ಸಲಿಂಗಕಾಮವನ್ನು ನಿಷೇಧಿಸುವ ಪರಿಚ್ಛೇದ 377 ರದ್ದಾಯಿತು ಎಂದರೆ, ಈ ಸಮುದಾಯದ ವಿರುದ್ಧದ ಸಾಮಾಜಿಕ ಕಳಂಕ ಹಾಗೂ ತಾರತಮ್ಯ ಕೂಡ ನಿವಾರಣೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ನವದೆಹಲಿ : ಸಲಿಂಗಕಾಮವನ್ನು ನಿಷೇಧಿಸುವ ಪರಿಚ್ಛೇದ 377 ರದ್ದಾಯಿತು ಎಂದರೆ, ಈ ಸಮುದಾಯದ ವಿರುದ್ಧದ ಸಾಮಾಜಿಕ ಕಳಂಕ ಹಾಗೂ ತಾರತಮ್ಯ ಕೂಡ ನಿವಾರಣೆಯಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಈ ಮೂಲಕ, ನಿಷೇಧ ರದ್ದಾಗಬಹುದು ಎಂಬ ಸುಳಿವು ನೀಡಿದೆ.
ಗುರುವಾರ ಕೂಡ ಸಲಿಂಗಕಾಮ ನಿಷೇಧದ ವಿರುದ್ಧ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ಮುಂದುವರಿಸಿದ ಮುಖ್ಯ ನ್ಯಾಯಾಧೀಶ ನ್ಯಾ. ದೀಪಕ್ ಮಿಶ್ರಾ ಅವರಿದ್ದ ನ್ಯಾಯಪೀಠ, ‘ಸಲಿಂಗ ಸಮುದಾಯದ ವಿರುದ್ಧ ಪ್ರತಿಕೂಲ ಮತ್ತು ತಾರತಮ್ಯದ ವಾತಾವರಣವನ್ನು ಅನೇಕ ವರ್ಷಗಳಿಂದ ಸೃಷ್ಟಿಸಲಾಗಿದೆ. ಇದರಿಂದ ಈ ಜನರ ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರಿದೆ’ ಎಂದು ಕಳವಳ ವ್ಯಕ್ತಪಡಿಸಿದರು.
ಇತರರಿಗೆ ದೊರಕುವ ಯಾವುದಾದರೂ ಹಕ್ಕುಗಳು ಸಲಿಂಗ ಸಮುದಾಯಕ್ಕೆ ಸಿಗದಂತೆ ಯಾವುದಾದರೂ ಕಾನೂನುಗಳು, ನಿಯಮಗಳು ಅಡ್ಡಿಬರುತ್ತಿವೆಯೇ ಎಂದು ಪ್ರತಿಕ್ರಿಯೆ ನೀಡುವಂತೆ ಇದೇ ವೇಳೆ ನ್ಯಾಯಪೀಠವು ಸಲಿಂಗಿಗಳ ಪರ ವಕೂಲೆ ಮನೇಕಾ ಗುರುಸ್ವಾಮಿ ಅವರನ್ನು ಕೇಳಿತಾದರೂ, ‘ಅಂಥ ಯಾವ ಕಾನೂನೂ ಇಲ್ಲ’ ಎಂದು ಮನೇಕಾ ಉತ್ತರಿಸಿದರು.
ಆಗ ಪ್ರತಿಕ್ರಿಯಿಸಿದ ಪೀಠ, ಸಮಾಜದಲ್ಲೇ ಸಲಿಂಗಿಗಳ ಬಗ್ಗೆ ತಾರತಮ್ಯ ಭಾವನೆ ಇದೆ ಎಂದು ವಿಷಾದಿಸಿತು.