ಕಲಾಲೋಕದ ಒಂದು ಕೊಂಡಿ ಕಳಚಿದೆ. ಮಹಾನ್ ನಾಯಕರನ್ನು ತಮ್ಮ ಕಲಾಕೃತಿಗಳ ಮೂಲಕ ಹಸಿರಾಗಿರಿಸಿದ್ದ ಕಲಾವಿದ ಭೀಮರಾವ್ ಮುರಗೋಡ್[75] ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಬೆಂಗಳೂರು(ಅ.5] ಭಾರತದ ಬಹುತೇಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳನ್ನು ತಮ್ಮ ಮುಂದೆ ಕೂರಿಸಿಕೊಂಡು ಅವರ ಚಿತ್ರ ರಚಿಸಿದ್ದ ಕಲಾವಿದ ಭೀಮರಾವ್ ಮುರಗೋಡ್[75] ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಮುರಗೋಡ್ ಅವರಿಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿದ್ದವು. ಭೀಮರಾವ್ ಮುರಗೋಡ್ ಅವರಿಗೆ ಪುತ್ರರಾದ ಸ್ವರೂಪ್ ಮುರಗೋಡ್, ಸಾಮ್ರಾಟ್ ಗೌತಮ್ ಹಾಗೂ ಪುತ್ರಿ ಮೊನಾಲಿಸಾ ವಿನಯ್ ಮತ್ತು ಪತ್ನಿ ಶಾಲಿನಿ ಮುರಗೋಡ್ ಇದ್ದಾರೆ. ಅಂತ್ಯಕ್ರಿಯೆ ಹುಟ್ಟೂರು ಗೋಕಾಕ್ನಲ್ಲಿ ನಡೆಯಲಿದೆ.
ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದ ಅವರು, ಸುಮಾರು 4 ದಶಕಗಳ ಕಾಲ ನವದೆಹಲಿಯಲ್ಲಿ ಇದ್ದರು. 2000ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಭೇಟಿ ನೀಡಿದ್ದಾಗ ಅವರಿಗಾಗಿಯೇ, ಅವರದ್ದೇ ಕಲಾಕೃತಿ ರಚಿಸಿದ್ದರು. 1978ರಲ್ಲಿ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಭೇಟಿ ನೀಡಿದ್ದಾಗ ಅವರ ಕಲಾಕೃತಿಯನ್ನು ಬಿಡಿಸಿದ್ದರು.
ಮದರ್ ಥೆರೇಸಾ, ಪೋಪ್ ಜಾನ್ ಪೌಲ್-2, ಇಂದಿರಾ ಗಾಂಧಿ, ಪಂಡಿತ್ ರವಿಶಂಕರ್, ರಾಜಾ ರಾಮಣ್ಣ, ಎಂ.ಎಫ್ ಹುಸೇನ್ ಸೇರಿದಂತೆ ಅನೇಕ ಗಣ್ಯರ ಕಲಾಕೃತಿ ರಚಿಸಿ ಜನಮನ್ನಣೆಗೆ ಪಾತ್ರವಾಗಿದ್ದರು.