದ್ಯುತ್ ಉತ್ಪಾದನೆ, ಖರೀದಿ, ಬಳಕೆಯಲ್ಲಿ ಅವ್ಯಹಾರ ನಡೆದಿರುವ ಬಗ್ಗೆ ಮಾಹಿತಿ ನೀಡುವಂತೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಡಿ.ಕುಮಾರಸ್ವಾಮಿ ಅವರು ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ ಅವರಿಗೆ ಸುದೀರ್ಘ ಪತ್ರ ಬರೆದಿದ್ದಾರೆ. ಇಂಧನ ಇಲಾಖೆಯಲ್ಲಿ ನಡೆದಿರುವ ಅವ್ಯವಹಾರದಿಂದ ರಾಜ್ಯದ ಬೊಕ್ಕಸಕ್ಕೆ ಉಂಟಾದ ನಷ್ಟ, ಅಂತಹ ಅಕ್ರಮಗಳಿಗೆ ಜವಾಬ್ದಾರರು ಯಾರು ಎಂಬ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಶಿಫಾರಸುಗಳೊಂದಿಗೆ ವರದಿಯನ್ನು ಸಲ್ಲಿಸಲು 2014ರ ಸೆ.9ರಂದು ಸದನ ಸಮಿತಿ ರಚಿಸಲಾಗಿತ್ತು.
ಎರಡು ವರ್ಷಗಳು ಕಳೆದರೂ ಸಮಿತಿಯ ಸದಸ್ಯರಿಗೆ ಯಾವುದೇ ಮಾಹಿತಿ ದೊರೆತಿಲ್ಲ. ಅಲ್ಲದೇ, ವಿಧಾನಮಂಡಲದ ಸದನ ಸಮಿತಿಯ ಕಾರ್ಯದರ್ಶಿಗಳು ಕರಡು ವರದಿ ತಯಾರು ಮಾಡಿ ಅಧ್ಯಕ್ಷರಿಗೆ ನೀಡಿ ವರ್ಷವಾದರೂ ಸಮಿತಿ ವರದಿಯನ್ನು ಸಲ್ಲಿಸಿಲ್ಲ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಸದನ ಸಮಿತಿಯ ಅಧ್ಯಕ್ಷರು ಇಲಾಖೆಯ ಸಚಿವರೇ ಆಗಿರುವುದು ಸಮಿತಿಯ ನಿಯಮಕ್ಕೆ ವಿರುದ್ಧವಾಗಿದೆ. ಭ್ರಷ್ಟಾಚಾರ ಅವರ ಅವಧಿಯಲ್ಲಿಯೂ ಆಗಿರುವುದರಿಂದ ಅಧ್ಯಕ್ಷರಾಗುವುದು ನಿಯಮ ಬಾಹಿರವಾಗಿರುತ್ತದೆ. ಸರ್ಕಾರ ತನ್ನ ಅಕ್ರಮಗಳು ಬಹಿರಂಗ ಗೊಳ್ಳದಂತೆ ಸಂರಕ್ಷಿಸುವ ನಿಟ್ಟಿನಲ್ಲಿ ಇಲಾಖೆ ಸಚಿವರನ್ನೇ ಸದನ ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿರಬಹುದೆಂಬ ಅಭಿಪ್ರಾಯ ಸಾರ್ವಜನಿಕರಲ್ಲಿ ಮೂಡುತ್ತಿದೆ. ಸದನ ಸಮಿತಿ ತನಿಖೆ ಪ್ರಾರಂಭಿಸುವ ಮುನ್ನವೇ ಏನೂ ಆಗಿಲ್ಲವೆಂಬ ಸಚಿವರ ಅಭಿಪ್ರಾಯ ಸದನ ಸಮಿತಿ ರಚನೆ ಮಾಡಿದ ಸದನಕ್ಕೆ ಮತ್ತು ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.