
ಕೊಪ್ಪಳ(ಜೂ.27): ಬಡ ಮಕ್ಕಳ ಪ್ರವಾಸಕ್ಕೆ ಅಂತ ಸರ್ಕಾರ ಕರ್ನಾಟಕ ದರ್ಶನ ಎಂಬ ಪ್ರವಾಸ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಕೊಪ್ಪಳ ತಾಲೂಕಿನ BEO ಮಾತ್ರ ಪ್ರವಾಸದ ಹೆಸರಲ್ಲಿ ಲಕ್ಷಗಟ್ಟಲೇ ಹಣ ಪೀಕಿದ್ದಾರೆ. ಬಡ ಮಕ್ಕಳ ಹೆಸರಿನಲ್ಲೂ ಅಧಿಕಾರಿಗಳು ತಮ್ಮ ಜೋಳಿಗೆ ತುಂಬಿಸಿಕೊಂಡಿದ್ದಾರೆ.
BEO ಉಮೇಶ್ ಪೂಜಾರ್ ಇದೇ ಜನವರಿ 22 ರಿಂದ 26 ರವರೆಗೆ 5 ದಿನಗಳವರೆಗೆ ತಾಲೂಕಿನ ಬಡ ಮಕ್ಕಳಿಗೆ ಕರ್ನಾಟಕ ದರ್ಶನ ಯೋಜನೆಯಡಿ ಪ್ರವಾಸಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಹೋದಲ್ಲೆಲ್ಲಾ ಮಕ್ಕಳಿಗೆ ದೇವಸ್ಥಾನ ಹಾಗೂ ಮಠ ಮಾನ್ಯಗಳಲ್ಲಿ ಊಟ ಮಾಡಿಸಿದ್ದಾರೆ. ಬಳಿಕ ಹೋಟೆಲ್'ಗಳಲ್ಲಿ ಅದೇ ದಿನಾಂಕದಲ್ಲಿ ನಕಲಿ ಬಿಲ್ ಸೃಷ್ಟಿಸಿ ಹಣ ಗುಳುಂ ಮಾಡಿದ್ದಾರೆ. ಇದೀಗ RTI ಕಾರ್ಯಕರ್ತ ಆನಂದ್ ಕಮತರ ಎನ್ನುವವರು RTI ಮೂಲಕ ಈ ಅಕ್ರಮ ಬಯಲಿಗೆಳೆದಿದ್ದಾರೆ.
ಹೋಟೆಲ್ ರಶೀದಿ ಹಾಗೂ ದೇವಾಲಯದಲ್ಲಿ ಊಟ ಮಾಡಿದ ರಶೀದಿ ಎರಡನ್ನೂ RTI ಕಾರ್ಯಕರ್ತ ಆನಂದ್ ಕಮತರ ಬಿಡುಗಡೆ ಮಾಡಿದ್ದಾರೆ. ಬರೀ ಇಷ್ಟು ಮಾತ್ರವಲ್ಲ. ಲೇಖನ ಸಾಮಾಗ್ರಿ, ಟಿ ಶರ್ಟ, ಟೂರ್ ಕಿಟ್'ನಲ್ಲಿಯೂ ಸಹ ಅವ್ಯವಹಾರ ನಡೆಸಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳಿಗೆ ಪ್ರವಾಸದ ಸಂದರ್ಭದಲ್ಲಿ ಪ್ರಬಂಧ, ರಸಪ್ರಶ್ನೆ, ಚರ್ಚಾಸ್ಪರ್ಧೆ ಏರ್ಪಡಿಸಬೇಕು. ಆದ್ರೆ ಬರೀ ಪ್ರಬಂಧ ಮಾತ್ರ ನಡೆಸಿ ರಸಪ್ರಶ್ನೆ, ಚರ್ಚಾಸ್ಪರ್ಧೆ'ಗಳ ಬಹುಮಾನದ ಹೆಸರಿನಲ್ಲೂ ಹಣ ಪೀಕಿದ್ದಾರೆ.
ಇದನ್ನು ಸ್ವತಃ ನಮ್ಮ ಪ್ರತಿನಿಧಿ ಪ್ರವಾಸದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಯೊಂದಿಗೆ ಫೋನ್ ಮೂಲಕ ಮಾತನಾಡಿ ಖಚಿತ ಪಡಿಸಿಕೊಂಡಿದ್ದಾರೆ. ಕರ್ನಾಟಕ ದರ್ಶನ ಹೆಸರಲ್ಲಿ ಗುಳುಂ ಮಾಡಿರುವ BEO ಉಮೇಶ್ ಪೂಜಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ, RTI ಕಾರ್ಯಕರ್ತ ಆನಂದ್ ಕಮತರ ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.