
ಸಿರ್ಸಾ(ಅ.07): ಅತ್ಯಾಚಾರ ಪ್ರಕರಣಗಳಲ್ಲಿ ಸ್ವಯಂಘೋಷಿತ ದೇವಮಾನವ ಬಾಬಾ ರಾಮ್ ರಹೀಂ ಅಪರಾಧ ಸಾಬೀತಾಗಿ ಈಗಾಗಲೇ ಜೈಲು ಪಾಲಾಗಿದ್ದಾರೆ. ಆದರೆ ಇವರನ್ನು ಬಂಧಿಸಿದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರಕ್ಕೆ ಅವರ 'ದತ್ತು ಪುತ್ರಿ' ಹನಿಪ್ರೀತ್ ಪ್ರಚೋದನೆ ನೀಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಆದರೆ ಈ ವಿಚಾರ ಬಯಲಾಗುತ್ತಿದ್ದಂತೆಯೇ ಹನಿಪ್ರೀತ್ ನಿಗೂಢವಾಗಿ ನಾಪತ್ತೆಯಾಗಿದ್ದಳು. ಈಕೆಗಾಗಿ ಪೊಲೀಸರು ಭಾರೀ ಶೋಧ ನಡೆಸಿದ್ದರು. ಆದರೂ ಏನೂ ಪ್ರಯೋಜನವಾಗಿರಲಿಲ್ಲ. ಇದೀಗ ಬರೋಬ್ಬರಿ 38 ದಿನಗಳ ಬಳಿಕ ಹನಿಪ್ರೀತ್'ಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆದರೆ ಇದೀಗ ಆಕೆಯನ್ನು ವಿಚಾರಣೆ ನಡೆಸಿದಾಗ ಹಲವಾರು ಬೆಚ್ಚಿ ಬೀಳಿಸುವ ಸತ್ಯಗಳು ಬಯಲಾಗಿವೆ.
ರಾಜ್ಯ ದ್ರೋಹ, ಹಿಂಸಾಚಾರಕ್ಕೆ ಪ್ರಚೋದನೆ ಆರೋಪದ ಮೇಲೆ ತೀವ್ರ ಹುಡುಕಾಟದ ಬಳಿಕ ಬಾಬಾ ದತ್ತು ಪುತ್ರಿ ಹನಿಪ್ರೀತ್ ಕೊನೆಗೂ ಬಂಧಿತಳಾಗಿದ್ದಾಳೆ. ಆದರೆ ಈಕೆಯ ಬಂಧನದ ಬಳಿಕವೂ ಪೊಲೀಸರ ತಲೆ ನೋವು ಮಾತ್ರ ಕಡಿಮೆಯಾಗಿಲ್ಲ. ಯಾಕೆಂದರೆ ಕಳೆದ ಮೂರು ದಿನಗಳಿಂದ ಪೊಲೀಸರು ವಿಚಾರಣೆ ನಡೆಸುತ್ತಿದ್ದರೂ ಹನಿಪ್ರೀತ್ ಮಾತ್ರ ಯಾವುದೇ ವಿಚಾರವನ್ನು ಬಾಯಿ ಬಿಡಲು ತಯಾರಿಲ್ಲ. ಸದ್ಯಕ್ಕೀಗ ಕೆಯ ಬಳಿ ಕೇಳಿ 40 ಪ್ರಶ್ನೆಗಳಲ್ಲಿ ಕೇವಲ ರಡು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾಳೆ. ಈ ವೇಳೆ ತಾನು ಬಂಧನದಿಂದ ತಪ್ಪಿಸಿಕೊಳ್ಳಲು ಹೂಡಿದ ಪ್ಲಾನ್ ತಿಳಿಸಿದ್ದಾಳೆ.
ವಿಚಾರಣೆ ಸಂದರ್ಭದಲ್ಲಿ ಕಳೆದ 38 ದಿನಗಳಲ್ಲಿ 17 ಸಿಮ್ ಕಾರ್ಡ್ ಬಳಕೆ ಮಾಡಿರುವುದಾಗಿ ತಿಳಿಸಿದ್ದಾಳೆ. ಇದನ್ನು ಕೆಲಿದ ಪೊಲೀಸರಿಗೇ ಶಾಕ್ ಆಗಿದೆ. ಇನ್ನುಳಿದ ಪ್ರಶ್ನೆಗಳಿಗೆ ಆಕೆ ಉತ್ತರಿಸಲು ಸಹಕರಿಸದಿರುವುದರಿಂದ ಆಕೆಯನ್ನು ಸುಳ್ಳು ಪತ್ತೆ ಪರೀಕ್ಷೆ(ನಾರ್ಕೋ ಟೆಸ್ಟ್)ಗೆ ಒಳಪಡಿಸಿ ತನಿಖೆ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.