
ಬೆಂಗಳೂರು(ಮಾ.20): ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಗೆಲುವಿನ ಮುಂದೆ ಕಾಂಗ್ರೆಸ್ ಧೂಳಿಪಟವಾಗಿದೆ. ಹೀಗಾಗಿ ಕರ್ನಾಟಕದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭಾ ಚುನಾವಣೆಗೆ ರಾಹುಲ್ ಗಾಂಧಿ ಈಗಿನಿಂದಲೇ ರಣತಂತ್ರ ಹೆಣೆಯುತ್ತಿದ್ದಾರೆ. ಹಲವು ಸೂತ್ರಗಳನ್ನು ಮುಂದಿಟ್ಟುಕೊಂಡು ಪ್ರಯೋಗಕ್ಕೆ ಸಿದ್ಧವಾಗಿರುವ ಕಾಂಗ್ರೆಸ್ ಹೈಕಮಾಂಡ್ ರಾಜ್ಯದಲ್ಲಿ ಮೇಜರ್ ಆಪರೇಷನ್ ಗೆ ಮುಂದಾಗಿದೆ.
ಮೋದಿ ಅಲೆಯಿಂದ ಕಾಂಗ್ರೆಸ್ ನಲ್ಲಿ ನಡುಕ ಶುರುವಾಗಿದೆ. ಮೋದಿ, ಅಮಿತ್ ಷಾ ನೆಕ್ಸ್ ಟಾಗ್ರೆಟ್ ಕರ್ನಾಟಕ ಅಂತನೇ ಹೇಳಲಾಗುತ್ತಿದೆ. ಹೀಗಾಗಿ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಹೈಕಮಾಂಡ್ ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಕರ್ನಾಟಕ ಉಳಿಸಿಕೊಳ್ಳಲು ಪಕ್ಷದಲ್ಲಿ ಕೆಲ ಬದಲಾವಣೆ ಮಾಡಲು ಚಿಂತನೆ ನಡೆಸಿದೆ.
ಕರ್ನಾಟಕದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕು ಎಂದು ಕಾಂಗ್ರೆಸ್ ಹೈ ಕಮಾಂಡ್ ನಿರ್ಧರಿಸಿದೆ. ಹೀಗಾಗಿ ಒಂದು ವರ್ಷಕ್ಕೂ ಮೊದಲೇ ಕಾರ್ಯತಂತ್ರ ರೂಪಿಸಲು ಆರಂಭಿಸಿದೆ. ಈ ಪೈಕಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ, ಪದಾಧಿಕಾರಿಗಳ ಬದಲಾವಣೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆಗಳೂ ಸೇರಿವೆ. ಈ ಪೈಕಿ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರ ಬದಲಾವಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ.
ಹೌದು. ಗೋವಾದಲ್ಲಿ ಹೆಚ್ಚು ಸ್ಥಾನ ಗಳಿಸಿದರೂ ಅಧಿಕಾರ ಹಿಡಿಯಲು ಕಾಂಗ್ರೆಸ್ ಗೆ ಸಾಧ್ಯವಾಗಲಿಲ್ಲ,. ಇದಕ್ಕೆ ಕಾರಣ ಗೋವಾ ಉಸ್ತುವಾರಿಯೂ ಆಗಿದ್ದ ದಿಗ್ವಿಜಯ್ ಸಿಂಗ್ ವಿಳಂಬ ನಿರ್ಧಾರಗಳೇ ಎಂದು ಹೇಳಲಾಗಿತ್ತು. ಹೀಗಾಗಿ ಕರ್ನಾಟಕದಲ್ಲಿ ರಾಜ್ಯ ಉಸ್ತುವಾರಿಯಿಂದ ದಿಗ್ವಿಜಯ್ ಸಿಂಗ್ ಕೈ ಬಿಟ್ಟು ಚರಣದಾಸ್ ಅಥವಾ ಗುಲಾಂ ನಬಿ ಆಜಾದ್ ಅವರನ್ನು ರಾಜ್ಯಕ್ಕೆ ತರುವ ಸಾಧ್ಯತೆ ಹೆಚ್ಚಿದೆ.
ಬಹುದಿನಗಳಿಂದ ಕಾಂಗ್ರೆಸ್ನ ಕೆಲ ಪ್ರಮುಖ ನಾಯಕರು ದಿಗ್ವಿಜಯ್ ಸಿಂಗ್ ಬದಲಾವಣೆಗೆ ತೆರೆಮರೆಯಲ್ಲಿ ಒತ್ತಾಯಿಸುತ್ತಿದ್ದರು. ಕಡೆಗೂ ಕಾಂಗ್ರೆಸ್ ಹೈಕಮಾಂಡ್ ದಿಗ್ವಿಜಯ್'ರನ್ನ ರಾಜ್ಯ ಉಸ್ತುವಾರಿ ಸ್ಥಾನದಿಂದ ಕೈಬಿಡಲು ನಿರ್ಧರಿಸಿದೆ ಅನ್ನೋ ಮಾಹಿತಿ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಇದೇ ವೇಳೆ ಕಾಂಗ್ರೆಸ್ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷರ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಲಿದ್ದು, ಹಾಲಿ ಅಧ್ಯಕ್ಷ ಡಾ. ಜಿ ಪರಮೇಶ್ವರ್ ಭವಿಷ್ಯವೂ ನಿರ್ಧರವಾಗಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.