
ಬೆಂಗಳೂರು: ರಾಜ್ಯ ಸರ್ಕಾರ ನೀಡುವ ವಾಲ್ಮೀಕಿ ಪ್ರಶಸ್ತಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರನ್ನು ಆಯ್ಕೆ ಮಾಡಿರುವುದು ವಾಲ್ಮೀಕಿ ಮತ್ತು ವಾಲ್ಮೀಕಿ ಸಮುದಾಯಕ್ಕೆ ಮಾಡಿರುವ ಅಪಮಾನ ಎಂದು ರಾಜ್ಯ ಬಿಜೆಪಿ ವಕ್ತಾರ ಗೋ ಮಧುಸೂಧನ್ ಆರೋಪಿಸಿದ್ದಾರೆ.
ಬುಧವಾರ ಸಂಜೆ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಾಲ್ಮೀಕಿ ಅವರು ನಂಬಿದ ತತ್ವಗಳಿಗೆ ಮತ್ತು ಯಾರಿಂದಾಗಿ ಅತ್ಯಂತ ಶ್ರೇಷ್ಠಕವಿಯಾದರೋ ಅಂತಹ ಶ್ರೀರಾಮನಿಗೆ ದೇವೇಗೌಡರ ಕೊಡುಗೆ ಏನಿದೆ ಎಂದು ಪ್ರಶ್ನಿಸಿದರು. ವಾಲ್ಮೀಕಿ ಸಮುದಾಯದ ಪುನರುಜ್ಜೀವನಕ್ಕೆ, ಆ ಸಮಾಜಕ್ಕೆ ಯಾರು ಪ್ರೇರಕರಾಗಿರುತ್ತಾರೋ ಅಥವಾ ವಾಲ್ಮೀಕಿ ಇಲ್ಲವೇ ಮರ್ಯಾದಾ ಪುರುಷ ಶ್ರೀರಾಮನಿಗೆ ಯಾರು ಸೇವೆ ಮಾಡುತ್ತಾರೋ ಅವರಿಗೆ ವಾಲ್ಮೀಕಿ ಪ್ರಶಸ್ತಿ ನೀಡುತ್ತಾರೆ ಎಂಬ ನಂಬಿಕೆ ಇತ್ತು.
ಆದರೆ, ಕಳೆದ ವರ್ಷ ಮಾಜಿ ಮಂತ್ರಿ ತಿಪ್ಪೇಸ್ವಾಮಿ ಅವರಿಗೆ ಸರ್ಕಾರ ಪ್ರಶಸ್ತಿ ನೀಡಿತ್ತು. ಇದೀಗ ಆ ಪ್ರಶಸ್ತಿಯನ್ನು ಪುತ್ರರಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ತಮ್ಮ ತಂದೆಗೆ ಕೊಟ್ಟಿದ್ದಾರೆ ಎಂದು ಲೇವಡಿ ಮಾಡಿದರು. ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟುವುದು ಬೇಡ ಎಂದು ಹೇಳಿದ ವ್ಯಕ್ತಿ, ತಮ್ಮ ಜೀವಮಾನದುದ್ದಕ್ಕೂ ಆಯೋಧ್ಯೆ ರಾಮಮಂದಿರದ ಬಗ್ಗೆ ಯಾವುದೇ ಶ್ರದ್ಧೆ ತೋರದ ವ್ಯಕ್ತಿ ದೇವೇಗೌಡರು. ಇಂತಹ ವ್ಯಕ್ತಿಗೆ ವಾಲ್ಮೀಕಿ ಪ್ರಶಸ್ತಿ ಕೊಟ್ಟರೆ ವಾಲ್ಮೀಕಿ ಒಪ್ಪುತ್ತಾರಾ? ಇಂಥದೊಂದು ಕಾರ್ಯಕ್ರಮವನ್ನು ಸರ್ಕಾರ ಮಾಡಬೇಕಿತ್ತಾ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.