ಪ್ರವಾಹ ಪೀಡಿತ ಕೇರಳದಲ್ಲಿ ವಿಚಿತ್ರ ವಿದ್ಯಮಾನ : ಇದೆಂತಹ ಸಂಕಷ್ಟ..?

By Web DeskFirst Published Sep 13, 2018, 8:05 AM IST
Highlights

ಪ್ರವಾಹದಿಂದ ನಲುಗಿ ನೂರಾರು ಜನರ ಸಾವು ಕಂಡ, ಕೇರಳದಲ್ಲಿ ಇದೀಗ ವಿಚಿತ್ರ ವಿದ್ಯಮಾನವೊಂದು ಘಟಿಸಿದೆ. ತಿಂಗಳುಗಟ್ಟಲೆ ಪ್ರವಾಹದ ನೀರಿನಿಂದ ತುಂಬಿದ್ದ ನದಿ ಮತ್ತು ಬಾವಿಗಳು ಇದೀಗ ಏಕಾಏಕಿ ಒಣಗಿ ಹೋಗಲು ಆರಂಭಿಸಿವೆ. 

ತಿರುವನಂತಪುರಂ: ಶತಮಾನದಲ್ಲೇ ಕಂಡುಕೇಳರಿಯದ ಮಳೆ, ಪ್ರವಾಹದಿಂದ ನಲುಗಿ ನೂರಾರು ಜನರ ಸಾವು ಕಂಡ, ಕೇರಳದಲ್ಲಿ ಇದೀಗ ವಿಚಿತ್ರ ವಿದ್ಯಮಾನವೊಂದು ಘಟಿಸಿದೆ. ತಿಂಗಳುಗಟ್ಟಲೆ ಪ್ರವಾಹದ ನೀರಿನಿಂದ ತುಂಬಿದ್ದ ನದಿ ಮತ್ತು ಬಾವಿಗಳು ಇದೀಗ ಏಕಾಏಕಿ ಒಣಗಿ ಹೋಗಲು ಆರಂಭಿಸಿವೆ. ಇದು ಈಗಾಗಲೇ ಪ್ರವಾಹ ಪೀಡಿತ ರಾಜ್ಯದಲ್ಲಿ ಪುನಾವಸತಿ ಕಾರ್ಯಗಳಿಗೆ ಹೆಣಗಾಡುತ್ತಿರುವ ರಾಜ್ಯ ಸರ್ಕಾರವನ್ನು ಹೊಸ ಸಂಕಷ್ಟಕ್ಕೆ ದೂಡಿದೆ.

ಇಂತಹ ವಿದ್ಯಮಾನಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಲು ಈಗ ಅಲ್ಲಿನ ಸರ್ಕಾರ ನಿರ್ಧರಿಸಿದೆ. ಪ್ರವಾಹ ನಂತರದ ವಿದ್ಯಮಾನಗಳ ಅಧ್ಯಯನ ನಡೆಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನಿರ್ದೇಶಿಸಿದ್ದಾರೆ. ಕೇರಳದ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ಉದ್ಭವವಾಗಿದೆ. ಅಲ್ಲದೆ, ವ್ಯಾಪಕ ಎರೆಹುಳುಗಳ ನಾಶವೂ ಕಂಡುಬಂದಿದೆ.

ಮಣ್ಣಿನ ರಚನೆಯಲ್ಲಿ ಬದಲಾವಣೆ, ಭೂಮಿ ಕ್ಷಿಪ್ರಗತಿಯಲ್ಲಿ ಒಣಗುತ್ತಿರುವುದುರಿಂದ ರೈತರು ಕಳವಳ ಪಡುವಂತಾಗಿದೆ ಎಂದು ಹಲವರು ಹೇಳಿದ್ದಾರೆ. ಕಬಿನಿ, ಪೆರಿಯಾರ್‌, ಭರತಪುಳ, ಪಂಪಾ ನದಿಗಳು ಸೇರಿದಂತೆ ಹಲವು ನದಿಗಳು ಪ್ರವಾಹದ ಸಂದರ್ಭ ಉಕ್ಕಿ ಹರಿದಿದ್ದವು, ಆದರೆ ಇದೀಗ ಅವುಗಳ ನೀರಿನ ಮಟ್ಟಅಸಹಜವಾಗಿ ಕುಸಿದಿದೆ. ಭೀಕರ ಪ್ರವಾಹದಿಂದಾಗಿ ಕೇರಳದ ವಿವಿಧ ಜಿಲ್ಲೆಗಳಲ್ಲಿ ಭೂಮಿಯ ವಿನ್ಯಾಸದಲ್ಲೂ ಬದಲಾವಣೆಗಳಾಗಿವೆ. ಇಡುಕ್ಕಿ, ವಯನಾಡ್‌ನಲ್ಲಿ ಕಿ.ಮೀ.ಗಟ್ಟಲೆ ಭೂಮಿ ಬಿರುಕು ಬಿಟ್ಟಿದೆ.

ಇನ್ನೊಂದೆಡೆ, ಪ್ರವಾಹದಿಂದಾಗಿ ಪ್ರಕೃತಿಯಲ್ಲಿ ಜೀವವೈವಿಧ್ಯಗಳ ಮೇಲೆ ಬೀರಿರುವ ಪರಿಣಾಮ ಮತ್ತು ರಚನಾತ್ಮಕ ಬದಲಾವಣೆಗಳು, ಪ್ರಾಣಿಗಳು ಮತ್ತು ಸಸ್ಯಗಳ ಮೇಲೆ ಬೀರಿರುವ ಪರಿಣಾಮಗಳ ಬಗ್ಗೆಯೂ ಪ್ರತ್ಯೇಕ ಅಧ್ಯಯನ ನಡೆಸುವಂತೆ ಮಂಡಳಿಗೆ ನಿರ್ದೇಶಿಸಲಾಗಿದೆ. ಮೇ 29ರಿಂದ ಸುರಿದ ಭೀಕರ ಮಳೆ, ಪ್ರವಾಹಕ್ಕೆ ಕೇರಳದಲ್ಲಿ 491 ಮಂದಿ ಮೃತಪಟ್ಟು, ಭಾರೀ ನಷ್ಟಗಳಾಗಿದ್ದವು.

click me!