ಯಾರೋ ಬರೆದುಕೊಟ್ಟಿದ್ದು ಮೋದಿ ಓದಿದ್ದಾರೆ: ರೇವಣ್ಣ| ‘ರಿಮೋಟ್ ಸಿಎಂ’ ಹೇಳಿಕೆಗೆ ರೇವಣ್ಣ ಸಿಡಿಮಿಡ| ಕೇಂದ್ರಕ್ಕೆ ರೈತರ ಪಟ್ಟಿಕೊಟ್ಟಿಲ್ಲ ಎಂದು ಒಪ್ಪಿಕೊಂಡ ಸಚಿವ
ಬೆಂಗಳೂರು[ಮಾ.07]: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ‘ರಿಮೋಟ್ ಸಿಎಂ’ ಎಂದು ಟೀಕಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಯಾರೋ ಬರೆದುಕೊಟ್ಟಿದ್ದನ್ನು ಓದಿದ್ದಾರೆ. ಇದು ಅವರ ಹುದ್ದೆಗೆ ಶೋಭೆ ತರುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರ ಬಗ್ಗೆ ನನಗೆ ಗೌರವ ಇದೆ. ಆದರೆ, ಒಬ್ಬ ಪ್ರಧಾನಿ ಹುದ್ದೆಯಲ್ಲಿರುವವರು ಯಾರೋ ಬರೆದುಕೊಟ್ಟಿದ್ದನ್ನು ಓದುವುದು, ಸುಳ್ಳು ಹೇಳುವುದು ಅವರ ಹುದ್ದೆಗೆ ತಕ್ಕುದಲ್ಲ. ನಿಜವಾದ ಮಾಹಿತಿ ಪಡೆದು ಮಾತನಾಡಬೇಕು. ರೈತರ ಸಾಲ ಮನ್ನಾ ಸೇರಿದಂತೆ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ಬಿಜೆಪಿ ನಾಯಕರು ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.
ಮೈತ್ರಿ ಸರ್ಕಾರ ರೈತರನ್ನು ನಿರ್ಲಕ್ಷಿಸುತ್ತಿದೆ, ‘ಪ್ರಧಾನಮಂತ್ರಿ ಕಿಸಾನ್’ ಯೋಜನೆಗೆ ರೈತರ ಪಟ್ಟಿಕೊಟ್ಟಿಲ್ಲ ಎಂದು ಪ್ರಧಾನಿ ಆರೋಪಿಸಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಫೆ.1ರಂದು ಮಂಡನೆಯಾದ ಕೇಂದ್ರ ಸರ್ಕಾರದ ಬಜೆಟ್ನಲ್ಲಿ ಆ ಯೋಜನೆ ಘೋಷಿಸಲಾಗಿದೆ. ಇಷ್ಟುಬೇಗ ಪಟ್ಟಿಒದಗಿಸಲಾಗುತ್ತದಾ? ಕೇಂದ್ರದಿಂದ ಸೂಚನೆ ಬರಬೇಕು. ನಂತರ ಸರ್ಕಾರ ರೈತರಿಂದ ಮಾಹಿತಿ ಪಡೆದು ಸಲ್ಲಿಸಬೇಕು. ಕೇಂದ್ರ ಸರ್ಕಾರ ಯೋಜನೆ ಘೋಷಣೆಗೂ ಮೊದಲೇ ಮಾಹಿತಿ ತರಿಸಿಕೊಳ್ಳಬೇಕಿತ್ತು ಎಂದರು.