
ಕೊಪ್ಪಳ(ಜು.01): ಎತ್ತುಗಳು ಇಲ್ಲವೆಂಬ ಕಾರಣಕ್ಕೆ ಮಗನನ್ನೇ ರೈತನೋರ್ವ ಎತ್ತಿನಂತೆ ಬಳಸಿ ಕೃಷಿ ಮಾಡುತ್ತಿರುವ ಪ್ರಕರಣವೊಂದು ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.
ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದಲ್ಲೊಂದು ಇಂತಹದ್ದೊಂದು ಮನಕಲುಕುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಗ್ರಾಮದ ದೇವಪ್ಪ ವಣಗೇರಿ ಕುಟುಂಬ ಇದೀಗ ಪಡಬಾರದ ಕಷ್ಟಪಡುತ್ತಿದೆ. ದೇವಪ್ಪನಿಗೆ ಒಟ್ಟು ಎರಡೂವರೆ ಎಕರೆ ಜಮೀನಿದೆ. ಈ ಹಿಂದೆ ಇವರ ಎತ್ತುಗಳಿದ್ದವು. ಆದರೆ ಸತತ ಬರಗಾಲ ಹಾಗೂ ಕುಟುಂಬದ ಆರ್ಥಿಕ ಸಂಕಷ್ಟದ ಹಿನ್ನಲೆಯಲ್ಲಿ ಎತ್ತುಗಳನ್ನು ಮಾರಾಟ ಮಾಡಿದ್ದಾರೆ. ಇನ್ನು ಒಟ್ಟು 9 ಜನರಿರುವ ಈ ಕುಟುಂಬದಲ್ಲಿ, ಇವರಿಗೆ ಒಂದೇ ಒಂದು ಜೊತೆ ಎತ್ತುಗಳಿಲ್ಲ. ಹೀಗಾಗಿ ದೇವಪ್ಪ ತನ್ನ ಮಗ ಶರಣಪ್ಪನ್ನನೇ ಎತ್ತನ್ನಾಗಿ ಮಾಡಿಕೊಂಡು ಕೃಷಿ ಚಟುವಟಿಕೆ ನಡೆಸುತ್ತಿದ್ದಾನೆ.
ಪ್ರತಿಯೊಂದು ಕೃಷಿ ಚಟುವಟಿಕೆಗೆ ಶರಣಪ್ಪ ನೊಗಕ್ಕೆ ತನ್ನ ಹೆಗಲು ಕೊಟ್ಟು ಎತ್ತಿನ ರೀತಿಯಲ್ಲಿ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ. ಇನ್ನು ಒಂದು ಎಕರೆ ಜಮೀನನ್ನು ಹರಗಬೇಕು ಅಂದರೆ ಕಡಿಮೆ ಎಂದರೂ ನಾಲ್ಕು ಗಂಟೆ ಬೇಕು. ಹೀಗಾಗಿ ಇಷ್ಟು ಸಮಯಗಳ ಕಾಲ ನೊಗವನ್ನು ಹೆಗಲ ಮೇಲೆ ಇಟ್ಟುಕೊಂಡರೆ ಸಾಕಷ್ಟು ಆಯಾಸ ಆಗುತ್ತದೆ. ಆದರೂ ಸಹ ಶರಣಪ್ಪ ಅನಿವಾರ್ಯವಾಗಿ ನೊಗವನ್ನು ತನ್ನ ಬೆನ್ನ ಮೇಲೆ ಇಟ್ಟುಕೊಂಡು ಎತ್ತಿನ ರೀತಿಯಲ್ಲಿ ಕೃಷಿ ಮಾಡುತ್ತಾನೆ.
ಇನ್ನು ದೇವಪ್ಪನ ಕುಟುಂಬವನ್ನು ನೋಡಿದರೆ ಗ್ರಾಮಸ್ಥರಿಗೆ ಎಲ್ಲಿಲ್ಲದ ಕನಿಕರ. ಹೀಗಾಗಿ ಇವರ ಕುಟುಂಬಕ್ಕೆ ಗ್ರಾಮಸ್ಥರ ಸಣ್ಣ ಪುಟ್ಟ ಸಹಾಯ ಮಾಡುತ್ತಲೆ ಇರುತ್ತಾರೆ. ಇನ್ನು ಬಡತನದ ಹಿನ್ನಲೆಯಲ್ಲಿ ಎತ್ತುಗಳಿಲ್ಲದೆ ಕೃಷಿ ನಡೆಸುತ್ತಿರುವ ದೇವಪ್ಪನ ಕುಟುಂಬಕ್ಕೆ ಸರ್ಕಾರದಿಂದ ಅಥವಾ ಯಾರಾದರೂ ದಾನಿಗಳು ಮುಂದೆ ಬಂದು ಎತ್ತುಗಳನ್ನು ನೀಡಬೇಕು ಎಂದು ರೈತ ಶರಣಪ್ಪ ಹಾಗೂ ಗ್ರಾಮಸ್ಥರು ಮನವಿ ಮಾಡುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.