
ಬೆಂಗಳೂರು (ಅ.16): ಸಂಭ್ರಮದ ದೀಪಾವಳಿಗೆ ಇನ್ನೆರಡೇ ದಿನಗಳು ಬಾಕಿಯಿವೆ. ಆದರೆ ಪಟಾಕಿ ಹೊಡೆಯುವ ಮುನ್ನ ಹುಷಾರಾಗಿರಬೇಕು. ಯಾಕಂದ್ರೆ, ಕಳ್ಳದಾರಿಯಲ್ಲಿ ನಮ್ಮ ದೇಶ ಪ್ರವೇಶಿಸಿದೆ ಚೀನಿ ಪಟಾಕಿ. ಆ ಪಟಾಕಿ ಅತ್ಯಂತ ಅಪಾಯಕಾರಿ ರಾಸಾಯನಿಕ ಹೊಂದಿದೆ. ಖುಷಿಗಾಗಿ ಒಡೆಯೋ ಡೇಂಜರಸ್ ಪಟಾಕಿ ಬಾಂಬ್ನಂತೆ ಸ್ಫೋಟಗೊಂಡು ನಮ್ಮ ಮುದ್ದಾದ ಮಕ್ಕಳ ಬದುಕನ್ನೇ ಬರ್ಬಾದ್ ಮಾಡಬಹುದು.
ಚೀನಿ ಪಟಾಕಿ ಮಾಫಿಯಾದ ಹಿಂದಿರೋ ಕರಾಳ ಸೀಕ್ರೆಟ್ ಬಯಲು ಮಾಡಿದೆ ಕವರ್ ಸ್ಟೋರಿ ತಂಡ. ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿ ದಂಧೆಯ ಸೀಕ್ರೆಟ್ಗಳನ್ನ ಬಯಲು ಮಾಡಿದೆ. ಶಿವಕಾಶಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಲಂಚ ಕೊಟ್ರೆ ಯಾರು ಬೇಕಾದ್ರೂ ಪಟಾಕಿ ಫ್ಯಾಕ್ಟರಿ ಸ್ಥಾಪಿಸಬಹುದು. ಹಾಗಾಗಿ ಇಲ್ಲಿ 800 ಲೈಸೆನ್ಸ್ ಪಡೆದ ಕಾರ್ಖಾನೆಗಳಿದ್ರೆ, 700ಕ್ಕೂ ಹೆಚ್ಚು ಅಕ್ರಮ ಫ್ಯಾಕ್ಟರಿಗಳಿವೆ. ಇದಕ್ಕಿಂತಲೂ ಬೆಚ್ಚಿ ಬೀಳಿಸೋ ಅಂಶ ಅಂದ್ರೆ ಶಿವಕಾಶಿಯ ಅಕ್ರಮ ಫ್ಯಾಕ್ಟರಿಗಳಿಗೆ ಮಕ್ಕಳ ದುಡಿಮೆಯೇ ಬಂಡವಾಳ. ಪುಟ್ಟ ಪುಟ್ಟ ಮಕ್ಕಳನ್ನ ಜೀತಕ್ಕೆ ಪಡೆದು, ರಾತ್ರಿ ಹಗಲು ದುಡಿಸಿ, ಅವರ ಭವಿಷ್ಯವನ್ನ ಹಾಳು ಮಾಡುತ್ತಿದ್ದಾರೆ. ನಮ್ಮ ದೇಶದಲ್ಲಿ ಚೀನಿ ಪಟಾಕಿ ಮೇಲೆ ನಿಷೇಧ ಹೇರಲಾಗಿದೆ. ಯಾವ ಕಾರಣಕ್ಕೂ ಅದನ್ನ ನಮ್ಮ ದೇಶದೊಳಗೆ ಮಾರಬಾರದು. ಆದರೆ ಕಾನೂನನ್ನ ಕಾಲ ಕಸ ಮಾಡಿರೋ ಮಾಫಿಯಾ ಮಂದಿ ಈ ಚೀನಿ ಪಟಾಕಿಯನ್ನ ಕದ್ದು ಮುಚ್ಚಿ ಸ್ಮಗ್ಲಿಂಗ್ ಮಾಡುತ್ತಿದ್ದಾರೆ.
