ಮಂತ್ರಿ ರೇಸ್‌ನಲ್ಲಿರುವ ಪ್ರಭಾವಿ ಆಪ್ತನ ಪುತ್ರಿ ಲವ್ ಮ್ಯಾರೇಜ್, ಜೋಡಿಗೆ ಪ್ರಾಣಭಯ?

By Web DeskFirst Published Oct 5, 2018, 9:20 PM IST
Highlights

ಆರು ವರ್ಷಗಳಿಂದ ಒಬ್ಬರಿಗೊಬ್ಬರು ಪ್ರೀತಿಸುತ್ತಿದ್ದ ಯುವ ಪ್ರೇಮಿಗಳ ವಿವಾಹಕ್ಕೆ ಪೋಷಕರು ಅಡ್ಡಿ ಮಾಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಧಾರವಾಡ ನಗರಕ್ಕೆ ಬಂದು ಜೋಡಿ ಸಪ್ತಪದಿ ತುಳಿದಿದೆ.

ಧಾರವಾಡ[ಅ.5] ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರ ಆಪ್ತ ಕಮಲಾಕಾಂತ ನಾಯಕ ಅವರ ಪುತ್ರಿ ಯೋಗಿತಾ (19) ಮತ್ತು ಯಲ್ಲಾಪುರದ ಮಳ್ಯಾನಕೊಪ್ಪದ ವಿನಾಯಕ ಮಂಡಗೊಡ್ಲಿ (22) ಮದುವೆಯಾದವರು.

ಈ ಇಬ್ಬರು ನಗರದ ದೇವಸ್ಥಾನದಲ್ಲಿ ಹಾರ ಬದಲಾಯಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟು, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ
ಮದುವೆ ನೋಂದಣಿ ಕೂಡ ಮಾಡಿಕೊಂಡಿದ್ದಾರೆ. ಕಳೆದ ಆರು ವರ್ಷಗಳಿಂದ ಇಬ್ಬರೂ ಪ್ರೀತಿಸುತ್ತಿದ್ದರು. ಆದರೆ, ಯೋಗಿತಾ ಅವರ
ಮನೆಯಲ್ಲಿ ಇದಕ್ಕೆ ವಿರೋಧವಿತ್ತು ಎಂಬ ಮಾಹಿತಿ ಇದೆ. ಅಲ್ಲದೇ ಕಳೆದ ಎರಡು ವಾರಗಳಿಂದ ಮನೆ ಬಿಟ್ಟು ಬಂದಿದ್ದು, ಸ್ನೇಹಿತರ ಸಹಾಯದಿಂದ ಕಣ್ತಪ್ಪಿಸಿ ಅಡ್ಡಾಡುತ್ತಿದ್ದರು.

ಇತ್ತ ಶಾಸಕರ ಆಪ್ತ ಕಮಲಾಕಾಂತ ಶಾಸಕರ ಹೆಸರನ್ನು ಬಳಸಿ ಬೆದರಿಕೆ ನೀಡಿದ್ದಲ್ಲದೇ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಮ್ಮ ಮಗಳನ್ನು ಅಪಹರಣ ಮಾಡಿರುವುದಾಗಿ ವಿನಾಯಕನ ಮೇಲೆ ದೂರು ದಾಖಲಿಸಿದ್ದಾರೆ. ಜತೆಗೆ ವಿನಾಯಕ ಅವರ ಮನೆಯವರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಯೋಗಿತಾ ಮತ್ತು ವಿನಾಯಕ ಮಂಡಗೊಡ್ಲಿ ಆರೋಪಿಸಿದ್ದಾರೆ.

ತಮ್ಮ ತಂದೆಯ ಸ್ನೇಹಿತ ಶಾಸಕರು ಎನ್ನುವ ಕಾರಣಕ್ಕಾಗಿ ಎಲ್ಲಿ ಹೋದರೂ ನೆಮ್ಮದಿಯ ಜೀವನ ಮಾಡಲು ನಮ್ಮನ್ನು ಬಿಡುತ್ತಿಲ್ಲ. ಆದ್ದರಿಂದ ನಮಗೆ ರಕ್ಷಣೆ ನೀಡಬೇಕು. ನನ್ನ ಸ್ವಂತ ಇಚ್ಛೆಯಿಂದಲೇ ನಾನು ವಿನಾಯಕ ಅವರನ್ನು ಮದುವೆಯಾಗಿದ್ದೇನೆ.
ಇನ್ನಾದರೂ ನಮ್ಮನ್ನು ಬದುಕಲು ಬಿಡಿ ಎಂದು ಯೋಗಿತಾ ಹೇಳಿದ್ದು, ಇದಲ್ಲದೇ ನಮಗೆ ಪ್ರಾಣಭಯವಿದ್ದು, ರಕ್ಷಣೆ ನೀಡುವಂತೆ ಒತ್ತಾಯಿಸಿ ಅಂಚೆ ಮೂಲಕ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ಮನವಿ ಮಾಡಿದ್ದಾರೆ.

click me!