‘ಸಿದ್ದರಾಮಯ್ಯ ಪ್ರಧಾನಿ ಹುದ್ದೆ ಅರ್ಹತೆ ಇರುವ ವ್ಯಕ್ತಿ’

By Web DeskFirst Published May 15, 2019, 9:14 AM IST
Highlights

ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಪ್ರಧಾನಿ ಹುದ್ದೆ ಅರ್ಹತೆ ಇರುವ ವ್ಯಕ್ತಿ ಅವರ ಬಗ್ಗೆ ಮಾತನಾಡುವುದು ಸಮಂಜಸವಲ್ಲ ಎಂದು ಕಾಂಗ್ರೆಸ್ ನಾಯಕರೋರ್ವರು ಎಚ್. ವಿಶ್ವನಾಥ್ ಅವರಿಗೆ ತಿರುಗೇಟು ನೀಡಿದ್ದಾರೆ. 

ಬೆಂಗಳೂರು :  ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಕೆಲವರು ಚಮಚಾಗಿರಿ ಮಾಡುತ್ತಿದ್ದಾರೆಂಬ ಹೇಳಿಕೆ ನೀಡಿದ್ದ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿ.ವಿಶ್ವನಾಥ್‌ ವಿರುದ್ಧ ಕೆಪಿಸಿಸಿ ಕಾರ್ಯದರ್ಶಿ ಶಿವಣ್ಣ ವಾಗ್ದಾಳಿ ನಡೆಸಿದ್ದು, ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿಯಾಗುವ ಅರ್ಹತೆ ಇರುವವರು. ಇಂತಹ ನಾಯಕನ ಬಗ್ಗೆ ಮಾತನಾಡುವ ಅರ್ಹತೆ ವಿಶ್ವನಾಥ್‌ಗೆ ಇಲ್ಲ ಎಂದು ಹರಿಹಾಯ್ದಿದ್ದಾರೆ.

ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಐದು ವರ್ಷ ಪೂರ್ಣಾವಧಿ ಮುಖ್ಯಮಂತ್ರಿಯಾಗಿ ಹಲವು ಜನಪರ ಕಾರ್ಯಕ್ರಮಗಳ ಮೂಲಕ ಉತ್ತಮ ಆಡಳಿತ ನೀಡಿದವರು. ಅಹಿಂದ ವರ್ಗದ ಜನಪರ ನಾಯಕ. ಬಡತನ ನಿರ್ಮೂಲನೆ, ಸಮಾನತೆ, ಸಾಮಾಜಿನ ನ್ಯಾಯವೇ ಅವರ ಆಧ್ಯತೆ.ಅಂತಹವರು ಮತ್ತೆ ಮುಖ್ಯಮಂತ್ರಿಯಾದರೆ ರಾಜ್ಯ ಮತ್ತಷ್ಟುಅಭಿವೃದ್ಧಿಪಥದತ್ತ ಸಾಗುತ್ತದೆ. 

ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಮಾತ್ರವಲ್ಲ ಪ್ರಧಾನ ಮಂತ್ರಿಯಾಗುವ ಅರ್ಹತೆಯೂ ಇದೆ. ಸಿದ್ದರಾಮಯ್ಯ ಸರ್ಕಾರ ಸಾಧನೆಯೇನೂ ಇಲ್ಲ ಎಂಬ ಜೆಡಿಎಸ್‌ ಅಧ್ಯಕ್ಷರ ಮಾತು ಸಹ್ಯವಲ್ಲ. ಮೈತ್ರಿ ಕೂಟ ಸುಭದ್ರವಾಗಿರಬೇಕಾದರೆ ಇಂತಹ ಹೇಳಿಕೆಗಳು ಹೊರ ಬೀಳದಂತೆ ಜೆಡಿಎಸ್‌ ವರಿಷ್ಠರು ಕಡಿವಾಣ ಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಸಿದ್ದರಾಮಯ್ಯ ಅವರು ತಾವು ಮತ್ತೆ ಮುಖ್ಯಮಂತ್ರಿಯಾಗುವುದಾಗಿ ಹೇಳಿಕೆ ನೀಡಿದ್ದರಲ್ಲಿ ತಪ್ಪೇನಿಲ್ಲ. ಕಾಂಗ್ರೆಸ್‌ ಸೋತ ಮಾತ್ರಕ್ಕೆ ಸಿದ್ದರಾಮಯ್ಯ ಅವರ ಜನಪ್ರಿಯತೆ ಕುಂದಿದೆ ಎಂದಲ್ಲ. ಜನರಿಗೆ ಸಿದ್ದರಾಮಯ್ಯ ಉತ್ತಮ ಆಡಳಿತ, ಜನಪರ ಕಾರ್ಯಕ್ರಮಗಳ ಅರಿವಾಗಿದೆ. ಇದೇ ಮುಂದೆ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ನೆರವಾಗಲಿದೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.

click me!