ದಿಢೀರ್ ಚಿಂತನೆ ಬದಲಾಯಿಸಿದ ಸಚಿವ ಡಿ.ಕೆ ಶಿವಕುಮಾರ್

First Published Jul 8, 2018, 8:05 AM IST
Highlights

ವೈದ್ಯಕೀಯ ಶಿಕ್ಷಣ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ತಮ್ಮ ಚಿಂತನೆಯನ್ನು ದಿಢೀರ್ ಬದಲಾವಣೆ ಮಾಡಿದರು. ಪ್ರಸ್ತುತ ಕಳಸಾ ಬಂಡೂರಿ ನಾಲಾ ವೀಕ್ಷಿಸಿದರೆ ಗೋವಾ ರಾಜ್ಯದವರಿಗೆ ತಮ್ಮ ಭೇಟಿಯೇ ಅನುಕೂಲವಾಗಿ ಕರ್ನಾಟಕಕ್ಕೆ ಅನಾನುಕೂಲವಾದೀತು ಎಂಬ ದಿಢೀರ್‌ ಚಿಂತನೆಯಿಂದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನಾಲಾ ವೀಕ್ಷಣೆಯ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದಾರೆ.

ಧಾರವಾಡ :  ಪ್ರಸ್ತುತ ಕಳಸಾ ಬಂಡೂರಿ ನಾಲಾ ವೀಕ್ಷಿಸಿದರೆ ಗೋವಾ ರಾಜ್ಯದವರಿಗೆ ತಮ್ಮ ಭೇಟಿಯೇ ಅನುಕೂಲವಾಗಿ ಕರ್ನಾಟಕಕ್ಕೆ ಅನಾನುಕೂಲವಾದೀತು ಎಂಬ ದಿಢೀರ್‌ ಚಿಂತನೆಯಿಂದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನಾಲಾ ವೀಕ್ಷಣೆಯ ಪ್ರವಾಸವನ್ನು ಅರ್ಧದಲ್ಲಿಯೇ ಮೊಟಕುಗೊಳಿಸಿದ್ದಾರೆ.

ಶನಿವಾರ ಬೆಳಗ್ಗೆ ಖಾನಾಪುರ ಬಳಿಯ ಕಳಸಾ ಕೂಡು ಕಾಲುವೆ ಪ್ರಾರಂಭಿಕ ಭಾಗ ಹಾಗೂ ಮಲಪ್ರಭಾ ನದಿ ಸೇರುವ ಭಾಗದ ಪರೀಕ್ಷಣೆಗೆ ಹೊರಟಿದ್ದ ಡಿಕೆಶಿ ಅವರು ಧಾರವಾಡಕ್ಕೆ ತಮ್ಮ ಪ್ರವಾಸ ಮೊಟಕುಗೊಳಿಸಿದರು. ಇಲ್ಲಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಧಾರವಾಡ, ಮುನಿರಾಬಾದ್‌, ಶಿವಮೊಗ್ಗ ಹಾಗೂ ಕಲಬುರ್ಗಿ ಜಿಲ್ಲೆಗಳ ನಿಗಮದ ಪ್ರಗತಿ ಪರಿಶೀಲನೆ ನಡೆಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆ.8ರಂದು ಮಹದಾಯಿ, ಕಳಸಾ-ಬಂಡೂರಿ ಸಂಬಂಧಿಸಿದಂತೆ ನ್ಯಾಯಾಧೀಕರಣ ತೀರ್ಪು ಪ್ರಕಟವಾಗಲಿದೆ. ವಿವಾದ ನ್ಯಾಯಾಂಗದಲ್ಲಿರುವ ಕಾರಣ ಈ ಸ್ಥಳಕ್ಕೆ ತೆರಳುತ್ತಿಲ್ಲ. ಭೇಟಿ ನೀಡುವುದರಿಂದ ಗೋವಾ ರಾಜ್ಯ ತಮ್ಮ ಭೇಟಿಯ ಲಾಭ ಪಡೆಯುವ ಸಾಧ್ಯತೆಗಳೂ ಇವೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಕಳಸಾ ಬಂಡೂರಿ ಯೋಜನೆಯ ವಾಸ್ತವ ಸಂಗತಿ ಕುರಿತು ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದ್ದೇನೆ. ನಮ್ಮ ಪರವಾಗಿಯೇ ತೀರ್ಪು ಬರಲಿದೆ ಎಂಬ ವಿಶ್ವಾಸವಿದೆ. ತೀರ್ಪಿನ ನಂತರ ಮಹದಾಯಿ ನಾಲಾ ಜೋಡಣೆಯ ಕಾಮಗಾರಿ ಸ್ಥಳ ಪರಿಶೀಲಿಸಲಾಗುವುದು. ಅದರಂತೆ ಎತ್ತಿನಹೊಳೆ ಯೋಜನೆ ನಡೆಸುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

click me!