
ನವದೆಹಲಿ(ಮಾ.30): ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ಬಾಲಿವುಡ್ ನಟಿ ರೇಖಾ ಅವರಂತಹ ರಾಜ್ಯಸಭೆಯ ನಾಮ ನಿರ್ದೇಶಿತ ಸದಸ್ಯರು ಸದನಕ್ಕೆ ನಿರಂತರವಾಗಿ ಗೈರಾಗಬಹುದೇ? ಒಂದು ವೇಳೆ ಅವರಿಗೆ ರಾಜ್ಯಸಭೆಗೆ ಬರಲು ಆಸಕ್ತಿ ಇಲ್ಲದಿದ್ದರೆ ರಾಜೀನಾಮೆ ನೀಡಬಾರದೇಕೆ ಎಂದು ಸಮಾಜವಾದಿ ಪಕ್ಷದ ಸದಸ್ಯ ನರೇಶ್ ಅಗರ್ವಾಲ್ ಪ್ರಶ್ನಿಸಿದ್ದಾರೆ.
ಪ್ರಶ್ನೋತ್ತರ ಕಲಾಪದ ವೇಳೆ ಈ ವಿಷಯ ಪ್ರಸ್ತಾಪಿಸಿದ ಅಗರ್ವಾಲ್, ಪ್ರಸಕ್ತ ಅಧಿವೇಶನದಲ್ಲಿ ಸಚಿನ್ ಮತ್ತು ರೇಖಾ ಅವರು ಸದನಕ್ಕೆ ಹಾಜರಾಗಿದ್ದನ್ನು ನಾನು ನೋಡಿಲ್ಲ ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಉಪಸಭಾಪತಿ ಪಿ.ಜೆ. ಕುರಿಯನ್, ಈ ರೀತಿಯ ಪ್ರಶ್ನೆ ಕೇಳಲು ಬರುವುದಿಲ್ಲ. ನಾಮ ನಿರ್ದೇಶಿತ ಸದಸ್ಯರು ಕೆಲ ದಿನವಾದರೂ ಸದನಕ್ಕೆ ಹಾಜರಾಗುವಂತೆ ಮನವೊಲಿಸಬೇಕು ಎಂದು ಸಲಹೆ ನೀಡಿದರು. ಇದಕ್ಕೆ ಒಪ್ಪಿದ ಅಗರ್ವಾಲ್, ಈ ವಿಷಯವಾಗಿ ಗೈರು ಹಾಜರಾದ ಸದಸ್ಯರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.
ಕಲೆ, ವಿಜ್ಞಾನ, ಸಾಹಿತ್ಯ, ಸಮಾಜ ಸೇವೆ ಹಾಗೂ ಕ್ರೀಡೆಯಲ್ಲಿ ಪರಿಣತಿ ಹೊಂದಿದ 12 ಮಂದಿಯನ್ನು ಮೇಲ್ಮನೆಗೆ ನಾಮನಿರ್ದೇಶನ ಮಾಡಲಾಗುತ್ತದೆ. ಪ್ರಸ್ತುತ ರಾಜ್ಯಸಭೆಯಲ್ಲಿ ಸಚಿನ್ ತೆಂಡೂಲ್ಕರ್, ರೇಖಾ ಸೇರಿದಂತೆ ಅನು ಅಗಾ, ಸಂಬಾಜಿ ಛತ್ರಪತಿ, ಸ್ವಪ್ನದಾಸ್ ಗುಪ್ತಾ, ರೂಪಾ ಗಂಗೂಲಿ, ನರೇಂದ್ರ ಜಾಧವ್, ಎಂ.ಸಿ ಮೇರಿ ಕೋಮ್, ಕೆ. ಪರಾಶರನ್, ಗೋಪಿ ಸುರೇಶ್, ಸುಬ್ರಮಣಿಯನ್ ಸ್ವಾಮಿ ಮತ್ತು ಕೆಟಿಎಸ್ ತುಳಸಿ ನಾಮನಿರ್ದೇಶಿತ ಸದಸ್ಯರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.