ಮುಂಬರುವ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಲ್ಲಿ, ಡೆಂಘೀ ಮತ್ತು ಚಿಕೂನ್ಗುನ್ಯಾದಂಥ ಕಾಯಿಲೆಗಳಿಗೆ ಮತದಾರರೇ ಜವಾಬ್ದಾರರಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿವಾದಿತ ಹೇಳಿಕೆ ನೀಡಿದ್ದಾರೆ.ಇದೇ ವೇಳೆ ಪಾಲಿಕೆ ಚುನಾವಣೆಯಲ್ಲಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಂಬಿಸುತ್ತಿದೆ ಎಂದೂ ಟೀಕಿಸಿದ್ದಾರೆ.
ನವದೆಹಲಿ (ಏ.21): ಮುಂಬರುವ ದೆಹಲಿಯ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಿದ್ದಲ್ಲಿ, ಡೆಂಘೀ ಮತ್ತು ಚಿಕೂನ್ಗುನ್ಯಾದಂಥ ಕಾಯಿಲೆಗಳಿಗೆ ಮತದಾರರೇ ಜವಾಬ್ದಾರರಾಗಲಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ, ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಿವಾದಿತ ಹೇಳಿಕೆ ನೀಡಿದ್ದಾರೆ.ಇದೇ ವೇಳೆ ಪಾಲಿಕೆ ಚುನಾವಣೆಯಲ್ಲಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಬಿಜೆಪಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಿಂಬಿಸುತ್ತಿದೆ ಎಂದೂ ಟೀಕಿಸಿದ್ದಾರೆ.
ಅಲ್ಲದೆ, ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಧಿಕಾರದ ಗದ್ದುಗೆಗೇರಲಿದೆ ಎಂಬ ಸಮೀಕ್ಷೆಗಳಲ್ಲಿ ಬಹಿರಂಗವಾಗುತ್ತಿರುವಂತೆಯೇ, ಆಡಳಿತಾರೂಢ ಆಪ್ ಪಕ್ಷವನ್ನು ನಾಶ ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿಗಳು ಇನ್ನಿಲ್ಲದಂತೆ ಯತ್ನ ಮಾಡುತ್ತಿವೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ ಕೇಜ್ರಿವಾಲ್, ‘ಭಾನುವಾರ ನಿಗದಿಯಾಗಿರುವ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ, ಆಪ್ ಸರ್ಕಾರದ ಹೆಸರು ಕೆಡಿಸುವ ಉದ್ದೇಶದಿಂದ ದೆಹಲಿಗೆ ವಿದ್ಯುತ್ ಪೂರೈಕೆ ಮಾಡುವ ಟ್ರಾನ್ಸ್ಫಾರ್ಮರ್ಗಳ ಎಣ್ಣೆಯನ್ನು ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಕಳ್ಳತನ ಮಾಡುತ್ತಿದ್ದಾರೆ,’ ಎಂದು ದೂರಿದರು. ಅಲ್ಲದೆ, ‘ಪ್ರತಿಪಕ್ಷಗಳ ಕಾರ್ಯಕರ್ತರು, ನಲ್ಲಿಗಳ ನೀರು ಬಿಡುವ ಟ್ಯಾಪ್ಗಳು ಮತ್ತು ನೀರು ಪೂರೈಕೆ ಮಾಡುವ ಪೈಪ್ಗಳಿಗೆ ಸಿಮೆಂಟ್ ಹಾಕಿ ಮುಚ್ಚುವ ಕಾರ್ಯದಲ್ಲಿ ಮಗ್ನರಾಗಿದ್ದಾರೆ. ಹಾಗಾಗಿ, ಇಂಥ ಕೆಟ್ಟ ರಾಜಕೀಯ ಮಾಡುವುದನ್ನು ಬಿಡಿ ಎಂದು ಕೈಮುಗಿದು ಕೇಳುತ್ತೇನೆ,’ ಎಂದು ಕಾಂಗ್ರೆಸ್ ಮತ್ತು ಬಿಜೆಪಿಗೆ ಅರವಿಂದ್ ಕೇಜ್ರಿವಾಲ್ ಟಾಂಗ್ ನೀಡಿದರು. ಕಳೆದ 10 ವರ್ಷಗಳಿಂದ ದೆಹಲಿ ಪಾಲಿಕೆಯಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಗೆ ಇದುವರೆಗೂ ನಗರ ಶುಚಿಗೊಳಿಸಲು ಸಾಧ್ಯವಾಗಿಲ್ಲ. ಮುಂದಿನ ವರ್ಷಗಳಲ್ಲಿ ಅವರು ಶುಚಿ ಕಾರ್ಯ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.