
ಶ್ರೀನಗರ: ಪ್ರಾಣ ರಕ್ಷಣೆ ನಿಟ್ಟಿನಲ್ಲಿ, ರಾಷ್ಟ್ರೀಯ ರೈಫಲ್ಸ್ ನ ಯೋಧರು, ಫಾರುಖ್ ಧರ್ ಎಂಬ ಕಾಶ್ಮೀರಿ ಯುವಕನೊಬ್ಬನನ್ನು ಜೀಪ್ನ ಬಾನೆಟ್ಗೆ ಕಟ್ಟಿಮಾನವ ತಡೆಗೋಡೆಯಾಗಿ ಬಳಸಿಕೊಂಡ ಪ್ರಕರಣವೊಂದು ಜಮ್ಮು ಮತ್ತು ಕಾಶ್ಮೀರದ ಬುದ್ಗಾಂನಲ್ಲಿ ನಡೆದಿದೆ. ಗುರುವಾರ ನಡೆದ ಉಪಚುನಾವಣೆಯ ವೇಳೆ ನಡೆಯಿತು ಎನ್ನಲಾದ ಈ ಘಟನೆಯ ವಿಡಿಯೋವೊಂದು ಇದೀಗ ಬಹಿರಂಗವಾಗಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.
ಘಟನೆಯ ಕುರಿತು ರಾಜಕೀಯ ಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರೆ, ಸೇನೆ ಈ ಕುರಿತು ವಿಸ್ತೃತ ತನಿಖೆಯ ಭರವಸೆ ನೀಡಿದೆ. ಮತ್ತೊಂದೆಡೆ ಸರ್ಕಾರ ಕೂಡಾ ಘಟನೆ ಕುರಿತು ವರದಿ ಕೇಳಿದೆ.
ಆಗಿದ್ದೇನು?: ಕಾಶ್ಮೀರದ ಬದ್ಗಾಂನಲ್ಲಿ ಏ.9ರ ಅನಂತನಾಗ್ ಉಚುನಾವಣೆ ದಿನ 12 ಚುನಾವಣಾ ಸಿಬ್ಬಂದಿ, 9 ಐಟಿಬಿಪಿ ಯೋಧರು ಹಾಗೂ ಇಬ್ಬರು ಪೊಲೀಸರು ವಾಹನದಲ್ಲಿ ಸಾಗುತ್ತಿದ್ದಾಗ ಮನೆಗಳ ಮೇಲೆ ನಿಂತಿದ್ದ ಮಹಿಳೆಯರು ಸೇರಿ 500 ಜನ ಸೇರಿ ಈ ತಂಡದ ಮೇಲೆ ಕಲ್ಲು ಎಸೆಯತೊಡಗಿದ್ದರು.
ಆಗ 15 ಜನರ ಸೇನಾ ಕ್ಷಿಪ್ರಪಡೆಯನ್ನು ರಕ್ಷಣೆಗೆ ಕರಿಸಿಕೊಳ್ಳಲಾಯಿತಾದರೂ, ಕಲ್ಲೆಸೆತಗಾರರ ಸಂಖ್ಯೆ ಹೆಚ್ಚಾಗುತ್ತಲೇ ಹೋಯಿತು. ಈ ವೇಳೆ ತಮ್ಮ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಕಲ್ಲೆಸೆತಗಾರರ ಕೈಯಲ್ಲಿ ಸಿಕ್ಕರೆ ಸಾವೇ ಗತಿ ಎಂದು ಸೇನೆಯವರಿಗೆ ಖಚಿತಪಟ್ಟಿತು. ಕಲ್ಲೆಸೆತಗಾರರ ಮೇಲೆ ಗುಂಡು ಹಾರಿಸುವ ಅವಕಾಶ ಇತ್ತಾದರೂ ಭಾರೀ ಪ್ರಮಾಣದಲ್ಲಿ ಸಾವು-ನೋವು ಆಗುತ್ತದೆ ಎಂದು ಆ ಸೇನಾ ತಂಡದ ಮುಂದಾಳತ್ವ ವಹಿಸಿದ್ದ ಯುವ ಕಮಾಂಡರ್ ದೂರಾಲೋಚನೆ ಮಾಡಿದರು.
