ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಯಶಸಸ್ಸು ಗಳಿಸಿದೆ. ಇದೇ ವೇಳೆ ತುಮಕೂರು ಬಿಜೆಪಿ ಸಂಸದರಾಗಿ ಆಯ್ಕೆಯಾದ ಜಿ.ಎಸ್ ಬಸವರಾಜು ತಮ್ಮ ಗೆಲುವಿಗೆ ದೇವೇಗೌಡರೇ ಕಾರಣ ಎಂದು ಹೇಳಿದ್ದಾರೆ.
ತುಮಕೂರು : ನನ್ನ ಗೆಲುವಿಗೆ ವರವಾದವರು ದೇವೇಗೌಡರು. ದೇವೇಗೌಡರು ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿರುವುದು ತಮಗೆ ಹೆಚ್ಚಿನ ಅನುಕೂಲ ಒದಗಿಸಿಕೊಟ್ಟಿತು ಎಂದು ತುಮಕೂರು ಬಿಜೆಪಿ ವಿಜೇತ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದ್ದಾರೆ.
ತುಮಕೂರಿನಿಂದ ಮುದ್ದಹನುಮೇಗೌಡರು ಸ್ಪರ್ಧೆ ಮಾಡಿದ್ದರೆ ಕಷ್ಟವಾಗುತಿತ್ತು. ಆದರೆ ದೇವೇಗೌಡರನ್ನು ಜನ ಸುಲಭವಾಗಿ ರಿಜೆಕ್ಟ್ ಮಾಡಿದರು ಎಂದರು.
ಇನ್ನು ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ಬೆಂಬಲದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಣ್ಣ ನನ್ನ ಸ್ನೇಹಿತರು. ಆದರೆ ರಾಜಣ್ಣ ಅವರ ಪಕ್ಷ ಬಿಟ್ಟು ನನಗೆ ಸಹಾಯ ಮಾಡಿದ್ದಾರೆ ಎನ್ನಲು ಸಾಧ್ಯವಿಲ್ಲ. ಎಲ್ಲಾ ಪಕ್ಷದವರು ಮತ ಹಾಕಿದ್ದಕ್ಕೆ ನಾನು ಗೆದ್ದಿದ್ದೇನೆ ಎಂದರು.
ಎಚ್ .ಡಿ ರೇವಣ್ಣ ರಾಜಿನಾಮೆ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ಗೌಡರ ಕುಟುಂಬ ಎಂದಿಗೂ ಕೂಡ ಸತ್ಯ ಹೇಳಿಲ್ಲ. ದೇವೇಗೌಡರು ಈ ಹಿಂದೆ ಮೋದಿ ಪ್ರಧಾನಿಯಾದರೆ ದೇಶ ಬಿಡುವುದಾಗಿ ಹೇಳಿದ್ದರು. ಆದರೆ ಅವರು ದೇಶದ ಬಿಟ್ಟಿಲ್ಲ. ಈಗ ಹಾಸನ ಕ್ಷೇತ್ರದಿಂದ ಜಯಗಳಿಸಿರುವ ಪ್ರಜ್ವಲ್ ರೇವಣ್ಣ ರಾಜೀನಾಮೆ ನಾಟಕ ಆಡುತಿದ್ದಾರೆ.
ಜನರ ಸಿಂಪತಿ ಪಡೆಯಲು ಹಾಗೆ ಮಾಡುತಿದ್ದಾರೆ. ಮೊಮ್ಮಗ ರಾಜೀನಾಮೆ ಕೊಡುವುದು ಇಲ್ಲ. ತಾತ ಕೊಡಿಸುವುದು ಇಲ್ಲ ಎಂದು ಜಿ.ಎಸ್.ಬಸವರಾಜು ಹೇಳಿದರು.