
ನವದೆಹಲಿ (ಡಿ.07): ರಾಕೇಶ್ ಆಸ್ತಾನ ಅವರನ್ನು ಸಿಬಿಐ ಹಂಗಾಮಿ ಮುಖ್ಯಸ್ಥರಾಗಿ ನೇಮಕ ಮಾಡಿರುವ ಕೇಂದ್ರ ಸರ್ಕಾರದ ಕ್ರಮ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
ಆಸ್ತಾನ ಅವರ ಇಡೀ ನೇಮಕ ಪ್ರಕ್ರಿಯೆ ಪಾರದರ್ಶಕವಾಗಿರದೇ, ಆಯ್ಕೆ ಸಮಿತಿ ಸಭೆಗೂ ಮುನ್ನವೇ ಆತುರಾತುರವಾಗಿ ಅವರನ್ನು ನೇಮಕ ಮಾಡಲಾಗಿದೆ. ಸೇವಾವಧಿಯಲ್ಲಿ ಅತ್ಯಂತ ಕಿರಿಯರಾಗಿದ್ದರೂ ಇವರನ್ನು ಹೇಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಶ್ನಿಸಿ ಖರ್ಗೆ ಮೋದಿಯವರಿಗೆ ಪತ್ರ ಬರೆದಿದ್ದಾರೆ.
2 ಜಿ ಸ್ಪೆಕ್ಟ್ರಂ ಹಾಗೂ ಕಲ್ಲಿದ್ದಲು ಹಗರಣ ತನಿಖೆಯ ಸಾರಥ್ಯ ವಹಿಸಿರುವ ಆರ್.ಕೆ ದತ್ತಾ ಅಶೋಕ್ ಸಿನ್ಹಾ ನಿವೃತ್ತಿಯ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ಸಿಬಿಐ ಮುಖ್ಯಸ್ಥರಾಗಬೇಕಿತ್ತು. ಅಚ್ಚರಿಯೆಂದರೆ ಸಿನ್ಹಾ ಅವರ ನಿವೃತ್ತಿಗೂ ಮೂರು
ದಿನ ಮುಂಚಿತವಾಗಿ ದತ್ತಾ ಅವರಿಗೆ ವಿಶೇಷ ಹುದ್ದೆಯನ್ನು ಸೃಷ್ಟಿಸಿ ತಕ್ಷಣ ಅಲ್ಲಿಗೆ ವರ್ಗಾವಣೆ ಮಾಡಲಾಗಿದೆ.
2 ಜಿ ಸ್ಪೆಕ್ಟ್ರಂ ಹಾಗೂ ಕಲ್ಲಿದ್ದಲು ಹಗರಣ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ವರ್ಗಾವಣೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಆದರೆ ಇಲ್ಲಿ ದತ್ತಾ ಅವರ ವರ್ಗಾವಣೆ ಆಶ್ಚರ್ಯವನ್ನುಂಟು ಮಾಡಿದೆ.
ಆದರೆ ಸರ್ಕಾರ, ದತ್ತಾ ಅವರು 2 ಜಿ ಸ್ಪೆಕ್ಟ್ರಂ ಹಾಗೂ ಕಲ್ಲಿದ್ದಲು ಹಗರಣದ ತನಿಖಾಧಿಕಾರಿಯಾಗಿರಲಿಲ್ಲ. ಅದರ ಮೇಲ್ವಿಚಾರಣೆ ನಡೆಸುತ್ತಿದ್ದರು. ಹಾಗಾಗಿ ಇವರ ವರ್ಗಾವಣೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದೆ.
ಕಳೆದ ಒಂದು ದಶಕದಲ್ಲಿ ಇದೇ ಮೊದಲ ಬಾರಿಗೆ ಹಂಗಾಮಿ ಮುಖ್ಯಸ್ಥರನ್ನು ಆಯ್ಕೆ ಮಾಡಲಾಗಿದೆ. ಆರ್ ಬಿಐ ಇತಿಹಾಸದಲ್ಲಿ ಇದು ಎರಡನೇ ಬಾರಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.