
ಬೆಂಗಳೂರು: ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ಕಂಪನಿಗಳಿಗೆ ಸಡ್ಡು ಹೊಡೆದಿರುವ ನಗರದ ಉತ್ಸಾಹಿ ಕ್ಯಾಬ್ ಚಾಲಕರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ‘ಎಚ್’ಡಿಕೆ ಕ್ಯಾಬ್’ ಹೆಸರಿನ ಆ್ಯಪ್ ಆಧಾರಿತ ಸೇವೆ ನೀಡಲು ಅಂತಿಮ ಸಿದ್ಧತೆ ನಡೆಸಿದ್ದಾರೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ಎರಡನೇ ವಾರ ಅರಮನೆ ಮೈದಾನಲದಲ್ಲಿ ಅದ್ಧೂರಿ ಕಾರ್ಯಕ್ರಮದ ಮೂಲಕ ಆ್ಯಪ್ ಆಧಾರಿತ ಎಚ್’ಡಿಕೆ ಕ್ಯಾಬ್ ಸೇವೆಗೆ ಚಾಲನೆ ಸಿಗಲಿದೆ.
ಶುಕ್ರವಾರ ಸ್ವತ: ಎಚ್.ಡಿ. ಕುಮಾರಸಸ್ವಾಮಿಯವರು ಕ್ಯಾಬ್ ಚಾಲಕರ ಮುಖಂಡರ ಜತೆ ಚರ್ಚಿಸಿದ್ದು, ಸೇವೆ ಆರಂಭಕ್ಕೆ ದಿನ ಗುರುತು ಮಾಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ನೂತನ ಕ್ಯಾಬ್ ಸೇವೆಯು ಪ್ರಯಾಣಿಕರ ಹಾಗೂ ಚಾಲಕ ಸ್ನೇಹಿಯಾಗಿ ಕಾರ್ಯನಿರ್ವಹಿಸಲಿದೆ. ಚಾಲಕನ ಕುಟುಂಬಕ್ಕೆ ರೂ. 5 ಲಕ್ಷ ವಿಮೆ, ಚಾಲಕನಿಗೆ ರೂ. 5 ಲಕ್ಷ, ಕ್ಯಾಬ್ ಅಪಘಾತವಾದರೆ ರೂ. 2ಲಕ್ಷ ಸೇರಿದಂತೆ ಒಟ್ಟು ರೂ. 12 ಲಕ್ಷ ಮೊತ್ತದ ವಿಮಾ ಸೌಲಭ್ಯ ನೀಡಲಾಗುವುದು. ಅಲ್ಲದೇ ಚಾಲಕರ ಮಕ್ಕಳಿಗೆ ಪುಸ್ತಕ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.
ಒಂದು ವರ್ಷ ಕಾರ್ಯ ನಿರ್ವಹಿಸುವ ಚಾಲಕನಿಗೆ ವಾರ್ಷಿಕ ವಿಮೆಯನ್ನು ಎಚ್’ಡಿಕೆ ಕ್ಯಾಬ್ ಸಂಸ್ಥೆಯೇ ಭರಿಸಲು ತೀರ್ಮಾನಿಸಲಾಗಿದೆ. ಅಲ್ಲದೇ ಅಪಘಾತ, ಪೊಲೀಸರ ಕಿರುಕುಳ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಸಹಾಯಕ್ಕಾಗಿ ತುರ್ತು ಸಹಾಯವಾಣಿಗಳನ್ನು ಆರಂಭಿಸಲಾಗುತ್ತಿದೆ.
ಕ್ಯಾಬ್ ಚಾಲಕರಿಗೆ ಸಂಬಂಧಿಸಿದ ಸಮಸ್ಯೆ, ವಿವಾದ ಬಗೆಹರಿಸಲು ಚಾಲಕರ ‘ಕೋರ್ ಕಮಿಟಿ’ ರಚಿಸುವ ಮೂಲಕ ಚರ್ಚೆಗಳ ಮೂಲಕ ಸಮಸ್ಯೆಗಳನ್ನು ಪರಿಸಹರಿಸಲು ತೀರ್ಮಾನಿಸಿದ್ದೆವೆ. ನೂತನ ಸಂಸ್ಥೆಗೆ ಸೇರಲು ಓಲಾ ಮತ್ತು ಉಬರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಬಹಳ ಉತ್ಸುಕರಾಗಿದ್ದಾರೆ. ಈ ಕಂಪನಿಗಳ ದೌರ್ಜನ್ಯದಿಂದ ಚಾಲಕರು ಬೇಸತ್ತಿದ್ದಾರೆ, ಇದಕ್ಕೆಲ್ಲವೂ ಮುಕ್ತಿ ನೀಡುವ ಕಾಲ ಈಗ ಕೂಡಿ ಬಂದಿದೆ. ಶೀಘ್ರದಲ್ಲೇ ನೂತನ ಸೇವೆ ಆರಂಭಗೊಳ್ಳಲಿದೆ, ಎಂದು ಕ್ಯಾಬ್ ಚಾಲಕರ ಮುಖಂಡರೊಬ್ಬರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.