ರೈತರಿಗೆ 6000 ನೀಡಲು ನರೇಗಾ ದುರ್ಬಳಕೆ: ಸಿಎಂ ಆರೋಪ

Published : Mar 07, 2019, 02:00 PM IST
ರೈತರಿಗೆ 6000 ನೀಡಲು ನರೇಗಾ ದುರ್ಬಳಕೆ: ಸಿಎಂ ಆರೋಪ

ಸಾರಾಂಶ

ರೈತರಿಗೆ .6000 ನೀಡಲು ನರೇಗಾ ದುರ್ಬಳಕೆ: ಸಿಎಂ| ನಾಲ್ಕೂವರೆ ವರ್ಷ ರೈತರನ್ನು ಮರೆತಿದ್ದ ಪ್ರಧಾನಿಗೆ ಚುನಾವಣೆ ಬಂದಾಕ್ಷಣ ರೈತರ ನೆನಪು| ಕೃಷಿ ಪಂಡಿತ, ಕೃಷಿ ಪ್ರಶಸ್ತಿ ಪ್ರದಾನ ಮಾಡಿ ಕುಮಾರಸ್ವಾಮಿ ಆರೋಪ

ಬೆಂಗಳೂರು[ಮಾ.07]: ನಾಲ್ಕೂವರೆ ವರ್ಷ ರೈತರನ್ನು ಮರೆತಿದ್ದ ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಕಾರಣಕ್ಕಾಗಿ ಹಠಾತ್ತನೆ ರೈತರನ್ನು ನೆನೆದು ‘ಕಿಸಾನ್‌ ಸಮ್ಮಾನ್‌ ನಿಧಿ’ ಅಡಿ 6 ಸಾವಿರ ರು. ಹಣ ನೀಡುವುದಾಗಿ ಘೋಷಿಸಿದ್ದಾರೆ. ಇದಕ್ಕೆ ಮಹಾತ್ಮ ಗಾಂಧಿ ನರೇಗಾ ಯೋಜನೆಯ 24,000 ಕೋಟಿ ರು. ಕೂಲಿ ಹಣವನ್ನು ಬಳಸಿಕೊಂಡಿದ್ದಾರೆ. ಹೀಗಾಗಿ ನರೇಗಾ ಕೂಲಿ ಹಣವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.

ಕೃಷಿ ಇಲಾಖೆಯು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ಕೃಷಿ ಪಂಡಿತ’ ಹಾಗೂ ‘ಕೃಷಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ರೈತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಚುನಾವಣೆ ಹೊಸ್ತಿಲಲ್ಲಿ ರೈತನಿಗೆ ಪ್ರತಿ ವರ್ಷ 6 ಸಾವಿರ ನೀಡುವುದಾಗಿ ಹೇಳಿದ್ದಾರೆ. ಪ್ರಸ್ತುತ 1 ಕೋಟಿ ರೈತರಿಗೆ ಮಾತ್ರ ತಲಾ 2 ಸಾವಿರ ರು. ನೀಡಿದ್ದಾರೆ. ನರೇಗಾ ಯೋಜನೆಯಡಿ ನೀಡಬೇಕಾಗಿದ್ದ 24 ಸಾವಿರ ಕೋಟಿ ರು.ಗಳನ್ನು ನೀಡದೆ ಈ ಹಣವನ್ನು ಕಿಸಾನ್‌ ಸಮ್ಮಾನ್‌ ನಿಧಿಗೆ ಬಳಸಿಕೊಂಡಿದ್ದಾರೆ.

ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆಯಡಿ ರಾಜ್ಯದ 47 ಲಕ್ಷ ರೈತರಿಗೆ 2098 ಕೋಟಿ ರು. ಹಣ ಬರಲಿದೆ. ಆದರೆ, ನಾವು ರಾಜ್ಯದ ಹಾಲು ಉತ್ಪಾದಕರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹದ ರೂಪದಲ್ಲೇ 2,500 ಕೋಟಿ ರು. ನೀಡುತ್ತಿದ್ದೇವೆ. ಜತೆಗೆ ಉಚಿತ ವಿದ್ಯುತ್‌ಗೆ 11,500 ಕೋಟಿ ರು. ಸಬ್ಸಿಡಿ ನೀಡುತ್ತೇವೆ. ನರೇಂದ್ರ ಮೋದಿ 2 ಸಾವಿರ ಕೋಟಿ ರು. ನೀಡಿದರೆ ನಾವು 16 ಸಾವಿರ ಕೋಟಿ ರು. ನೀಡುತ್ತಿದ್ದೇವೆ. ಜತೆಗೆ 40 ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದೇವೆ. ಆದರೆ, ನರೇಂದ್ರ ಮೋದಿ 70 ವರ್ಷದಲ್ಲಿ ಆಗದಿರುವುದನ್ನು 60 ತಿಂಗಳಲ್ಲಿ ಎಲ್ಲಾ ಮಾಡಿ ಮುಗಿಸಿದ್ದೇನೆ ಎಂದು ಭಾಷಣ ಮಾತ್ರ ಚೆನ್ನಾಗಿ ಮಾಡುತ್ತಾರೆ. 60 ತಿಂಗಳಲ್ಲಿ ಅವರು ಏನು ಮಾಡಿದ್ದಾರೆ ಎಂಬುದನ್ನು ನೀವೇ ನಿರ್ಧಾರ ಮಾಡಿ ಎಂದು ಹೇಳಿದರು.

ಕಾರ್ಯಕ್ರದಮದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ, ಸಚಿವರಾದ ಸಾ.ರಾ. ಮಹೇಶ್‌, ರಹೀಮ್‌ ಖಾನ್‌, ಪಿ.ಟಿ. ಪರಮೇಶ್ವರ ನಾಯಕ್‌, ಕೃಷಿ ಇಲಾಖೆ ಅಧಿಕಾರಿಗಳು, ಕೃಷಿ ವಿವಿ ಕುಲಪತಿಗಳು ಹಾಜರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Bannerghatta aquarium project: ಬನ್ನೇರುಘಟ್ಟದಲ್ಲಿ ₹144.4 ಕೋಟಿ ವೆಚ್ಚದ, ವಿಶ್ವದರ್ಜೆಯ ಅಕ್ವೇರಿಯಂಗೆ ಸಚಿವ ಸಂಪುಟದ ಮಹತ್ವದ ನಿರ್ಧಾರ
West Bengal fish pond conflict: ಚುನಾವಣಾ ಹಿಂಸಾಚಾರ ಆಯ್ತು, ಈಗ ಪಶ್ಚಿಮ ಬಂಗಾಳದಲ್ಲೀಗ ಮೀನುಗಾರಿಕೆ ಕೆರೆಗಳ ಹಿಡಿತಕ್ಕಾಗಿ ಸಂಘರ್ಷ