ಪದೇ ಪದೇ ಅತೃಪ್ತರಿಗೆ ಟ್ರಬಲ್ ಶೂಟರ್ ಶಿವಕುಮಾರ್ ಎಚ್ಚರಿಕೆ ಸಂದೇಶ ರವಾನಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಖಡಕ್ ಸಂದೇಶ ನೀಡಿದ್ದಾರೆ.
ಬೆಂಗಳೂರು [ಜು.19] : ವಿಶ್ವಾಸ ಮತಕ್ಕೆ ಗವರ್ನರ್ ಡೆಡ್ ಲೈನ್ ನೀಡಿದ್ದಾರೆ. ಆದರೆ ಅವರು ಸ್ಪೀಕರ್ ಗೆ ಮಾರ್ಗದರ್ಶನ ನೀಡಬಹುದು. ಸದನದಲ್ಲಿ ಚರ್ಚೆ ಮಾಡುವ ಮುನ್ನ ಅವಸರ ಮಾಡುವುದು ಸೂಕ್ತವಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಅತೃಪ್ತರಾಗಿ ತೆರಳಿದವರು ನಾವು ಕಾಂಗ್ರೆಸಿಗರು ಎಂದೇ ಎಲ್ಲಾ ಕಡೆ ಹೇಳಿಕೊಳ್ಳುತ್ತಿದ್ದಾರೆ. ಅವರು ಯಾವ ಪಕ್ಷಕ್ಕೂ ಸೇರಿಲ್ಲ. ಅತೃಪ್ತ ಶಾಸಕರು ಕಾಂಗ್ರೆಸ್ ಗೆ ನೀಡಿದ ಬೆಂಬಲ ವಾಪಸ್ ಪಡೆದಿದ್ದಾರೆ ಎಂದು ಗವರ್ನರ್ ಹೇಳುತ್ತಿದ್ದಾರೆ. ಅದನ್ನು ಸಾಬೀತು ಮಾಡಲಿ ಎಂದು ಡಿಕೆಶಿ ಹೇಳಿದರು.
ಬಿಜೆಪಿಯವರು ಅತೃಪ್ತ ಶಾಸಕರ ಭವಿಷ್ಯ ಹಾಳು ಮಾಡುತ್ತಿದ್ದಾರೆ. ದಿಕ್ಕು ತಪ್ಪಿಸುವ ಕಾರ್ಯತಂತ್ರ ಮಾಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರ ವಿರುದ್ಧ ಡಿಕೆಶಿ ಅಸಮಾಧಾನ ಹೊರ ಹಾಕಿದರು.
ಇನ್ನು ಒಮ್ಮೆ ರಾಜೀನಾಮೆ ನೀಡಿದಲ್ಲಿ ಮಂತ್ರಿ ಸ್ಥಾನ ಸಿಗಲ್ಲ ಎಂದು ವಾರ್ನಿಂಗ್ ನೀಡಿದ ಡಿಕೆ, ನಿಮ್ಮ ಭವಿಷ್ಯ ಹಾಳುಮಾಡಿಕೊಳ್ಳಬೇಡಿ ಎಂದರು.
ಈಗಾಗಲೇ ಮುಂಬೈನಲ್ಲಿ 15 ಮೈತ್ರಿ ಶಾಸಕರು ಬೀಡುಬಿಟ್ಟಿದ್ದಾರೆ. ಅದರೊಂದಿಗೆ ಕೆಲ ಕಾಂಗ್ರೆಸ್ ಶಾಸಕರು ಗೈರಾಗಿದ್ದಾರೆ. ಇದರಿಂದ ವಿಶ್ವಾಸ ಮತದ ವೇಳೆ ಹಿನ್ನಡೆ ಅನುಭವಿಸುವ ಅಳುಕು ಮೈತ್ರಿ ಪಾಳಯದಲ್ಲಿದೆ. ಆದರೂ ಕೂಡ ಕೊಂಚ ವಿಶ್ವಾಸ ಉಳಿಸಿಕೊಂಡಂತಿದೆ.