
ಬೆಂಗಳೂರು(ಫೆ.26): ಡೈರಿ ಗಲಾಟೆಯಲ್ಲಿ ಸಿಎಂ ಸಿದ್ದರಾಮಯ್ಯನವರು ಸಖತ್ ಬೇಜಾರ್ ಆಗಿದ್ದಾರೆ. ಇದರ ಬೆನ್ನಲ್ಲೇ ನಾಳೆ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೀತಿದೆ. ವಿಶೇಷ ಅಂದ್ರೆ ಇಲ್ಲಿ ಸೀನಿಯರ್ ಸಚಿವರಿಗೆ ಕೊಕ್ ಕೊಡುವ ಅವಕಾಶ ಇದೆ ಅಂತಾ ಹೇಳಲಾಗುತ್ತಿದೆ. ಹೀಗಾಗಿ ಏನಾಗುತ್ತದೆ ಎನ್ನುವುದು ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ನಲ್ಲೀಗ ಡೈರಿ ಚರ್ಚೆ ಮುಗಿಲುಮುಟ್ಟಿದೆ. ಯಾರು ಹೇಗೆ ರಕ್ಷಣೆ ಮಾಡಿಕೊಳ್ಳಬೇಕು ಎನ್ನುವುದರ ಬಗ್ಗೆ ಭಾರೀ ಚರ್ಚೆ ನಡೆದಿದೆ. ಇದರ ಬೆನ್ನಲ್ಲೇ ಇಂದು ಮಹತ್ವದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆ ನಡೆಯಲಿದೆ. ವಿಶೇಷವೆಂದರೆ ಈ ಸಭೆ ನಡೆಯುವುದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ. ಚರ್ಚೆಗೆ ಬರುವ ವಿಷಯಗಳು.
ಇಂದು ನಡೆಯುವ ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚಿಸಬಹುದಾದ ವಿಷಯಗಳ ಪಟ್ಟಿಯಲ್ಲಿ 4 ವರ್ಷ ಪೂರೈಸಿದ ಸಚಿವರ ಬದಲಾವಣೆಯೇ ಮೊದಲ ವಿಷಯವಾಗಿದೆ. ಸಂಪುಟದಿಂದ ಹೊರಹೋಗುವವರಿಗೆ ಪಕ್ಷದ ಜವಾಬ್ದಾರಿ ಹಾಗೂ ಮುಂಬರುವ ವಿಧಾನಸಭೆ ಚುನಾವಣೆಗೆ ಗೆಲ್ಲುವ ಅಭ್ಯರ್ಥಿಗಳ ಹೊಣೆಗಾರಿಕೆ ವಹಿಸುವ ಕುರಿತು ಚರ್ಚೆ ನಡೆಸಲಿದ್ದಾರೆ. ಸಂಪುಟಕ್ಕೆ ಗುರುತರ ಅಪಾದನೆ ಇಲ್ಲದ ಹೊಸ ಮುಖಗಳ ಸೇರ್ಪಡೆ, ಸರ್ಕಾರದ ಜನಪ್ರಿಯ ಯೋಜನೆಗಳನ್ನು ಜನರಿಗೆ ತಿಳಿಸಲು ಉನ್ನತ ಮಟ್ಟದ ಸಮಿತಿ ರಚನೆ, 20 ಜಿಲ್ಲೆಗಳ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ, ಕೆಪಿಸಿಸಿಗೆ ನೂತನ ಪದಾಧಿಕಾರಿಗಳ ನೇಮಿಸಲು ಪಟ್ಟಿ ಸಿದ್ಧತೆ, ಪದಾಧಿಕಾರಿಗಳ ಪಟ್ಟಿಲ್ಲಿ ಮೂಲ ಕಾಂಗ್ರೆಸ್ಸಿಗರಿಗೆ ಹೆಚ್ಚಿನ ಆದ್ಯತೆ ,ಮುಂಬರುವ ವಿಧಾನಸಭೆ ಚುನಾವಣೆಗೆ 25 ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ಸೇರಿದೆ. ಅಲ್ಲದೇ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆಗೆ ಸಚಿವ, ಶಾಸಕ, ಪದಾಧಿಕಾರಿಗಳ ಪೈಕಿ ಓರ್ವರನ್ನು ನೇಮಿಸುವ ಕುರಿತು ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
1. ಆರ್.ವಿ. ದೇಶಪಾಂಡೆ, ಬೃಹತ್ ಕೈಗಾರಿಕೆ ಸಚಿವ
2. ಟಿ.ಬಿ. ಜಯಚಂದ್ರ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ
3. ಎಚ್.ಕೆ. ಪಾಟೀಲ್, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ
4. ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
5. ರಮಾನಾಥ್ ರೈ, ಅರಣ್ಯ ಸಚಿವ
6. ಡಾ. ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ
7. ಎಚ್. ಆಂಜನೇಯ, ಸಮಾಜ ಕಲ್ಯಾಣ ಸಚಿವ
8. ಎಂ.ಬಿ. ಪಾಟೀಲ್, ಜಲಸಂಪನ್ಮೂಲ ಸಚಿವ
9. ಯು.ಟಿ. ಖಾದರ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ
10. ಉಮಾಶ್ರೀ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವ
11. ಕೃಷ್ಣ ಭೈರೇಗೌಡ, ಕೃಷಿ ಸಚಿವ
12. ಡಾ. ಶರಣಪ್ರಕಾಶ್ ಪಾಟೀಲ್, ವೈದ್ಯಕೀಯ ಸಚಿವರು
ಒಟ್ಟಾರೆ, ಸಿಎಂ ಸಿದ್ದರಾಮಯ್ಯ ಡೈರಿ ಬಿಸಿಯಲ್ಲಿ ಸೈಲೆಂಟ್ ಆಗಿರುವ ಬೆನ್ನಲ್ಲೇ ಇಂದು ಸಮನ್ವಯ ಸಮಿತಿ ಸಭೆ ನಡೀತಿದೆ. ಈ ಮೂಲಕ ಡೈರಿ ಪ್ರಕರಣದ ಡ್ಯಾಮೇಜ್ ಕಂಟ್ರೋಲ್ ಮಾಡೋದಕ್ಕೆ ಹೊರಟಿದ್ದಾರೋ ಇಲ್ಲವೋ, ಇದರ ಹಿಂದೆ ಇನ್ನೇನಾದರೂ ಯೋಜನೆ ಇದೆಯಾ ಎನ್ನುವುದೇ ಈಗಿರುವ ಕುತೂಹಲ.
ವರದಿ: ವೀರೇಂದ್ರ ಉಪ್ಪುಂದ, ಸುವರ್ಣನ್ಯೂಸ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.