ಯಾಕಂದ್ರೆ ಚೀನಾ ಪಟಾಕಿ ಅತ್ಯಂತ ಅಪಾಯಕಾರಿಯಾಗಿರೋ ಪೊಟ್ಯಾಶಿಯಂ ಕ್ಲೋರೇಟ್ ರಾಸಾಯನಿಕ ಪದಾರ್ಥವನ್ನ ಹೊಂದಿದೆ. ಇದು ಕ್ಷಣಾರ್ಧದಲ್ಲಿ ಸ್ಫೋಟಗೊಳ್ಳೋದ್ರಿಂದ ಅಪಾಯ ಕಟ್ಟಿಟ್ಟ ಬುತ್ತಿ ಅನ್ನೋ ಅಂಶ ಕವರ್ ಸ್ಟೋರಿ ರಹಸ್ಯ ಕಾರ್ಯಾಚರಣೆ ವೇಳೆ ಗೊತ್ತಾಯ್ತು. ಚೀನಾ ವಾತಾವರಣ ಕೂಲ್ ಆಗಿರುತ್ತೆ. ಹಾಗಾಗಿ ಅಲ್ಲಿ ಪಟಾಕಿ ತಯಾರಿಕೆಗೆ ಅತ್ಯಂತ ಕಡಿಮೆ ಬೆಲೆಗೆ ಸಿಗೋ ಪೊಟ್ಯಾಶಿಯಂ ಕ್ಲೋರೇಟನ್ನ ಬಳಸ್ತಾರೆ. ಆದ್ರೆ ಅದೇ ಪಟಾಕಿಯನ್ನ ಉಷ್ಣಾಂಶ ಹೆಚ್ಚಿರೋ ಭಾರತದಲ್ಲಿ ಬಳಸಿದ್ರೆ ಅಪಾಯ ಗ್ಯಾರಂಟಿ ಅಂತಾರೆ ತಜ್ಞರು. ಚೀನಿ ಪಟಾಕಿ ಅಪಾಯಕಾರಿ ರಾಸಾಯನಿಕ ಪದಾರ್ಥ ಹೊಂದಿರೋದ್ರಿಂದ ಅದು ಮಕ್ಕಳಲ್ಲಿ ಅಸ್ತಮಾದಂಥಾ ಸಮಸ್ಯೆಗೆ ಕಾರಣ ಆಗಬಹುದು. ಅಲ್ಲದೆ ಅದರ ಪ್ರಖರ ಬೆಳಕಿಗೆ ಮಕ್ಕಳ ದೃಷ್ಟಿಯೂ ಹೋಗಬಹುದು.
ದೀಪಾವಳಿಗೆ ಚೀನಿ ಪಟಾಕಿಯನ್ನ ಖರೀದಿಸಿ ತಂದು ಮನೆಯಲ್ಲಿಟ್ರೂ ಡೇಂಜರೇ. ಉಷ್ಣಾಂಶ ಹೆಚ್ಚಾದ್ರೆ ಅದು ತನ್ನಷ್ಟಕ್ಕೆ ಸ್ಫೋಟಗೊಂಡು ಭಾರೀ ಅನಾಹುತ ಸೃಷ್ಟಿಸೋ ಆತಂಕ ಇದೆ ಜೋಕೆ.
