ಮೋದಿ ಜನರ ಪ್ರಧಾನಿ: ಬದಲಾಗ್ತಿದೆ ಕೈ ನಾಯಕರ ಧ್ವನಿ!

Published : Aug 23, 2019, 03:59 PM ISTUpdated : Aug 23, 2019, 04:26 PM IST
ಮೋದಿ ಜನರ ಪ್ರಧಾನಿ: ಬದಲಾಗ್ತಿದೆ ಕೈ ನಾಯಕರ ಧ್ವನಿ!

ಸಾರಾಂಶ

ಮೋದಿ ಅವರನ್ನು ತೆಗಳಿದರೆ ಏನೂ ಪ್ರಯೋಜನವಿಲ್ಲ ಎಂದ ಕೈ ನಾಯಕ| ಇದು ಮೋದಿ ಅವರ ಕೆಲಸ ಗುರುತಿಸುವ ಸಮಯ ಎಂದ ಜೈರಾಮ್ ರಮೇಶ್| ನರೇಂದ್ರ ಮೋದಿ ಜನರಿಗೆ ಹತ್ತಿರವಾಗಿರುವ ಪ್ರಧಾನಿ ಎಂದ ಜೈರಾಮ್ ರಮೇಶ್| ಮೋದಿ ಅವರ ಯೋಜನೆ ಹೊಗಳುವುದು ತಪ್ಪಲ್ಲ ಎಂದ ಅಭಿಷೇಕ್ ಮನು ಸಿಂಘ್ವಿ|

ನವದೆಹಲಿ(ಆ.23): ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿ ಹೊಗಳುವ ಜಗತ್ತು ಒಂದೆಡೆಯಾದರೆ, ಅದನ್ನು ತೆಗಳುವ ಮೂಲಕವೇ ರಾಜಕೀಯ ಅಸ್ತಿತ್ವ ಹುಡುಕುತ್ತಿರುವ ಕಾಂಗ್ರೆಸ್ ಇನ್ನೊಂದೆಡೆ.

ಆದರೆ ಇದೀಗ ಕೈ ನಾಯಕರ ವರಸೆಯೂ ಬದಲಾಗುತ್ತಿದೆ. ಕೇವಲ ಪ್ರಧಾನಿ ಮೋದಿ ಅವರನ್ನು ಟೀಕಿಸುವುದರಿಂದ ರಾಜಕೀಯ ಲಾಭ ಸಾಧ್ಯವಿಲ್ಲ ಎಂದು ಕೈ ನಾಯಕರು ಅರಿತಂತಿದೆ. ಇದೇ ಕಾರಣಕ್ಕೆ ಪ್ರಧಾನಿ ಮೋದಿ ಅವರನ್ನು ಹೊಗಳುವ ಮೂಲಕ ಕೆಲವು ಕಾಂಗ್ರಸ್ ನಾಯಕರು ಅಚ್ಚರಿ ಮೂಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಆಡಳಿತ ವಿಧಾನ ಯಾವಾಗಲೂ ಕೆಟ್ಟದು ಎಂದು ಪ್ರತಿ ಬಾರಿಯೂ ಅವರನ್ನು ದೂಷಿಸುವುದು ಸರಿಯಲ್ಲ, ಇದರಿಂದ ಯಾವ ಪ್ರಯೋಜನವೂ ಇಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.

ಮೋದಿಯವರ ಕೆಲಸವನ್ನು ಗುರುತಿಸುವ ಸಮಯ ಇದಾಗಿದ್ದು, ದೇಶದ ಜನ ಅವರ ಆಡಳಿತ ವೈಖರಿಯನ್ನು ಮೆಚ್ಚಿದ್ದರಿಂದಲೇ ಅವರು ಮತ್ತೆ ಅಧಿಕಾರಕ್ಕೆ ಬಂದಿದ್ದಾರೆ ಎಂದು ಜೈರಾಮ್ ರಮೇಶ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಭಾರತೀಯ ಜನತಾ ಪಾರ್ಟಿ ಈ ವರ್ಷದ ಲೋಕಸಭಾ ಚುನಾವಣೆಯಲ್ಲಿ ಶೇಕಡಾ 37.4ರಷ್ಟು ಮತಗಳನ್ನು ಪಡೆದಿದೆ. ಅದರಂತೆ ಎನ್‌ಡಿಎ ಮೈತ್ರಿಕೂಟ ಒಟ್ಟಾರೆ ಶೇಕಡಾ 45ರಷ್ಟು ಮತಗಳನ್ನು ಪಡೆದಿದೆ. ಇದು ಮೋದಿ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ ಎಂದು ಜೈರಾಮ್ ರಮೇಶ್ ಅಭಿಪ್ರಾಯಪಟ್ಟಿದ್ದಾರೆ.

ಹೀಗಾಗಿ ಪ್ರತಿ ಬಾರಿಯೂ ಮೋದಿಯವರನ್ನು ತೆಗಳುತ್ತಾ, ಟೀಕಿಸುತ್ತಾ ಹೋದರೆ ಅವರನ್ನು ಸೋಲಿಸಲು ಸಾಧ್ಯವೇ ಇಲ್ಲ ಎಂದು ಹೇಳಿರುವ ಮಾಜಿ ಕೇಂದ್ರ ಸಚಿವ, ಬದಲಾದ ರಾಜಕೀಯ ಸನ್ನಿವೇಶಕ್ಕೆ ತಕ್ಕಂತೆ ಪ್ರತಿಪಕ್ಷಗಳು ತಮ್ಮ ನೀತಿ ನಿರೂಪಣೆ ನಿರ್ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಇನ್ನು ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸಿರುವ ಕಾಂಗ್ರೆಸ್ ಮತ್ತೋರ್ವ ನಾಯಕ ಅಭಿಷೇಕ್ ಮನು ಸಿಂಘ್ವಿ, ವಿರೋಧ ಪಕ್ಷಗಳದ್ದು ಸೈದ್ಧಾಂತಿಕ ವಿರೋಧ ಇರಬೇಕೆ ಹೊರತು ವ್ಯಕ್ತಿಯಾಧಾರಿತ ವಿರೋಧ ಸಲ್ಲದು ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಟೀಕಿಸುವ ಪ್ರತಿಪಕ್ಷ ನಾಯಕರ ರೀತಿ ಬದಲಾಗಲಿದೆ ಎಂಬ ಮುನ್ಸೂಚನೆ ಈ ನಾಯಕರ ಹೇಳಿಕೆಗಳಿಂದ ದೊರೆತಿದೆ ಎಂದು ಹೇಳಬಹುದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು