
ನವದೆಹಲಿ: ‘145 ತಿರುವುಗಳಿರುವ ಕಾರಣ ಕಾರ್ಯಸಾಧುವಲ್ಲ’ ಎಂಬ ಕಾರಣಕ್ಕೆ ನನೆಗುದಿಗೆ ಬಿದ್ದಿದ್ದ ಚೆನ್ನೈ-ಮೈಸೂರು ಹೈಸ್ಪೀಡ್ ರೈಲು ಯೋಜನೆಗೆ ಮರುಜೀವ ಬಂದಿದೆ.
ಉಭಯ ನಗರಗಳ ಪ್ರಯಾಣ ಅವಧಿಯನ್ನು 2030ರ ವೇಳೆಗೆ 5 ತಾಸಿನಷ್ಟುಕಡಿತಗೊಳಿಸುವ ಈ ಯೋಜನೆಯ ಕಾರ್ಯಸಾಧು ವರದಿಯನ್ನು ರೈಲ್ವೆ ಮಂಡಳಿಗೆ ಜರ್ಮನಿ ಸರ್ಕಾರ ಸಲ್ಲಿಸಿದೆ. ರೈಲ್ವೆ ಮಂಡಳಿ ಅಧ್ಯಕ್ಷ ಅಶ್ವನಿ ಲೋಹಾನಿ ಅವರಿಗೆ ಜರ್ಮನಿ ರಾಯಭಾರಿ ಮಾರ್ಟಿನ್ ನೇ ಅವರು, 435 ಕಿ.ಮೀ. ಉದ್ದದ ಈ ಮಾರ್ಗದ ಅಧ್ಯಯನ ನಡೆಸಿದ ವರದಿಯನ್ನು ಶುಕ್ರವಾರ ಸಲ್ಲಿಸಿದರು.
ಗಂಟೆಗೆ 320 ಕಿ.ಮೀ. ವೇಗದಲ್ಲಿ ಸಾಗುವ ಈ ರೈಲು ಚೆನ್ನೈನಿಂದ ಮೈಸೂರಿಗೆ ಕೇವಲ 2.20 ತಾಸಿನಲ್ಲಿ ಕ್ರಮಿಸಲಿದೆ. ಹಾಲಿ ಇರುವ ಸಾಮಾನ್ಯ ರೈಲು ಮಾರ್ಗದಲ್ಲಿ ಇಷ್ಟೇ ದೂರವನ್ನು ಕ್ರಮಿಸಲು ರೈಲುಗಳು ಸುಮಾರು 7 ತಾಸು ತೆಗೆದುಕೊಳ್ಳುತ್ತಿವೆ.
ಯೋಜನೆಯ ಪ್ರಕಾರ, ಚೆನ್ನೈ-ಅರಕ್ಕೋಣಂ-ಬೆಂಗಳೂರು-ಮೈಸೂರು ಮಾರ್ಗದ ಶೇ.85 ಭಾಗ ಎತ್ತರಿಸಿದ ಮಾರ್ಗವಾಗಲಿದೆ. ಶೇ.11ರಷ್ಟುಗುಹೆಗಳು ಈ ಮಾರ್ಗದಲ್ಲಿರಲಿವೆ. ಬೆಂಗಳೂರು-ಚೆನ್ನೈ ಪ್ರಯಾಣ ಅವಧಿ 100 ನಿಮಿಷಕ್ಕೆ, ಬೆಂಗಳೂರು-ಮೈಸೂರು ಪ್ರಯಾಣ ಅವಧಿಯನ್ನು 40 ನಿಮಿಷಕ್ಕೆ ತಗ್ಗಿಸಲಿದೆ ಎಂದು ಹೇಳಿದರು.
‘ಜರ್ಮನಿ ಸರ್ಕಾರವೇ ಹಣ ವಿನಿಯೋಗಿಸಿ ಅಧ್ಯಯನ ಮಾಡಿ ಕಾರ್ಯಸಾಧು ವರದಿ ಸಲ್ಲಿಸಿದೆ. ಇದು ಇಂತಹ ಮಾರ್ಗ ಅತ್ಯವಶ್ಯಕವಾಗಿರುವ ಮಾರ್ಗವಾಗಿದ್ದು, ಸಂಚಾರ ಸಮಸ್ಯೆಗೆ ಪರಿಹಾರ ಒದಗಿಸಲಿದೆ. ಸುಮಾರು 1 ಲಕ್ಷ ಕೋಟಿ ರುಪಾಯಿ ಖರ್ಚು ಇದರಿಂದ ತಗುಲಲಿದೆ’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