ಕವರ್ ಸ್ಟೋರಿ ತಂಡ ಪಟಾಕಿ ಮಾರುಕಟ್ಟೆಯಲ್ಲಿ ಓಡಾಡಿ ಅಲ್ಲಿ ವ್ಯಾಪಾರಸ್ಥರಿಂದ ಮಾಹಿತಿ ಸಂಗ್ರಹಿಸಲು ಪ್ರಾರಂಭಿಸಿತು. ಆಗ ತಿಳಿದ ಒಂದು ವಿಚಾರ ಏನಂದರೆ ಚೀನಾ ಪಟಾಕಿ ತುಂಬಾನೇ ಚೀಪ್. ನಮ್ಮ ಶಿವಕಾಶಿ ಪಟಾಕಿಯ ಅರ್ಧಕ್ಕಿಂತಲೂ ಕಡಿಮೆ ಬೆಲೆಗೆ ಅದು ಸಿಗುತ್ತೆ. ಹಾಗಾಗಿ ಚೀನಾ ಪಟಾಕಿಗೆ ಭರ್ಜರಿ ಡಿಮ್ಯಾಂಡ್ ಇದೆಯಂತೆ. ಇನ್ನು ಚೀನಾ ಪಟಾಕಿಯನ್ನ ಅತ್ಯಾಧುನಿಕ ರೀತಿಯಲ್ಲಿ ತಯಾರಿಸ್ತಾರೆ. ಸಣ್ಣ ಗಾತ್ರದಲ್ಲಿ ಇರುತ್ತೆ. ಆದ್ರೆ ಹೆಚ್ಚು ಶಬ್ದ, ಆಕರ್ಷಕ ಬಣ್ಣ, ಚಿತ್ತಾರಗಳನ್ನ ಮೂಡಿಸುತ್ತೆ. ಹಾಗಾಗಿ ಜನ ಕಡಿಮೆ ಬೆಲೆಗೆ ಸಿಗೋ ಚೀನಾ ಪಟಾಕಿಗೆ ಮೊರೆ ಹೋಗ್ತಿದ್ದಾರೆ.
ದೇಶಭ್ರಷ್ಟರು ಈಗಾಗಲೇ ಚೀನಾ ಮಾಲನ್ನ ತಂದು ಗೋಡೌನ್ಗಳಲ್ಲಿ ಸಂಗ್ರಹಿಸಿಟ್ಟಾಗಿದೆ. ಈ ವಿಚಾರವನ್ನ ಕೆಲ ವ್ಯಾಪಾರಸ್ಥರು ನಮ್ಮ ರಹಸ್ಯ ಕಾರ್ಯಾಚರಣೆ ವೇಳೆ ಬಾಯಿಬಿಟ್ಟಿದ್ದಾರೆ. ಎಂಥಾ ದೇಶದ್ರೋಹದ ಕೆಲಸ ಮಾಡ್ತಿದ್ದಾರೆ ನೋಡಿ. ಚೀನಾ ನಮ್ಮ ದೇಶದ ಮೇಲೆ ಸಮರ ಸಾರಲು ಸಿದ್ಧವಾಗಿದೆ. ನಮ್ಮ ಆರ್ಥಿಕತೆಗೆ ಭಾರೀ ಏಟು ಕೊಡುತ್ತಿದೆ. ಆದ್ರೂ ನಮ್ಮ ದೇಶದ ಅತೀ ದೊಡ್ಡ ಹಬ್ಬ ದೀಪಾವಳಿಯಲ್ಲಿ ಮಾತ್ರ ಮೇಡ್ ಇನ್ ಚೈನಾ ಮಾಲಿದ್ದೇ ದರ್ಬಾರು. ಇದಕ್ಕೆ ಬ್ರೇಕ್ ಹಾಕಬೇಕಾದ ಕೇಂದ್ರ ಸರ್ಕಾರದ ಅಧಿಕಾರಿಗಳೇ ದೇಶಭ್ರಷ್ಟ ಸ್ಮಗ್ಲರ್ಗಳ ಜೊತೆ ಕೈಜೋಡಿಸುತ್ತಿರೋದು ಈ ದೇಶದ ದುರಂತವೇ ಸರಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.