
ಬೆಂಗಳೂರು: ವೇಶ್ಯಾವಾಟಿಕೆ ಗಿರಾಕಿ ವಿರುದ್ಧ ಅನೈತಿಕ ವ್ಯವಹಾರ ನಿಷೇಧ ಕಾಯ್ದೆಯಡಿ ದೂರು ದಾಖಲಿಸುವಂತಿಲ್ಲ ಎಂದು ಇತ್ತೀಚೆಗೆ ಆದೇಶಿಸಿದ್ದ ಹೈಕೋರ್ಟ್, ಇದೀಗ ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣಗಳನ್ನು ಸರ್ಕಾರದಿಂದ ನೇಮಿಸಲ್ಪಟ್ಟಿರುವ ವಿಶೇಷ ಪೊಲೀಸ್ ಅಧಿಕಾರಿ ಮಾತ್ರ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಬೇಕು ಎಂದು ತೀರ್ಪಿತ್ತಿದೆ. ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪ ಸಂಬಂಧ ತನ್ನ ವಿರುದ್ಧ ನ್ಯಾಯಾಲಯಕ್ಕೆ ಇಂದಿರಾನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಲ್ಲಿಸಿದ್ದ ದೋಷಾರೋಪ ಪಟ್ಟಿರದ್ದು ಕೋರಿ ಮಣಿಪುರದ ಮಹಿಳೆಯೊಬ್ಬರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರಿದ್ದ ಏಕಸದಸ್ಯ ಪೀಠವು, ಮಹಿಳೆ ವಿರುದ್ಧ ಸಬ್ ಇನ್ಸ್ಪೆಕ್ಟರ್ ದೊಷಾರೋಪ ಪಟ್ಟಿಸಲ್ಲಿಸಿರುವುದು ಕಾನೂನು ಬಾಹಿರ ಎಂದು ತೀರ್ಮಾನಿಸಿ, ಮಹಿಳೆ ವಿರುದ್ಧ ಅನೈತಿಕ ವ್ಯವಹಾರ ನಿಷೇಧ ಕಾಯ್ದೆ-1956(ಐಪಿಪಿ ಕಾಯ್ದೆ) ಸೆಕ್ಷನ್ 3, 5 ಮತ್ತು 7 ಮತ್ತು ಭಾರತೀಯ ದಂಡ ಸಂಹಿತೆ ಸೆಕ್ಷನ್ 370ರಡಿ ದಾಖಲಿಸಿದ್ದ ದೂರು, ಆ ಕುರಿತ ಸಲ್ಲಿಸಿದ್ದ ದೋಷಾರೋಪ ಪಟ್ಟಿಮತ್ತು 10ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ಪ್ರಕರಣದ ವಿಚಾರಣೆ ರದ್ದುಪಡಿಸಿತು.
ಅರ್ಜಿದಾರರ ವಿರುದ್ಧದ ಪ್ರಕರಣದಲ್ಲಿ ದೋಷಾರೋಪ ಪಟ್ಟಿಸಲ್ಲಿಸಿರುವುದು ಇಂದಿರಾನಗರದ ಠಾಣೆಯ ಇನ್ಸ್ಪೆಕ್ಟರ್ ಹೊರತು ವಿಶೇಷ ಅಧಿಕಾರಿ ಅಲ್ಲ. ಸಬ್ ಇನ್ಸ್ಪೆಕ್ಟರ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಬಹುದು ಎಂದು ಯಾವುದೇ ನಿಯಮ ಹೇಳುವುದಿಲ್ಲ. ಹೀಗಾಗಿ, ಅರ್ಜಿದಾರರ ವಿರುದ್ಧ ಸಬ್ ಇನ್ಸ್ಪೆಕ್ಟರ್ ದೋಷಾರೋಪ ಪಟ್ಟಿಸಲ್ಲಿಸಿದ ಕ್ರಮ ಕಾನೂನು ಬಾಹಿರವಾಗಿದೆ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ಪ್ರಕರಣವೇನು?: ಇಂದಿರಾನಗರದ ‘ಬ್ಲಾಂಕ ಪಲೋಮಾ ಸ್ಪಾ ಆ್ಯಂಡ್ ಸಲೂನ್'ನಲ್ಲಿ ‘ಬಾಡಿ ಟು ಬಾಡಿ ಮಸಾಜ್, ಹ್ಯಾಪಿ ಎಂಡಿಂಗ್ ಮತ್ತು ಸ್ಯಾಂಡ್ವಿಚ್' ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎಂಬ ಬಗ್ಗೆ ಕೇಂದ್ರ ಅಪರಾಧ ವಿಭಾಗದ (ಮಹಿಳಾ ಮತ್ತು ಮಾದಕ ದ್ರವ್ಯ ಘಟಕ) ಪೊಲೀಸ್ ಇನ್ಸ್ಪೆಕ್ಟರ್ ವರದಿ ನೀಡಿದ್ದರು. ಇದನ್ನು ಆಧರಿಸಿ 2016ರ ಏಪ್ರಿಲ್ 11ರಂದು ಸಂಜೆ 5ಕ್ಕೆ ಸಲೂನ್ ಮೇಲೆ ದಾಳಿ ದಾಳಿ ನಡೆಸಲಾಗಿತ್ತು. ಈ ವೇಳೆ ಮಣಿಪುರ ರಾಜ್ಯ ಮೂಲದ ಮಹಿಳೆ ನೀಲಿ ಮಥಿಯಾ ಮತ್ತು ಇನ್ನಿಬ್ಬರನ್ನು ಬಂಧಿಸಲಾಗಿತ್ತು. ಸಲೂನ್ ಆವರಣವನ್ನು ಬಾಡಿಗೆಗೆ ಪಡೆದು ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂಗತಿ ತನಿಖೆಯಲ್ಲಿ ತಿಳಿದು ಬಂದಿತ್ತು. ತನಿಖೆ ಪೂರ್ಣಗೊಳಿಸಿದ ನಂತರ ಸಬ್ ಇನ್ಸ್ಪೆಕ್ಟರ್ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಇದರಿಂದ ಹೈಕೋರ್ಟ್ ಮೆಟ್ಟಿಲೇರಿದ್ದ ಮಹಿಳೆಯು, ತನ್ನ ವಿರುದ್ಧದ ತನಿಖೆ ಮತ್ತು ದೋಷಾರೋಪ ಪಟ್ಟಿಸಲ್ಲಿಕೆ ತಪ್ಪಾಗಿದೆ. ಅಲ್ಲದೆ, ಐಟಿಪಿ ಕಾಯ್ದೆ ಸೆಕ್ಷನ್ 13ರ ಪ್ರಕಾರ, ವಿಶೇಷ ಅಧಿಕಾರಿ ಮಾತ್ರ ವೇಶ್ಯಾವಾಟಿಕೆ ಸಂಬಂಧಿಸಿದ ಪ್ರಕರಣಗಳ ಕುರಿತು ತನಿಖೆ ನಡೆಸಿ ದೋಷಾರೋಪ ಪಟ್ಟಿಸಲ್ಲಿಸಬೇಕು ಎಂದು ಪ್ರಕರಣ ರದ್ದುಪಡಿಸಿತು.
ಪ್ರತಿಯೊಂದು ಪ್ರದೇಶವೂ ಸರ್ಕಾರದಿಂದ ಗೊತ್ತುಪಡಿಸಿರಬೇಕು. ಪ್ರದೇಶದಲ್ಲಿನ ಐಟಿಪಿ ಕಾಯ್ದೆಯಡಿ ಪ್ರಕರಣಗಳನ್ನು ತನಿಖೆ ನಡೆಸಲು ವಿಶೇಷ ಪೊಲೀಸ್ ಅಧಿಕಾರಿ ನೇಮಕವಾಗಿರಬೇಕು. ಆ ಅಧಿಕಾರಿಯು ಪೊಲೀಸ್ ಇನ್ಸ್ಪೆಕ್ಟರ್ಗಿಂತ ಕಡಿಮೆ ಶ್ರೇಣಿಯವರಾಗಿರಬಾರದು. ಇಲ್ಲವೇ ಸಂಬಂಧಪಟ್ಟಜಿಲ್ಲಾ ಮ್ಯಾಜಿಸ್ಪ್ರೇಟ್ ನ್ಯಾಯಾಲಯವು ಪ್ರಕರಣದ ಅಗತ್ಯತೆ ಅಥವಾ ಸಮಯೋಚಿತವಾಗಿ ನಿವೃತ್ತ ಪೊಲೀಸ್ (ನಿವೃತ್ತಿ ವೇಳೆ ಇನ್ಸ್ಪೆಕ್ಟರ್ ಶ್ರೇಣಿಗಿಂತ ಕಡಿಮೆ ಇರಬಾರದು) ಅಥವಾ ಮಿಲಿಟರಿ ಅಧಿಕಾರಿ (ಕಮಿಷನರ್ ಅಧಿಕಾರಕ್ಕಿಂತ ಕಡಿಮೆ ಶ್ರೇಣಿಯವರಾಗಿರಬಾರದು)ಯನ್ನು ವಿಶೇಷ ಅಧಿಕಾರಿಯಾಗಿ ನೇಮಿಸಬಹುದು. ಅವರು ತಮ್ಮ ವ್ಯಾಪ್ತಿಯ ವೇಶ್ಯಾವಾಟಿಕೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಿ ದೋಷಾರೋಪ ಪಟ್ಟಿಸಲ್ಲಿಸಲು ಅಧಿಕಾರ ಹೊಂದಿರುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.