ಹೀಗಾಗಿ ಕಲ್ಲು ಎಸೆಯುವವನೊಬ್ಬನನ್ನು ಹಿಡಿದು ಜೀಪಿನ ಬಾನೆಟ್ ಮುಂಭಾಗದ ಸ್ಟೆಪ್ನಿಗೆ ಕಟ್ಟಿದರು. ಆಗ ಸೇನೆಯವರ ಮೇಲೆ ಕಲ್ಲೆಸೆದರೆ ಆತನಿಗೂ ತಾಗುತ್ತಿತ್ತು. ಹೀಗಾಗಿ ಕಲ್ಲೇಟುಗಳು ತಂತಾನೇ ನಿಂತವು. ಈ ಉದ್ರಿಕ್ತ ಪ್ರದೇಶದ ಮೂಲಕ ಸೇನಾ ತಂಡ ಹಾಗೂ ಚುನಾವಣಾ ಸಿಬ್ಬಂದಿಗಳು ನಿರಾತಂಕವಾಗಿ ಸಾಗಿದರು. ಜೀಪಿನ ಸ್ಟೆಪ್ನಿಗೆ ಕಟ್ಟಲ್ಪಟ್ಟಿದ್ದ ಯುವಕನನ್ನು ಬಳಿಕ ಸೇನೆಯವರು ಪೊಲೀಸರಿಗೆ ಒಪ್ಪಿಸಿದರು.
ಶ್ರೀನಗರ: ಜಮ್ಮು-ಕಾಶ್ಮೀರದ ಬದ್ಗಾಂ ಪಟ್ಟಣದಲ್ಲಿ ಏಪ್ರಿಲ್ 9ರಂದು ನಡೆದ ಶ್ರೀನಗರ ಲೋಕಸಭಾ ಉಪಚುನಾವಣೆ ದಿನ ಸಿಆರ್ಪಿಎಫ್ ಯೋಧನೊಬ್ಬ ನನ್ನು ಥಳಿ ಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ 5 ಜನರನ್ನು ಬಂಧಿಸಲಾಗಿದೆ. ಯೋಧನನ್ನು ಪಾಕಿಸ್ತಾನ ಪರ ಧೋರಣೆ ಹೊಂದಿರುವ ಕೆಲ ಕಾಶ್ಮೀರಿ ಪುಂಡರು ಹೊಡೆದಿದ್ದರು. ಆದರೂ ತಾಳ್ಮೆ ವಹಿಸಿದ ಯೋಧ ಪುಂಡರ ಮೇಲೆ ಯಾವ ಪ್ರತೀಕಾರಕ್ಕೂ ಮುಂದಾಗದೇ ಸುಮ್ಮನಿದ್ದ. ಈ ದೃಶ್ಯವನ್ನು ಯಾರೋ ದಾರಿಹೋಕರು ಚಿತ್ರೀಕರಿಸಿ ಇಂಟರ್ನೆಟ್ನಲ್ಲಿ ಹರಿಬಿಟ್ಟಿದ್ದರು. ಇದೇ ವೇಳೆ ಘಟನೆ ನಡೆದ ದಿನ ಒಂದು ವೇಳೆ ಯೋಧರು ಸಂಯಮ ತೋರದೇ ಇದ್ದಲ್ಲಿ ಭಾರೀ ಅಪಾಯದ ಸಾಧ್ಯತೆ ಇತ್ತು. ಕೈಯಲ್ಲಿ ಶಸ್ತ್ರಾಸ್ತ್ರ ಹೊಂದಿದ್ದರೂ, ದಾಳಿಗೊಳಗಾದ ಯೋಧ ಅಪರೂಪದ ತಾಳ್ಮೆ ಪ್ರದರ್ಶಿಸಿದ್ದಾನೆ ಎಂದು ಸೇನೆಯ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.