
ನವದೆಹಲಿ(ಮಾ.12): ಪಂಚರಾಜ್ಯ ಚುನಾವಣೆ ಮುಗಿಯುತ್ತಿದ್ದಂತೆ ಪ್ರಕಟಗೊಂಡ ವಿವಿಧ ಚುನಾವಣೋತ್ತರ ಸಮೀಕ್ಷೆಗಳು ಈ ಬಾರಿಯೂ ನಿಖರ ಫಲಿತಾಂಶ ನೀಡಲು ಸಫಲವಾಗಿಲ್ಲ. ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಗೋವಾದಲ್ಲಿ ಬಿಜೆಪಿ ಮುನ್ನಡೆಗಳಿಸಲಿದೆ ಎಂದು ಬಹುತೇಕ ಸಮೀಕ್ಷೆಗಳು ಭವಿಷ್ಯ ನುಡಿದಿದ್ದರು.
ಆ ಪೈಕಿ ಟುಡೇಸ್ ಚಾಣಕ್ಯ ಉತ್ತರ ಪ್ರದೇಶದಲ್ಲಿ ಬಿಜೆಪಿ 285 ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿತ್ತು. ಅದೇ ರೀತಿ, ಇಂಡಿಯಾ ಟುಡೇ ಮತ್ತು ಟೈಮ್ಸ್ ನೌ, ಬಿಜೆಪಿ ಕ್ರಮವಾಗಿ 251ರಿಂದ 279 ಸ್ಥಾನ ಮತ್ತು 190ರಿಂದ 210 ಗಳಿಸುವ ಮೂಲಕ ಸರಳ ಬಹುಮತ ಪಡೆಯಲಿದೆ ಎಂದು ಹೇಳಿದ್ದವು. ಆದರೆ, ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಇನ್ನು ಪಂಜಾಬ್ನಲ್ಲಿ ಆಪ್ ಮತ್ತು ಕಾಂಗ್ರೆಸ್ ಮಧ್ಯೆ ತುರುಸಿನ ಪೈಪೋಟಿ ಏರ್ಪಡಲಿದೆ ಎಂಬ ಸಮೀಕ್ಷೆ ಕೂಡ ಹುಸಿಯಾಗಿದೆ.
ಟುಡೇಸ್ ಚಾಣಕ್ಯ ಪ್ರಕಟಿಸಿದ ಚುಣಾವ ಣೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್ ಮತ್ತು ಆಪ್ ಸಮನಾಗಿ 54 ಸ್ಥಾನಗಳನ್ನು ಗೆಲ್ಲಲಿವೆ ಎಂದು ಹೇಳಿತ್ತು. ಇಂಡಿಯಾ ಟುಡೇ ಕಾಂಗ್ರೆಸ್ಗೆ 62ರಿಂದ 71 ಸ್ಥಾನ ಲಭ್ಯವಾಗಲಿದೆ. ಆಪ್ 42-51 ಸ್ಥಾನಗಳನ್ನು ಪಡೆಯಲಿದೆ ಎಂದು ಭವಿಷ್ಯ ನುಡಿದಿತ್ತು. ಇಂಡಿಯಾ ನಡೆಸಿದ ಸಮೀಕ್ಷೆಯಲ್ಲಿ ಆಪ್ ಮತ್ತು ಕಾಂಗ್ರೆಸ್ಗೆ ತಲಾ 55 ಸ್ಥಾನಗಳು ಸಿಗಲಿವೆ ಎಂದು ತಿಳಿಸಲಾಗಿತ್ತು. ಉತ್ತರಾಖಂಡಲ್ಲಿ ಟುಡೇಸ್ ಚಾಣಕ್ಯ ನಡೆಸಿದ ಚುಣಾವಣೋತ್ತರ ಸಮೀಕ್ಷೆ ಬಹುತೇಕ ನಿಜವಾಗಿದೆ. ಉತ್ತರಾಖಂಡದಲ್ಲಿ ಟುಡೇಸ್ ಚಾಣಕ್ಯ ಬಿಜೆಪಿ 53 ಸ್ಥಾನಗಳನ್ನು ಗಳಿಸಿ ಅಧಿಕಾರ ಹಿಡಿಯಲಿದೆ ಎಂದು ಹೇಳಿತ್ತು. ಎಬಿಸಿ ನ್ಯೂಸ್ ಬಿಜೆಪಿ 34-42 ಸ್ಥಾನಗಳನ್ನು ಗಳಿಸಲಿದೆ ಎಂದು ಹೇಳಿದ್ದರೆ ಸಿವೋಟರ್ ಬಿಜೆಪಿಗೆ 29ರಿಂದ 35 ಸ್ಥಾನ ಸಿಗಲಿದೆ ಎಂದು ಸಮೀಕ್ಷೆಗಳು ಹೇಳಿದ್ದವು.
