ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 2 ಆನೆ ಮರಿಗಳು ಸಾವನಪ್ಪಿರುವ ಘಟನೆ ತಾಲೂಕಿನ ಯಡಕುಮರಿ ಸಮೀಪದ ಕಾಗಿನಹರೆ ಸಮೀಪ ಸೋಮವಾರ ನಡೆದಿದೆ.
ಸಕಲೇಶಪುರ: ಗೂಡ್ಸ್ ರೈಲು ಡಿಕ್ಕಿ ಹೊಡೆದ ಪರಿಣಾಮ 2 ಆನೆ ಮರಿಗಳು ಸಾವನಪ್ಪಿರುವ ಘಟನೆ ತಾಲೂಕಿನ ಯಡಕುಮರಿ ಸಮೀಪದ ಕಾಗಿನಹರೆ ಸಮೀಪ ಸೋಮವಾರ ನಡೆದಿದೆ.
ಸೋಮವಾರ ಬೆಳಗಿನ ಜಾವ ಮಂಗಳೂರಿನಿಂದ ಬೆಂಗಳೂರು ಕಡೆಗೆ ಸರಕುಗಳನ್ನು ಸಾಗಾಟ ಮಾಡುತ್ತಿದ್ದ ರೈಲು 71ನೇ ಮೈಲು ಸಮೀಪ ಬರುವಾಗ 2 ಗಂಡು ಮರಿಯಾನೆಗಳು ರೈಲ್ವೆ ಹಳಿ ಮೇಲೆ ನಿಂತಿದ್ದು, ಅವುಗಳಿಗೆ ಡಿಕ್ಕಿ ಹೊಡೆದಿದೆ.
ಪರಿಣಾಮ ಎರಡು ಆನೆ ಮರಿಗಳು ಸ್ಥಳದಲ್ಲೇ ಮೃತಪಟ್ಟಿವೆ. ಇದರಿಂದ ರೈಲುಗಳ ಸಂಚಾರಕ್ಕೆ ತುಸು ಅಡಚಣೆಯುಂಟಾಗಿದ್ದು, ತಕ್ಷಣ ಯಡಕುಮರಿ ರೈಲ್ವೆ ನಿಲ್ದಾಣದ ಸ್ಟೇಷನ್ ಮಾಸ್ಟರ್ ಅರಣ್ಯ ಇಲಾಖೆಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ರೈಲ್ವೆ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಭೇಟಿ ನೀಡಿ, ಪರಿಶೀಲಿಸಿ ಮೃತಪಟ್ಟಆನೆಗಳ ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಅವುಗಳ ಅಂತ್ಯಕ್ರಿಯೆ ನೆರವೇರಿಸಿದರು.