ಕನ್ನಡ ಕಲಿಯದವರ ಬಗ್ಗೆ ಉದಾರತೆ ಬೇಡ: ಸಿಎಂ

By Suvarna Web DeskFirst Published Nov 2, 2017, 3:55 PM IST
Highlights

‘ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡಿಗರೇ ಆಗಿದ್ದು, ಕಡ್ಡಾ ಯವಾಗಿ ಕನ್ನಡ ಕಲಿಯದಿದ್ದರೆ ಕರ್ನಾಟಕಕ್ಕೆ ಅವಮಾನ ಮಾಡಿದಂತಾಗುತ್ತದೆ, ಹೀಗಾಗಿ ನೆಲದ ಭಾಷೆ ಕಲಿಯಲು ಅನ್ಯ ಭಾಷಿಕರು ಸಂಕಲ್ಪ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಬೆಂಗಳೂರು (ನ.02): ‘ರಾಜ್ಯದಲ್ಲಿ ವಾಸಿಸುವ ಪ್ರತಿಯೊಬ್ಬರೂ ಕನ್ನಡಿಗರೇ ಆಗಿದ್ದು, ಕಡ್ಡಾ ಯವಾಗಿ ಕನ್ನಡ ಕಲಿಯದಿದ್ದರೆ ಕರ್ನಾಟಕಕ್ಕೆ ಅವಮಾನ ಮಾಡಿದಂತಾಗುತ್ತದೆ, ಹೀಗಾಗಿ ನೆಲದ ಭಾಷೆ ಕಲಿಯಲು ಅನ್ಯ ಭಾಷಿಕರು ಸಂಕಲ್ಪ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಸಾರ್ವಜನಿಕ ಶಿಕ್ಷಣ ಇಲಾಖೆ ಬುಧವಾರ ರಾಜಧಾನಿಯ ಕಂಠೀರವ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಮತ್ತು ಮಕ್ಕಳ ಮೇಳದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕನ್ನಡ ವಾತಾವರಣ ನಿರ್ಮಾಣ ಮಾಡುವಲ್ಲಿ ವಿಫಲರಾಗಿರುವ ನಾವು, ಕನ್ನಡೇತರರನ್ನು ಪ್ರೀತಿಸುವ ಉದಾರತನ ತೋರಬೇಕೇ ಹೊರತು ಕನ್ನಡ ಕಲಿಯದವರ ಬಗ್ಗೆಯಲ್ಲ. ರಾಜ್ಯದಲ್ಲಿ ವಾಸಿಸುವವರು ‘ಮೊದಲು ಕನ್ನಡಿಗ, ನಂತರ ಭಾರತೀಯ’ ಎಂಬ ಭಾವನೆ ಎಲ್ಲರಲ್ಲಿಯೂ ಬರಬೇಕು ಎಂದರು. ತಮ್ಮ ಇಡೀ ಭಾಷಣದಲ್ಲಿ ಅವರು ರಾಜ್ಯದಲ್ಲಿ ಕನ್ನಡ ಭಾಷೆ ರಕ್ಷಣೆ, ಶಿಕ್ಷಣ ಮಾಧ್ಯಮ, ಬದಲಾದ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಭಾಷೆಯ ಮಹತ್ವ, ಸಮಾನ ಶಿಕ್ಷಣದ ಬಗ್ಗೆ ಮಾತಾಡಿದ್ದು ವಿಶೇಷವಾಗಿತ್ತು. ರಾಜ್ಯೋತ್ಸವ ವೇಳೆ ಈ ಹಿಂದಿನ ಮುಖ್ಯಮಂತ್ರಿಗಳ ಭಾಷಣಕ್ಕೆ ಹೋಲಿಸಿದರೆ ಸಿದ್ದರಾಮಯ್ಯ ಅವರ ಭಾಷಣದಲ್ಲಿ ಕನ್ನಡ ನಾಡು, ನುಡಿಯ ಬಗ್ಗೆ ದಿಟ್ಟತನ ಪ್ರದರ್ಶಿಸಿದ್ದು ಗಮನಾರ್ಹ.

