ಕರುಣಾನಿಧಿ ಕಪ್ಪು ಕನ್ನಡಕದ ರಹಸ್ಯವೇನು..?

By Web DeskFirst Published Aug 8, 2018, 8:12 AM IST
Highlights

ತಮಿಳುನಾಡಿನ ಮೇರು ರಾಜಕಾರಣಿ ಕರುಣಾನಿಧಿ ನಿಧನರಾಗಿದ್ದು, ಈ ಮೂಲಕ ದ್ರಾವಿಡ ಮೇರು ನಾಯಕನೋರ್ವ ಅಸ್ತಂಗತನಾದಂತಾಗಿದೆ. ಸದಾ ಕಾಲ ಕಪ್ಪು ಕನ್ನಡಕ ಧರಿಸುತ್ತಿದ್ದ ಕರುಣಾನಿಧಿ ಅವರ ಶೈಲಿಯೂ ಫೇಮಸ್ ಆಗಿತ್ತು. ಅದರ ಹಿಂದೆ ಇರುವ ಸೀಕ್ರೇಟ್ ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 

ಬೆಂಗಳೂರು :  ಕಪ್ಪು ಕನ್ನಡಕ, ಪಂಚೆ, ಹಳದಿ ಟವೆಲ್ ಕರುಣಾನಿಧಿ ಅವರ ಟ್ರೇಡ್ ಮಾರ್ಕ್‌ಗಳು. ಕಪ್ಪು ಕನ್ನಡಕವಿಲ್ಲದ ಕರುಣಾನಿಧಿ ಅವರನ್ನು ಊಹಿಸಲೂ ಸಾಧ್ಯವಿಲ್ಲ. ಈ ಕನ್ನಡಕದ ಹಿಂದೆ ಒಂದು ರೋಚಕ ಕತೆಯೇ ಇದೆ. ಕರುಣಾನಿಧಿ ಅವರು ಬರೋಬ್ಬರಿ 45 ವರ್ಷಗಳ ಕಾಲ  ಒಂದೇ ಚಾಳೀಸು ಬಳಸಿದ್ದರು. 

ಕಳೆದ ವರ್ಷ ನವೆಂಬರ್‌ನಲ್ಲಷ್ಟೆ ಅದನ್ನು ಬದಲಿಸಿದ್ದರು. ಹೊಸ ಕನ್ನಡಕ ಹುಡುಕಲು ಕರುಣಾನಿಧಿ ಅವರ ಪುತ್ರ ತಮಿಳರಸು ಅವರು ಸುಮಾರ 40 ದಿನಗಳ ಕಾಲ ಶೋಧ ಕಾರ್ಯಾಚರಣೆ ನಡೆಸಿದ್ದರು. ಜರ್ಮನಿಯಿಂದ ಹಗುರ, ಹೊಸ ಕನ್ನಡಕ ತರಿಸಿ, ತಂದೆಗೆ ನೀಡಿದ್ದರು. ಕರುಣಾನಿಧಿ ತುಂಬಾ ಖುಷಿಪಟ್ಟಿದ್ದರು. 

ಕರುಣಾನಿಧಿ ಅವರು ಯಾವಾಗಲೂ ಕಪ್ಪು ಕನ್ನಡಕ ಧರಿಸುತ್ತಿದ್ದದ್ದು ಏಕೆ ಎಂಬುದು ಬಹುತೇಕ ಮಂದಿಗೆ ಗೊತ್ತಿಲ್ಲ. ಅದಕ್ಕೆ ಕಾರಣ ಅವರಿಗಿದ್ದ ಕಣ್ಣಿನ ಸಮಸ್ಯೆ ಹಾಗೂ ಅಪಘಾತದಲ್ಲಿ ಉಲ್ಬಣಗೊಂಡಿದ್ದ ಸಮಸ್ಯೆ ಮತ್ತು ಶಸ್ತ್ರಚಿಕಿತ್ಸೆ. 1954 ರಿಂದ ಕರುಣಾನಿಧಿ ಅವರ ಕಣ್ಣಿನಲ್ಲಿ ನೀರು ಸುರಿಯುವುದು, ತುರಿಕೆ, ನೋವು ಕಾಣಿಸಿಕೊಳ್ಳುತ್ತಿತ್ತು. 17 ವರ್ಷಗಳ ಕಾಲ ಅದನ್ನು ಸಹಿಸಿಕೊಂಡಿದ್ದರು. ಕೊನೆಕೊನೆಗೆ ಕಣ್ಣಿನಲ್ಲಿ ಸೂಜಿ ಚುಚ್ಚಿದ ಅನುಭವದಿಂದ ತತ್ತರಿಸಿದ್ದರು. 

ಯಾವ ವೈದ್ಯರ ಬಳಿ ಹೋದರೂ  ಶಾಶ್ವತ ಪರಿಹಾರ ಸಿಕ್ಕಿರಲಿಲ್ಲ. ಈ ನಡುವೆ, 1967ರಲ್ಲಿ ಸಂಭವಿಸಿದ ಒಂದು ಅಪಘಾತದಲ್ಲಿ ಕರುಣಾನಿಧಿ ಅವರ ಕಣ್ಣಿಗೆ ಪೆಟ್ಟಾಗಿತ್ತು. ಕಣ್ಣಿನ ಸಮಸ್ಯೆ ಸಹಿಸಲಸದಳವಾದಾಗ ಅಮೆರಿಕದ ಜಾನ್ ಹಾಪ್ಕಿನ್ಸ್ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ  ಮಾಡಿಸಿಕೊಂಡರು. ಅಂದಿನಿಂದಲೂ ಅವರು ಕಪ್ಪು ಕನ್ನಡಕವನ್ನು ಬಳಸುತ್ತಿದ್ದರು.

ಕರುಣಾರ ಒಂದು ಕಾಲದ ಮಿತ್ರ, ರಾಜಕೀಯ ಎದುರಾಳಿಯಾಗಿದ್ದ ಎಂಜಿಆರ್ ಕೂಡ ಕಪ್ಪು ಕನ್ನಡಕ ಧರಿಸುತ್ತಿದ್ದರು. ವಿಶೇಷ ಟೋಪಿಯೂಅವರ ಟ್ರೇಡ್ ಮಾರ್ಕ್ ಆಗಿತ್ತು. ಎಂಜಿಆರ್ ನಿಧನರಾದಾಗ ಅವರ ಕನ್ನಡಕ, ಟೋಪಿಯನ್ನು ಜತೆಯಲ್ಲೇ ಹೂಳಲಾಗಿತ್ತು. ಇವರಿಬ್ಬರಿಂದಾಗಿ ತಮಿಳ್ನಾಡಲ್ಲಿ ಕಪ್ಪು ಕನ್ನಡಕ ಧರಿಸುವ ಕ್ರೇಜ್ ಕೂಡ ಸೃಷ್ಟಿಯಾಗಿತ್ತು.

click me!