
ಸಿದ್ದಾಪುರ: ಒಳ್ಳೆಯ ಕೆಲಸಗಳನ್ನು ಅವರು ಮಾಡಲಿ, ಇವರು ಮಾಡಲಿ ಎಂದು ಕಾಯುತ್ತಾ ಕೂರುವುದು ಸರಿಯಲ್ಲ. ಉತ್ತಮ ಹಾಗೂ ಆಗಬೇಕಾದ ಕಾರ್ಯಗಳನ್ನು ನಾವೇ ಮಾಡಬೇಕು. ಹಾಗಾಗಿ ಈ ಕಾರ್ಯಕ್ಕೆ ನಾವು ತೊಡಗಿಸಿಕೊಂಡೆವು. ಇದನ್ನು ಮಾದರಿಯಾಗಿಸಿಕೊಂಡು ಊರು ಊರುಗಳಲ್ಲಿ ಗೋಶಾಲೆಗಳನ್ನು ನಿರ್ಮಾಣ ಮಾಡುವ ಕಾರ್ಯ ನಡೆಯಬೇಕಾಗಿದೆ. ಗೋಶಾಲೆಗಳು ಹಲವಿದೆ, ಆದರೆ ಜಗತ್ತಿನ ಏಕೈಕ ಗೋಸ್ವರ್ಗ ಇದಾಗಿದೆ.
ಗೋವಿನ ನೋವಿಗೆ ಅಂತ್ಯ ಹಾಡಲು, ಗೋಸೌಖ್ಯ ಕೇಂದ್ರಿತ ಗೋದಾಮ ನಿರ್ಮಿಸಲು ಸಂಕಲ್ಪಿಸಿದೆವು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳು ಹೇಳಿದರು. ಅವರು ಸಿದ್ದಾಪುರ ಸಮೀಪದ ರಾಮದೇವ ಬಾನ್ಕುಳಿ ಮಠದಲ್ಲಿ ನಿರ್ಮಾಣವಾಗಿರುವ ಜಗತ್ತಿನ ಮಾದರಿ ಗೋಶಾಲೆ 'ಗೋಸ್ವರ್ಗ'ದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಗೋವಿಗೆ ಗೋಗ್ರಾಸ ನೀಡಿ ಆಶೀರ್ವಚನ ನೀಡಿದರು.
ಎಂಬತ್ತು ದಿನಗಳಲ್ಲಿ ಗೋಸ್ವರ್ಗ ನಿರ್ಮಾಣವಾಗಿದ್ದು ಗೋಪ್ರೇಮಿಗಳ ಶಕ್ತಿಯ ಪ್ರತೀಕ. ಇಲ್ಲಿ ನಾವು ನಿಮಿತ್ತ ಮಾತ್ರ. ಯಾವುದೋ ದೈವಶಕ್ತಿಯ ಅನುಗ್ರಹದಿಂದ ಇದು ಸಾಧ್ಯವಾಗಿದೆ. ದೇವ ಸಂಕಲ್ಪ ಇದ್ದಾಗ ಆ ಕಾರ್ಯ ಸಾಧ್ಯವಾಗುತ್ತದೆ ಎನ್ನುವುದಕ್ಕೆ ಇದು ಉದಾಹರಣೆ. ಇಂದು ನಾಡಿನಲ್ಲಿ ಗೋಪ್ರೇಮಿಗಳ ಸಂಖ್ಯೆ ಹಾಗೂ ಗೋಪ್ರೇಮ ವೃದ್ಧಿಯಾಗುತ್ತಿರುವುದು ಸಂತಸದ ವಿಚಾರ. ಇಂದು ಇರುವ ಗೋಸ್ವರ್ಗ ಕೃಷ್ಣ ಶಿಶು ಮಾತ್ರ. ಮುಂದಿನ ದಿನಗಳಲ್ಲಿ ಗೋಸ್ವರ್ಗದ ವಿಶ್ವರೂಪ ದರ್ಶನವಾಗಲಿದೆ. ಯಾವುದು ಸರಿಯೋ ಅದನ್ನು ಮಾಡಬೇಕು. ಸಾಧ್ಯಾಸಾಧ್ಯತೆಯ ಕುರಿತು ಚಿಂತಿಸಬಾರದು. ಕಾರ್ಯಗಳನ್ನು ಮಾಡುವಾಗ ಅಪವಾದ- ಆಪತ್ತು - ವಿಪತ್ತುಗಳು ಎದುರಾಗಬಹುದು, ಆದರೆ ನಾವು ಸರಿಯಾದ ಕಾರ್ಯಗಳನ್ನು ಎಡಬಿಡದೇ ಮಾಡಬೇಕು ಎಂದರು. ಶ್ರೀಶೈಲ ಜಗದ್ಗುರು ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಗೋಸಂದೇಶನೀಡಿದರು.
ಈ ವೇಳೆ ಲಕ್ಷ ಗೋಗಂಗಾರತಿಯನ್ನುಸಲ್ಲಿಸಲಾಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.