
ಬೆಂಗಳೂರು: ಪರಿಶಿಷ್ಟರಿಗೆ ಸಂಬಂಧಿಸಿದ ಎಸ್ಸಿಪಿ-ಟಿಎಸ್ಪಿ ಅನುದಾನ ಬಳಕೆ ಮಾಡದ ಇಲಾಖೆಗಳ ಮುಖ್ಯಸ್ಥ ಹಿರಿಯ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸಲು ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ.
ಕಳೆದ 4 ವರ್ಷಗಳಲ್ಲಿ ಎಸ್ಸಿಪಿ (ವಿಶೇಷ ಘಟಕ ಯೋಜನೆ) ಹಾಗೂ ಟಿಎಸ್ಪಿ (ಬುಡಕಟ್ಟು ಉಪ ಯೋಜನೆ) ಯೋಜನೆಗಳಲ್ಲಿ ನಿರೀಕ್ಷಿತ ಸಾಧನೆ ಮಾಡದ ಇಲಾಖೆ ಮುಖ್ಯಸ್ಥರಿಗೆ ನೋಟಿಸ್ ನೀಡಿ, ಕಠಿಣ ಕ್ರಮ ಕೈಗೊಳ್ಳುವುದಕ್ಕೂ ಮುಂದಾಗಿದೆ. ಹಾಗೆಯೇ ಇದಕ್ಕೆ ಅಡ್ಡಿ ಬರುವ ಕಾನೂನುಗಳಿಗೆ ತಿದ್ದುಪಡಿ ತರುವ ಬಗ್ಗೆ ಚರ್ಚೆ ನಡೆದಿದೆ.
ವಿಧಾನಸೌಧದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟಜಾತಿ ಮತ್ತು ಪಂಗಡಗಳ ರಾಜ್ಯ ಅಭಿವೃದ್ಧಿ ಪರಿಷತ್ತಿನ ಸಭೆಯಲ್ಲಿ ಎಲ್ಲಾ 36 ಇಲಾಖೆಗಳಲ್ಲಿ ಎಸ್ಸಿಪಿ, ಟಿಎಸ್ಪಿ ಸಾಧನೆಗಳ ಪ್ರಗತಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಅನೇಕ ಇಲಾಖೆಗಳು ಅನುದಾನ ಬಳಸುವಲ್ಲಿ ಹಿಂದೆ ಬಿದ್ದಿರುವ ಬಗ್ಗೆ ಸಿಎಂ ಸಿಟ್ಟಾದರು. ಅನುದಾನವನ್ನು ಬಳಸದೆ ಬಾಕಿ ಉಳಿಸಿಕೊಂಡಿರುವ ಇಲಾಖೆಗಳ ಆಯುಕ್ತರು, ಕಾರ್ಯದರ್ಶಿಗಳು ಮತ್ತು ನಿರ್ದೇಶಕರಿಗೆ ಹಾಗೂ ಮುಖ್ಯಸ್ಥರಿಗೆ ನೋಟಿಸ್ ನೀಡುವಂತೆ ಸೂಚಿಸಿದರು.
ಸಣ್ಣ ನೀರಾವರಿ ಇಲಾಖೆಯಲ್ಲಿ ಸಾಕಷ್ಟುಅನುದಾನ ನೀಡಿದರೂ ಅದು ಸರಿಯಾಗಿ ಬಳಕೆಯಾಗದೆ ಪರಿಶಿಷ್ಟಜಾತಿ, ವರ್ಗಗಳಿಗೆ ಸಿಗುತ್ತಿಲ್ಲ. ಇದಕ್ಕೆ ಕಾರಣವಾದ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸಿಎಂ ಆದೇಶಿಸಿದರು. ಕಾನೂನು ಇಲಾಖೆಗೆ ನೀಡಿದ್ದ ಅನುದಾನದಲ್ಲಿ ಬಿಡಿಗಾಸೂ ವೆಚ್ಚವಾಗದಿರುವುದು ಅವರ ಅಸಮಾಧಾನಕ್ಕೆ ಕಾರಣವಾಯಿತು.
ಎಸ್'ಸಿಪಿ-ಟಿಎಸ್'ಪಿ ಅನುದಾನ ಬಳಕೆಯಲ್ಲಿ ಮಾಹಿತಿ ತಂತ್ರಜ್ಞಾನ, ಅರಣ್ಯ, ಸಾರಿಗೆ, ಕೈಮಗ್ಗ ಮತ್ತು ಜವಳಿ, ಕೈಗಾರಿಕೆ, ಭಾರೀ ನೀರಾವರಿ ಸೇರಿದಂತೆ 7 ಇಲಾಖೆಗಳು ಮಾತ್ರ ಶೇ.100ರಷ್ಟುಸಾಧನೆ ಮಾಡಿದೆ. ಆದರೆ ಕಾನೂನು ಇಲಾಖೆ ಈ ವಿಚಾರದಲ್ಲಿ ಶೂನ್ಯ ಸಾಧನೆ ಮಾಡಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಟ್ಟು ತರಿಸಿದೆ. ಕಾನೂನು ಇಲಾಖೆ ಒಂದು ಪೈಸೆಯನ್ನೂ ವೆಚ್ಚ ಮಾಡದೆ ಶೂನ್ಯ ಸಾಧನೆ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.