ಅರೆಸೇನಾ ಕಾವಲು ಪಡೆಯೊಂದರ ಮೇಲೆ ಉಗ್ರಗಾಮಿಗಳು ಗ್ರಿನೇಡ್ ದಾಳಿ ನಡೆಸಿದ ಘಟನೆ ಶೋಪಿಯನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ.
ಶ್ರೀನಗರ(ಅ. 11): ಪಾಂಪೋರ್'ನಲ್ಲಿ ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ ದೀರ್ಘಕಾಲ ಮುಂದುವರಿಯುತ್ತಿರುವ ಬೆನ್ನಲ್ಲೇ ದಕ್ಷಿಣ ಕಾಶ್ಮೀರದಲ್ಲಿ ಬೇರೊಂದು ಉಗ್ರರ ತಂಡ ಅಟ್ಟಹಾಸ ಮೆರೆದಿದೆ. ಅರೆಸೇನಾ ಕಾವಲು ಪಡೆಯೊಂದರ ಮೇಲೆ ಉಗ್ರಗಾಮಿಗಳು ಗ್ರಿನೇಡ್ ದಾಳಿ ನಡೆಸಿದ ಘಟನೆ ಶೋಪಿಯನ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಈ ದಾಳಿಗೆ ಏಳು ನಾಗರಿಕರು ಮತ್ತು ಒಬ್ಬ ಸೈನಿಕ ಗಾಯಗೊಂಡಿದ್ದಾರೆ. ದಾಳಿ ಎಸಗಿದ ಉಗ್ರಗಾಮಿಗಳು ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾರೆ.
ಝೇಲಮ್ ನದಿಯಿಂದ ದೋಣಿ ಮೂಲಕ ಬಂದಿದ್ದರೆನ್ನಲಾದ ಉಗ್ರಗಾಮಿಗಳು ಸಿಆರ್'ಪಿಎಫ್'ನ ಕಾವಲುಪಡೆಯ ಮೇಲೆ ಗ್ರಿನೇಡ್ ದಾಳಿ ಎಸಗಿ ಕೂಡಲೇ ಕಾಲ್ಕಿತ್ತಿದ್ದಾರೆ.
ಕೆಲ ದಿನಗಳ ಹಿಂದೆ ಪಾಕಿಸ್ತಾನದ ಗಡಿಭಾಗದೊಳಗೆ ಭಾರತೀಯ ಸೇನೆ ಸರ್ಜಿಕಲ್ ಕಾರ್ಯಾಚರಣೆ ನಡೆಸಿ ಅಲ್ಲಿನ ಕೆಲ ಉಗ್ರರ ಕ್ಯಾಂಪ್'ಗಳನ್ನು ಧ್ವಂಸ ಮಾಡಿ 40ಕ್ಕೂ ಹೆಚ್ಚು ಮಂದಿಯನ್ನು ಹತ್ಯೆಗೈದಿತ್ತು. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತದ ಮೇಲೆ ಸೇಡಿನ ದಾಳಿಗಳು ನಡೆಯುವ ಸಾಧ್ಯತೆ ಇದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ವಾರದಿಂದಲೂ ಎಚ್ಚರಿಸುತ್ತಾ ಬಂದಿವೆ.