2ನೇ ಪತ್ನಿಗಾಗಿ ಜೈಲಿಂದ ದುನಿಯಾ ವಿಜಿ ಪತ್ರ

By Web DeskFirst Published Oct 1, 2018, 9:57 AM IST
Highlights

ಕೀರ್ತಿಗೌಡಗೆ ಜೀವಬೆದರಿಕೆ ಇದ್ದು, ಆಕೆಗೆ ಯಾವುದೇ ತೊಂದರೆ ಆದರೂ ಅದಕ್ಕೆ ನಾಗರತ್ನ ನೇರ ಹೊಣೆ. ಹೀಗಾಗಿ ಕೀರ್ತಿಗೌಡಗೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಗಿರಿನಗರ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಬೆಂಗಳೂರು:  ತನ್ನ ಪತ್ನಿ ಕೀರ್ತಿಗೆ ಜೀವಬೆದರಿಕೆ ಇದ್ದು, ಭದ್ರತೆ ನೀಡಬೇಕು ಎಂದು ಹಲ್ಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್‌ ಪರಪ್ಪನ ಅಗ್ರಹಾರ ಜೈಲಿನಿಂದ ಗಿರಿನಗರ ಠಾಣೆ ಪೊಲೀಸರಿಗೆ ಪತ್ರ ಬರೆದಿದ್ದಾರೆ.

ಅಂಬೇಡ್ಕರ್‌ ಭವನದಲ್ಲಿ ನಡೆದ ಹಲ್ಲೆ ಪ್ರಕರಣದ ಬಳಿಕ ಮೊದಲ ಪತ್ನಿ ನಾಗರತ್ನ ಅವರು ಎರಡನೇ ಪತ್ನಿ ಕೀರ್ತಿಗೌಡ ಇರುವ ಗಿರಿನಗರ ನಿವಾಸದ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ಕೀರ್ತಿಗೌಡ ಮೇಲೆ ನಾಗರತ್ನ ಹಲ್ಲೆ ಮಾಡಿದ್ದಾರೆ. ಕೀರ್ತಿಗೌಡಗೆ ಜೀವಬೆದರಿಕೆ ಇದ್ದು, ಆಕೆಗೆ ಯಾವುದೇ ತೊಂದರೆ ಆದರೂ ಅದಕ್ಕೆ ನಾಗರತ್ನ ನೇರ ಹೊಣೆ. ಹೀಗಾಗಿ ಕೀರ್ತಿಗೌಡಗೆ ಸೂಕ್ತ ಪೊಲೀಸ್‌ ರಕ್ಷಣೆ ನೀಡಬೇಕು ಎಂದು ಗಿರಿನಗರ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ಮನವಿ ಮಾಡಿದ್ದಾರೆ.

ಅಲ್ಲದೆ, ಅಂಬೇಡ್ಕರ್‌ ಭವನದಲ್ಲಿ ನಡೆದ ಗಲಾಟೆ ಬಳಿಕ ಯಾರಾದರೂ ಮನೆ ಬಳಿ ಬಂದು ಗಲಾಟೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲೂ ಭದ್ರತೆ ನೀಡಬೇಕು ಎಂದು ಕೋರಿದ್ದಾರೆ ಎಂದು ಪೊಲೀಸ್‌ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿಯೊಬ್ಬರು ಪೋಸ್ಟ್‌ ಮೂಲಕ ಗಿರಿನಗರ ಠಾಣೆಗೆ ದುನಿಯಾ ವಿಜಯ್‌ ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಗಿರಿನಗರದಲ್ಲಿ ವಾಸವಿರುವ ಕೀರ್ತಿಗೌಡ ಅವರನ್ನು ಸಂಪರ್ಕಿಸಲಾಗಿದೆ. ಕೀರ್ತಿ ಅವರು ನಗರದಿಂದ ಹೊರಗೆ ಹೋಗಿದ್ದು, ಅವರು ಬಂದ ಬಳಿಕ ಭದ್ರತೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸೆ.22ರಂದು ರಾತ್ರಿ ಅಂಬೇಡ್ಕರ್‌ ಭವನದಲ್ಲಿ ನಡೆಯುತ್ತಿದ್ದ ದೇಹದಾಢ್ರ್ಯ ಸ್ಪರ್ಧೆ ವೇಳೆ ದುನಿಯಾ ವಿಜಯ್‌ ಹಾಗೂ ಅವರ ಸಹಚರರು ಕ್ಷುಲ್ಲಕ ಕಾರಣಕ್ಕೆ ಜಿಮ್‌ ತರಬೇತುದಾರ ಮಾರುತಿಗೌಡನ ಮೇಲೆ ಹಲ್ಲೆ ನಡೆಸಿ ಅಪಹರಣ ಮಾಡಿದ್ದರು. ಈ ಪ್ರಕರಣದಲ್ಲಿ ನಟ ವಿಜಯ್‌ ಸೇರಿ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ಜೈಲಿಗೆ ಕಳುಹಿಸಿದ್ದಾರೆ.

ಹಲ್ಲೆ ವೇಳೆ ಪುತ್ರ ಸಾಮ್ರಾಟ್‌ ಕೂಡ ವಿಜಯ್‌ ಜತೆ ಇದ್ದ ಎಂಬ ಕಾರಣಕ್ಕೆ ನಾಗರತ್ನ ಅವರು ಗಿರಿನಗರದಲ್ಲಿರುವ ಕೀರ್ತಿ ಮನೆ ಬಳಿ ತೆರಳಿದ್ದರು. ಈ ವೇಳೆ ಇಬ್ಬರು ಪತ್ನಿಯರ ನಡುವೆ ಮಾರಾಮಾರಿ ನಡೆದು ಪ್ರಕರಣ ಗಿರಿನಗರ ಠಾಣೆ ಮೆಟ್ಟಿಲೇರಿತ್ತು.

click me!