ಸರಕಾರಿ ವೈದ್ಯ ವೃತ್ತಿ ಆಯ್ದುಕೊಳ್ಳುವವರ ಸಂಖ್ಯೆಯೇ ಕಡಿಮೆಯಾಗಿದೆ. ಈ ಬೆನ್ನಲ್ಲೇ ವೈದ್ಯರನ್ನು ಆಕರ್ಷಿಸಲು ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದ ಸರಕಾರವೀಗ ಅವರ ಪ್ರೋತ್ಸಾಹ ಧನ ಹೆಚ್ಚಳಕ್ಕೂ ಮುಂದಾಗಿದೆ.
ಬೆಂಗಳೂರು: ರಾಜ್ಯದಲ್ಲಿ ‘ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ’(ಎಬಿ-ಎಕೆ) ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಿಗೆ ಬರುವ ಆದಾಯದಲ್ಲಿ ಶೇ.30ರಷ್ಟುಮೊತ್ತವನ್ನು ವೈದ್ಯರು ಹಾಗೂ ಸಿಬ್ಬಂದಿಗೆ ಪ್ರೋತ್ಸಾಹಧನದ ರೂಪದಲ್ಲಿ ನೀಡಲು ನಿರ್ಧರಿಸಲಾಗಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಬಿ-ಎಕೆ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳು ಗಳಿಸುವ ಆದಾಯದಲ್ಲಿ ಶೇ.10 ರಷ್ಟುಪ್ರೋತ್ಸಾಹ ಧನವನ್ನು ವೈದ್ಯರು ಹಾಗೂ ಸಿಬ್ಬಂದಿಗೆ ನೀಡಲಾಗುತ್ತಿತ್ತು. ಈಗ ಅದನ್ನು ಶೇ.30ಕ್ಕೆ ಏರಿಸಿ ವೈದ್ಯರನ್ನು ಉತ್ತೇಜಿಸಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.
ಎಬಿ-ಎಕೆ ಯೋಜನೆ ಅನುಷ್ಠಾನಗೊಂಡ ಬಳಿಕ ಬಿಪಿಎಲ್ ಪಡಿತರ ಚೀಟಿದಾರರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಜತೆಗೆ ಬಿಪಿಎಲ್ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಗಳಲ್ಲಿ 5 ಲಕ್ಷ ರು.ವರೆಗೆ ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುತ್ತಿದೆ.
ಆಯುಷ್ಮಾನ್ ಕಾರ್ಡ್ ನಡೆಯೋಲ್ಲ, ಇದು ರಾಹುಲ್ ಆಸ್ಪತ್ರೆ
ಇದೇ ವೇಳೆ ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಚಿಕಿತ್ಸೆಗೆ ಸುವರ್ಣ ಆರೋಗ್ಯ ಟ್ರಸ್ಟ್ನಿಂದ ದರ ನಿಗದಿ ಮಾಡಿದ್ದು, ಆಸ್ಪತ್ರೆಗಳು ಫಲಾನುಭವಿಗಳಿಗೆ ಚಿಕಿತ್ಸೆ ನೀಡಿದ ಬಳಿಕ ಸುವರ್ಣ ಆರೋಗ್ಯ ಟ್ರಸ್ಟ್ನಿಂದ ಆಯಾ ಆಸ್ಪತ್ರೆಗಳಿಗೆ ಹಣ ಸಂದಾಯ ಮಾಡಲಾಗುತ್ತದೆ. ಈ ರೀತಿ ಯೋಜನೆ ಜಾರಿಯಾದ ದಿನದಿಂದ ಸರ್ಕಾರಿ ಆಸ್ಪತ್ರೆಗಳಿಗೆ 147 ಕೋಟಿ ರು. ಆದಾಯ ಬಂದಿದೆ. ಈ ಆದಾಯದಲ್ಲಿ ಶೇ. 50 ರಷ್ಟುಅನುದಾನವನ್ನು ಆಸ್ಪತ್ರೆ ಅಭಿವೃದ್ಧಿಗೆ ಹಾಗೂ ಶೇ.10 ರಷ್ಟುಹಣವನ್ನು ವೈದ್ಯರು ಹಾಗೂ ಸಿಬ್ಬಂದಿಗೆ ಪ್ರೋತ್ಸಾಹ ಧನದ ರೂಪದಲ್ಲಿ ನೀಡಲಾಗುತ್ತಿತ್ತು.
ಆಯುಷ್ಮಾನ್ ಭಾರತ್: ಕೊಟ್ಟಷ್ಟು ಲಾಭ ಮಾಡಿಕೊಂಡಿದ್ದೀರಾ?
ಇದೀಗ ವೈದ್ಯರು ಹಾಗೂ ಸಿಬ್ಬಂದಿಗೆ ಪ್ರೋತ್ಸಾಹ ನೀಡಲು ಪ್ರೋತ್ಸಾಹ ಧನದ ಮಿತಿಯನ್ನು ಶೇ.30ರವರೆಗೆ ಹೆಚ್ಚಳ ಮಾಡಲಾಗಿದೆ. ಉಳಿದಂತೆ ಶೇ.50 ರಷ್ಟುಹಣ ಆಸ್ಪತ್ರೆಗಳ ಅಭಿವೃದ್ಧಿ, ಶೇ.20 ರಷ್ಟುಹಣ ರಾಜ್ಯ ನಿಧಿಗೆ ಸಂದಾಯವಾಗಲಿದೆ. ಪ್ರೋತ್ಸಾಹ ಧನ ಹಂಚಿಕೆ ಸಂಬಂಧ ಶೀಘ್ರದಲ್ಲೇ ನಿಯಮ ರೂಪಿಸಿ ಜಾರಿಗೊಳಿಸಲಾಗುವುದು ಎಂದರು.