ಕನ್ನಡ ಶಾಲೆ ಬಗ್ಗೆ ತಾತ್ಸಾರವೇಕೆ?: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸೀಟು ಪಡೆಯಲು ಮುಗಿಬೀಳುವ ಪೋಷಕರು, ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳು ಹಾಗೂ ಸರ್ಕಾರಿ ಶಾಲೆಗಳಿಗೆ ಕಳಿಸಲು ತಾತ್ಸಾರ ಮಾಡುವುದೇಕೆ? ಪೋಷಕರಿಗೆ ಇಂಗ್ಲಿಷ್ ಭಾಷೆ ಕುರಿತು ಹೆಚ್ಚಿನ ವ್ಯಾಮೋಹ ಇರುವುದು ಒಳ್ಳೆಯ ಪ್ರವೃತ್ತಿಯಲ್ಲ, ಮಾತೃ ಭಾಷೆಯಲ್ಲಿ ಕಲಿತಾಗ ಮಾತ್ರ ಅರ್ಥ ಮಾಡಿಕೊಳ್ಳಲು ಹಾಗೂ ಅಭಿವ್ಯಕ್ತಿಪಡಿಸುವುದು ಸುಲಭವಾ ಗುತ್ತದೆ ಎಂದರು. ಸರ್ ಎಂ. ವಿಶ್ವೇಶ್ವರಯ್ಯ, ಡಾ. ಸಿ.ಎನ್. ಆರ್. ರಾವ್ ಅವರು ಕನ್ನಡದಲ್ಲಿ ಕಲಿತು ಇಂಜಿನಿಯರ್, ವಿಜ್ಞಾನಿಗಳಾಗಿದರು. ನಾನು ಸಹ ಕನ್ನಡ ಮಾಧ್ಯಮದಲ್ಲಿ ಕಲಿತು ಇಂದು ಮುಖ್ಯಮಂತ್ರಿಯಾಗಿದ್ದೇನೆ ಎಂದು ಉದಾಹರಣೆ ನೀಡಿದರು. ರಾಜ್ಯದಲ್ಲಿರುವ ಕೆಲವು ಪೋಷಕರು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ಕೊಡಿಸಿದರೆ ಮಾತ್ರ ಮಕ್ಕಳು ಬುದ್ಧಿವಂತರಾಗುತ್ತಾರೆ ಎಂಬ ಭ್ರಮೆಯಲ್ಲಿದ್ದಾರೆ. ಸರ್ಕಾರಿ ಶಾಲೆಗಳಲ್ಲಿಯೂ ಗುಣಾತ್ಮಕ ಶಿಕ್ಷಣ ಸಿಗುತ್ತಿದೆ. ಎಂದರು. ಬ್ರೈನ್ ಯೋಗದ ಕಿರಿಕಿರಿ: ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಷಣದ ನಂತರ ಟಿ. ವಿಶ್ವನಾಥ್ ಎಂಬುವರು ದಿಢೀ ರೆಂದು ವೇದಿಕೆಯಲ್ಲಿ ಕುಳಿತ ಸ್ಥಳದಲ್ಲೇ ಬ್ರೈನ್ ಯೋಗಾಸನ ಮಾಡಿಸಿದರು. ಪೂರ್ವ ನಿಗದಿತ ವೇಳಾಪಟ್ಟಿಯಲ್ಲಿ ಬ್ರೈನ್ ಯೋಗ ಕಾರ್ಯಕ್ರಮ ಸೇರ್ಪಡೆ ಯಾಗಿರಲಿಲ್ಲ. ಆದರೂ ಸ್ಥಳದಲ್ಲೇ ಸೇರಿಸಲಾಗಿದೆ. ಕಾರ್ಯಕ್ರಮಕ್ಕೂ ಮೊದಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

click me!