ರಾಜಕಾರಣಿಗಳ ಜೊತೆ ಪತ್ರಕರ್ತರು ಸಂಬಂಧ ಇಟ್ಟುಕೊಳ್ಳುವುದು ಸಹಜ. ಕೆಲವರು ಆಫ್ ದ ರೆಕಾರ್ಡ್ ಕೆಲವೊಂದು ವಿಚಾರಗಳನ್ನು ಹೇಳುತ್ತಾರೆ. ಇನ್ನು ಕೆಲವರು ಹೇಳುವುದಿಲ್ಲ. ದಿನೇಶ್ ಗುಂಡೂರಾವ್ ಅದೇ ಸಾಲಿಗೆ ಸೇರುವ ಅಸಾಮಿ.
ಬೆಂಗಳೂರು (ಡಿ. 25): ಸಿದ್ದರಾಮಯ್ಯ, ಖರ್ಗೆ, ಡಿಕೆಶಿ, ಪರಮೇಶ್ವರ್ ಜೊತೆ ಪತ್ರಕರ್ತರು ಅರ್ಧ ಗಂಟೆ ಕುಳಿತರೆ ಅವರೇನೂ ತೀರಾ ಒಳಗಿನ ಸುದ್ದಿ ಹೇಳುವುದಿಲ್ಲ. ಆದರೂ ಗಾಳಿಯ ದಿಕ್ಕು ಅರಿಯುವುದು ಕಷ್ಟ ಏನಲ್ಲ. ಆದರೆ ದಿನೇಶ್ ಗುಂಡೂರಾವ್ ಮಾತ್ರ ಪತ್ರಕರ್ತರು ಎರಡೆರಡು ಗಂಟೆ ಕುಳಿತುಕೊಂಡು ಕೆಣಕಿದರೂ ಸುದ್ದಿಯ ಒಂದು ಲೈನ್ ಕೂಡ ಬಿಟ್ಟುಕೊಡುವ ಆಸಾಮಿ ಅಲ್ಲ.
ನಾನೊಬ್ಬ ಮಿಸ್ಟೇಕನ್ ಐಡೆಂಟಿಟಿ: ನೋವು ಹೊರ ಹಾಕಿದ ಡಿಕೆಶಿ
ಸಂಪುಟ ವಿಸ್ತರಣೆ ಚರ್ಚೆಗೆ ಬಂದಿದ್ದ ದಿನೇಶ್ ಗುಂಡೂರಾವ್ ರೂಮ್ಗೆ ಹೋಗಿ ಸಭೆಯಲ್ಲಿ ಏನಾಯಿತು ಎಂದು ಎಷ್ಟೇ ಕೇಳಿದರೂ ಒಂದು ಅಕ್ಷರವೂ ಹೇಳದೆ ವಿಷಯಾಂತರ ಮಾಡುತ್ತಿದ್ದರು. ಪತ್ರಕರ್ತರು ಪಟ್ಟು ಬಿಡದೆ ಕುಳಿತಾಗ ಉಪ್ಪಿಟ್ಟು ಚಹಾ ತರಿಸಿದ ದಿನೇಶ್, ರಾಹುಲ್ ಮನೆಗೆ ಹೋಗುವವರೆಗೆ ಆರಾಮಾಗಿ ಹರಟೆ ಹೊಡೆದರೇ ಹೊರತು ಸುದ್ದಿ ಮಾತ್ರ ಬಿಟ್ಟುಕೊಡಲಿಲ್ಲ. ಪತ್ರಕರ್ತರ ಗೊಡವೆಯೇ ಬೇಡವೆಂದು ಸಿದ್ದು, ಪರಮ್, ದಿನೇಶ್, ರಾಹುಲ್ ಮನೆಯಿಂದ ಸೀದಾ ಏರ್ಪೋರ್ಟ್ಗೆ ಹೋದರೇ ಹೊರತು ಕರ್ನಾಟಕ ಭವನಕ್ಕೂ ಬರಲಿಲ್ಲ. ದಿನೇಶ್ ಯುವಕರಾದರೂ ವರಸೆಯಲ್ಲಿ ಹಳೆಯ ಜಮಾನಾದ ಕಾಂಗ್ರೆಸ್ ನಾಯಕರಿದ್ದಂತೆ ಇದ್ದಾರೆ. ಉಪ್ಪಿಟ್ಟು, ಚಹಾ ಜಮಾಯಿಸಿ. ಆದರೆ ಸುದ್ದಿ ಮಾತ್ರ ಕೇಳಬೇಡಿ.
- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