ಇಶ್ರತ್ ಎನ್‌ಕೌಂಟರ್ : ವಂಜಾರಾ, ಅಮಿನ್ ವಿರುದ್ಧದ ಕೇಸ್ ಕೈಬಿಟ್ಟ ಕೋರ್ಟ್!

By Web DeskFirst Published May 2, 2019, 1:27 PM IST
Highlights

2004ರ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣ| ಮಾಝಿ ಪೊಲೀಸ್ ಅಧಿಕಾರಿಗಳಾದ ಡಿಜಿ ವಂಜಾರಾ ಮತ್ತು ಅಮಿನ್ ಪ್ರಕರಣದಿಂದ ಖುಲಾಸೆ| ವಂಜಾರಾ, ಅಮಿನ್ ಅವರನ್ನು ಖುಲಾಸೆಗೊಳಿಸಿದ ಸಿಬಿಐ ಕೋರ್ಟ್| ಪ್ರಕರಣದಿಂದ ತಮ್ಮ ಹೆಸರು ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ| ವಂಜಾರಾ, ಅಮಿನ್ ಅರ್ಜಿ ಪುರಸ್ಕರಿಸಿದ ಸಿಬಿಐ ನ್ಯಾಯಾಲಯ|

ನವದೆಹಲಿ(ಮೇ.02): ಮಹತ್ವದ ಬೆಳವಣಿಗೆಯೊಂದರಲ್ಲಿ 2004ರ ಇಶ್ರತ್ ಜಹಾನ್ ಎನ್ ಕೌಂಟರ್ ಪ್ರಕರಣದಿಂದ, ಮಾಜಿ ಪೊಲೀಸ್ ಅಧಿಕಾರಿಗಳಾದ ಡಿಜಿ ವಂಜಾರಾ ಮತ್ತು ಅಮಿನ್ ಅವರನ್ನು ಸಿಬಿಐ ಕೋರ್ಟ್ ಖುಲಾಸೆಗೊಳಿಸಿದೆ.

ಪ್ರಕರಣದಿಂದ ತಮ್ಮ ಹೆಸರನ್ನು ಕೈಬಿಡುವಂತೆ ಮನವಿ ಮಾಡಿದ್ದ ವಂಜಾರಾ ಮತ್ತು ಅಮಿನ್ ಅವರ ಅರ್ಜಿಯ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯ, ಅರ್ಜಿಯನ್ನು ಪುರಸ್ಕರಿಸುವ ಮೂಲಕ ಇಬ್ಬರೂ ಅಧಿಕಾರಿಗಳನ್ನು ಪ್ರಕರಣದಿಂದ ಆರೋಪ ಮುಕ್ತಗೊಳಿಸಿದೆ.

ಇಶ್ರತ್ ಜಹಾನ್ ಎನ್ ಕೌಂಟರ್ ಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಪ್ರಾಸಿಕ್ಯೂಶನ್ ನೇಮಕ ಮಾಡದಿರುವ ಗುಜರಾತ್ ಸರ್ಕಾರದ ನಿರ್ಧಾರದ ಬಳಿಕ, ವಂಜಾರಾ ಮತ್ತು ಅಮಿನ್ ಪ್ರಕರಣದಿಂದ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಸಿಬಿಐ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ರ್ಜಿಯ ವಿಚಾರಣೆ ನಡೆಸಿದ ಸಿಬಿಐ ನ್ಯಾಯಾಧೀಶ ಜೆಕೆ ಪಾಂಡ್ಯ, ಗುಜರಾತ್ ಸರ್ಕಾರದ ನಿರ್ಧಾರದ ಬಳಿಕ ವಂಜಾರಾ ಮತ್ತು ಅಮಿನ್ ಅವರ ಹೆಸರನ್ನು ಪ್ರಕರಣದಿಂದ ಕೈಬಿಡಲಾಗಿದೆ ಎಂದು ಘೋಷಿಸಿದರು.

2004ರಲ್ಲಿ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಬಯಸಿದ್ದ, ಲಷ್ಕರ್ ಉಗ್ರರು ಎಂದು ಆರೋಪಿಸಲಾಗಿದ್ದ ಇಶ್ರತ್ ಜಹಾನ್ ಸೇರಿದಂತೆ ಇತರ ಮೂವರನ್ನು ಗುಜರಾತ್ ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿದ್ದರು.

click me!