ಮೂಡ್‌ನಲ್ಲಿ ಮೊಬೈಲ್ ಕಳ್ಳನನ್ನು ಹಿಡಿದ ಪೇದೆಗೆ ಹನಿಮೂನ್ ಪ್ಯಾಕೇಜ್!

First Published Jul 6, 2018, 3:52 PM IST
Highlights

ಮೊಬೈಲ್ ಕಳ್ಳನನ್ನು ಹಿಡಿದ ಪೇದೆಗೆ ಸಿಕ್ಕ ಉಡುಗೊರೆ ಏನು?

ಕರ್ತವ್ಯ ಪ್ರಜ್ಞೆ ಮೆರೆದ ಪೇದೆಗೆ ಹನಿಮೂನ್ ಪ್ಯಾಕೇಜ್

ಬೆಳ್ಳಂದೂರು ಪೊಲೀಸ್ ಠಾಣೆಯ ಪೇದೆ ವೆಂಕಟೇಶ್

ಪೇದೆಗೆ ವೈಟ್ ಫೀಲ್ಡ್ ಡಿಸಿಪಿ ಇಂದ ಭರ್ಜರಿ ಕೊಡುಗೆ

ಹನಿಮೂನ್ ಪ್ಯಾಕೇಜ್ ಘೋಷಿಸಿದ ಡಿಸಿಪಿ ಅಬ್ದುಲ್ ಅಹ್ಮದ್
 

ಬೆಂಗಳೂರು(ಜು.6): ರಸ್ತೆಯಲ್ಲಿ ವ್ಯಕ್ತಿಯೋರ್ವರು ಮೊಬೈಲ್‌ನಲ್ಲಿ ಮಾತನಾಡುತ್ತಾ ನಿಂತಿದ್ದಾಗ, ಬೈಕ್‌ನಲ್ಲಿ ಬಂದ ಖದೀಮರು ಆ ವ್ಯಕ್ತಿಯ ಮೊಬೈಲ್ ಕದ್ದು ಪರಾರಿಯಾಗಿದ್ದರು. ಕೂಡಲೇ ಮೊಬೈಲ್ ಕಳೆದುಕೊಂಡ ವ್ಯಕ್ತಿ ಕಳ್ಳ ಕಳ್ಳ ಎಂದು ಕೂಗಿ ಕೊಂಡಿದ್ದ. ಈ ವೇಳೆ ಕರ್ತವ್ಯನಿರತ ಪೊಲೀಸ್ ಪೇದೆ ವೇಂಕಟೇಶ್ ಖದೀಮರನ್ನು ಬೆನ್ನತ್ತಿ ಓವರ್ವನನ್ನು ಸೆರೆಹಿಡಿದು ಮೊಬೈಲ್‌ನ್ನು ವಶಪಡಿಸಿಕೊಂಡಿದ್ದರು.

ಬೆಳ್ಳಂದೂರು ಪೊಲೀಸ್ ಠಾಣೆಯ ಪೇದೆ ವೆಂಕಟೇಶ್ ಅವರ ಕರ್ತವ್ಯ ಪ್ರಜ್ಞೆಗೆ ಎಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿತ್ತು. ಅಲ್ಲದೇ ವೈಟ್‌ಫೀಲ್ಡ್ ಪೊಲೀಸ್ ಠಾಣೆಯ ಡಿಸಿಪಿ ಅಬ್ದುಲ್ ಅಹ್ಮದ್, ಪೇದೆ ವೆಂಕಟೇಶ್ ಅವರಿಗೆ 10ಸಾವಿರ ರೂ. ಬಹುಮಾನ ವಿತರಣೆ ಕೂಡ ಮಾಡಿದ್ದರು.

ಇಷ್ಟೇ ಆಗಿದ್ದರೆ ಇದೊಂದು ಸುದ್ದಿಯಾಗುತ್ತಿರಲಿಲ್ಲವೇನೋ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿರುವ ಡಿಸಿಪಿ ಅಹ್ಮದ್, ಪೇದೆ ವೆಂಕಟೇಶ್ ಅವರಿಗೆ ಹನಿಮೂನ್ ಪ್ಯಾಕೇಜ್ ಕೂಡ ಘೋಷಿಸಿದ್ದಾರೆ. ಹನಿಮೂನ್ ಟೂರ್‌ಗೆಂದೇ ವೆಂಕಟೇಶ್ ಅವರಿಗೆ ರಜೆ ಘೋಷಿಸಿದ್ದು, ಪ್ರವಾಸದ ಸಂಪೂರ್ಣ ವೆಚ್ಛ ಭರಿಸುವುದಾಗಿ ಡಿಸಿಪಿ ಅಬ್ದುಲ್ ಅಹ್ಮದ್ ಘೋಷಿಸಿದ್ದಾರೆ.

ಕೆಳ ಹಂತದ ಅಧಿಕಾರಿಗಳಲ್ಲಿ ಆತ್ಮವಿಶ್ವಾಸ ತುಂಬಿ, ಅವರನ್ನು ಹುರಿದುಂಬಿಸಲು ಡಿಸಿಪಿ ಅಬ್ದುಲ್ ಅಹ್ಮದ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದ್ದು, ಡಿಸಿಪಿ ಕಾರ್ಯಕ್ಕೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. 

click me!