
ನೂರಾರು ಸತ್ತ ಜಾನುವಾರುಗಳನ್ನು ಲಾರಿಯಲ್ಲಿ ತುಂಬಿಕೊಂಡು ಒಂದೆಡೆ ಸುರಿಯುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
‘ರವೀಶ್ ಕುಮಾರ್-ದಿ ಫಿಯರ್ಲೆಸ್ ರಿಪೋರ್ಟರ್’ ಎಂಬ ಫೇಸ್ಬುಕ್ ಪೇಜ್ ಈ ಪೋಟೋವನ್ನು ಪೋಸ್ಟ್ ಮಾಡಿ, ‘ಮೇವಿಲ್ಲದೆ ರಾಜಸ್ಥಾನದಲ್ಲಿ ನೂರಾರು ಜಾನುವಾರುಗಳು ಮೃತಪಟ್ಟಿವೆ. ಇಲ್ಲಿ ಗೋವಿನ ಹೆಸರಲ್ಲಿ ವೋಟು ಕೇಳುತ್ತಿದ್ದಾರೆ’ ಎಂದು ಒಕ್ಕಣೆ ಬರೆಯಲಾಗಿದೆ.
ಈ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಆದರೆ ನಿಜಕ್ಕೂ ರಾಜಸ್ಥಾನದಲ್ಲಿ ಮೇವಿಲ್ಲದೆ ಇಷ್ಟೊಂದು ಜಾನುವಾರುಗಳು ಮೃತಪಟ್ಟವೇ ಎಂದು ಇಂಡಿಯಾ ಟು ಡೇ ಆ್ಯಂಟಿ ಫೇಕ್ ನ್ಯೂಸ್ ವಾರ್ ರೂಮ್ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ, ಈ ಫೋಟೋ ರಾಜಸ್ಥಾನದ್ದಲ್ಲ, ಬದಲಾಗಿ ಕೀನ್ಯಾ ದೇಶದ ಫೋಟೋ ಎಂದು ತಿಳಿದುಬಂದಿದೆ.
ಈ ಪೋಸ್ಟ್ ಕಳೆದ ವರ್ಷದಿಂದ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದುವರೆಗೂ ಬರೋಬ್ಬರಿ 78,000 ಬಾರಿ ಶೇರ್ ಆಗಿದೆ. ಆದರೆ ರಿವರ್ಸ್ ಇಮೇಜ್ನಲ್ಲಿ ಹುಡುಕಹೊರಟಾಗ ವಾಸ್ತವ ಬಯಲಾಗಿದೆ. 2014ರಲ್ಲಿ ‘ಈಟಿಂಗ್ ಮೈ ಎಥಿಕ್ಸ್’ ಎಂಬ ವೆಬ್ಸೈಟ್ನಲ್ಲಿ ಪ್ರಕಟವಾಗಿದ್ದ ಲೇಖನದಲ್ಲಿ ವೈರಲ್ ಆಗಿರುವ ಫೋಟೋವೇ ಇದ್ದು, ಅದರಲ್ಲಿ, ‘ ಕೀನ್ಯಾ ಮೀಟ್ ಕಮಿಷನ್ನಲ್ಲಿ ಮೇವಿಲ್ಲದೆ ಮೃತಪಟ್ಟನೂರಾರು ದನಕರುಗಳನ್ನು ಅಥಿ ನದಿಯ ಬಳಿ ಹೂಳಲಾಯಿತು’ ಎಂದು ಶೀರ್ಷಿಕೆ ಬರೆಯಲಾಗಿದೆ. ಈ ಘಟನೆ 2009ರಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಆಫ್ರಿಕಾದ ಅನೇಕ ಸುದ್ದಿ ಮಾಧ್ಯಮಗಳೂ ಈ ಬಗ್ಗೆ ವರದಿ ಮಾಡಿವೆ.
- ವೈರಲ್ ಚೆಕ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.