ಗೋವಾದಲ್ಲಿ ಚುಣಾವಣೋತ್ತರ ಸಮೀಕ್ಷೆಯಲ್ಲಿ ಅಂದಾಜಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತುರುಸಿದ ಸ್ಪರ್ಧೆ ಏರ್ಪಟ್ಟಿದೆ. ಇಂಡಿಯಾ ಟುಡೇ ಬಿಜೆಪಿ 18ರಿಂದ 22 ಸ್ಥಾನಗಳನ್ನು ಗಳಿಸಲಿದೆ. ಕಾಂಗ್ರೆಸ್ಗೆ 9ರಿಂದ 13 ದೊರೆಯಬಹುದು ಎಂದು ಹೇಳಿತ್ತು. ಇಂಡಿಯಾ ನ್ಯೂಸ್ ಬಿಜೆಪಿ 15 ಮತ್ತು ಕಾಂಗ್ರೆಸ್ 10 ಸ್ಥಾನಗಳಿಸಲಿದೆ ಎಂದು ಭವಿಷ್ಯ ನುಡಿದಿತ್ತು. ಸಿವೋಟರ್ ಬಿಜೆಪಿ 15-21 ಮತ್ತು ಕಾಂಗ್ರೆಸ್ 12-18 ಸೀಟು ಗೆಲ್ಲಲಿದೆ ಎಂದು ತಿಳಿಸಿತ್ತು. ಆದರೆ, ಗೋವಾದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಹಿಂದಿಕ್ಕಿದೆ.
ಮಣಿಪುರದಲ್ಲಿ ಯಾರಿಗೆ ಗೆಲುವು ಸಿಗಲಿದೆ ಎಂಬ ಬಗ್ಗೆ ಚುನಾವಣೋತ್ತರ ಸಮೀಕ್ಷೆಯಲ್ಲಿ ಸ್ಪಷ್ಟಚಿತ್ರಣ ಲಭ್ಯವಾಗಿರಲಿಲ್ಲ. ಸಿವೋಟರ್ ಬಿಜೆಪಿ 25-31 ಸ್ಥಾನ ಗೆಲ್ಲಲಿದೆ. ಕಾಂಗ್ರೆಸ್ 17ರಿಂದ 23 ಸ್ಥಾನ ಗಳಿಸಲಿದೆ ಎಂದು ಹೇಳಿತ್ತು. ಇಂಡಿಯಾ ಟೀವಿ ಬಿಜೆಪಿ 25 ಮತ್ತು ಕಾಂಗ್ರೆಸ್ 17 ಸ್ಥಾನಗಳಿಸಲಿದೆ ಎಂದು ಹೇಳಿದರೆ ಇಂಡಿಯಾ ಟುಡೇ ಬಿಜೆಪಿಗೆ 16ರಿಂದ 22 ಸ್ಥಾನ ಮತ್ತು ಕಾಂಗ್ರೆಸ್ಗೆ 30ರಿಂದ 36 ಸ್ಥಾನ ದೊರೆಯಲಿದೆ ಎಂದು ಅಂದಾಜಿಸಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.