ಕಣ್ಣಿಗೆ ಬಟ್ಟೆ, ಬಾಯಿಗೆ ಬೀಗ, ಕಿವಿಗೆ ಹತ್ತಿ: ಆಸ್ಪ್ರೇಲಿಯಾದಿಂದ ಬಂದ ಡಿಕೆಶಿ

By Web DeskFirst Published May 28, 2019, 8:34 AM IST
Highlights

ಲೋಕಸಭಾ ಚುನಾವಣೆ ಫಲಿತಾಂಶಕ್ಕೂ ಮುನ್ನ ಕುಟುಂಬ ಸಮೇತರಾಗಿ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿದ್ದ ಡಿಕೆ ಶಿವಕುಮಾರ್ ರಾಜ್ಯಕ್ಕೆ ಮರಳಿದ್ದಾರೆ.

ದೇವನಹಳ್ಳಿ: ಗಾಂಧೀಜಿ ಅವರ ಮಾತಿನಂತೆ ಬಾಯಿಗೆ ಬೀಗ ಹಾಕ್ಕೊಂಡಿದೀನಿ, ಕಣ್ಣಿಗೆ ಬಟ್ಟೆಕಟ್ಟಿಕೊಂಡಿದ್ದೀನಿ, ಕಿವಿಗೆ ಹತ್ತಿ ಇಟ್ಟುಕೊಂಡಿದ್ದೀನಿ... ಆಸ್ಪ್ರೇಲಿಯಾ ಪ್ರವಾಸ ಮುಗಿಸಿ ಸೋಮವಾರ ತಡರಾತ್ರಿ ಬೆಂಗಳೂರಿಗೆ ಮರಳಿದ ಟ್ರಬಲ್‌ ಶೂಟರ್‌ ಖ್ಯಾತಿಯ ಕಾಂಗ್ರೆಸ್‌ ನಾಯಕ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಾತು.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದಿಂದ ಹೊರಬರುತ್ತಿದ್ದಂತೆ ತಮ್ಮನ್ನು ಮುತ್ತಿದ ಮಾಧ್ಯಮ ಮಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆಲ್ಲಾ ಗೊತ್ತಾಗಿದೆ. ಎಲ್ಲಾ ಮಾಹಿತಿ ದೊರೆತಿದೆ. ಆದರೆ, ರಾಜ್ಯದ ಮತ್ತು ಮಂಡ್ಯದ ಚುನಾವಣಾ ಫಲಿತಾಂಶ ಬಗ್ಗೆ ನಾನೇನೂ ಮಾತಾಡುವುದಿಲ್ಲ ಎಂದರು.

ಆಸ್ಪ್ರೇಲಿಯಾ ಪ್ರವಾಸದಲ್ಲಿದ್ದಾಗ ಫೇಸ್‌ಬುಕ್‌, ಟ್ವೀಟರ್‌, ವಾಟ್ಸಾಪ್‌ ಯಾವುದನ್ನೂ ಬಳಸಲಿಲ್ಲ. ಎಲ್ಲದರಿಂದಲೂ ದೂರವಿದ್ದೆ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶದ ಮಾಹಿತಿ ನನಗೆ ಕಾಲಕಾಲಕ್ಕೆ ತಿಳಿಯುತ್ತಿತ್ತು ಎಂದೂ ಅವರು ತಿಳಿಸಿದರು.

ಲೋಕಸಭಾ ಚುನಾವಣೆ ಹಾಗೂ ಕುಂದಗೋಳ-ಚಿಂಚೋಳಿ ಉಪಚುನಾವಣೆ ಮುಗಿಯುತ್ತಿದ್ದಂತೆ ಡಿಕೆಶಿ ಕುಟುಂಬಸಮೇತರಾಗಿ ಆಸ್ಪ್ರೇಲಿಯಾ ಪ್ರವಾಸಕ್ಕೆ ತೆರಳಿದ್ದರು. ರಾಜ್ಯದಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆ ಸಂಭವಿಸುತ್ತಿದ್ದರೂ ಚುನಾವಣಾ ಫಲಿತಾಂಶ ಸಂದರ್ಭ ಅವರು ವಿದೇಶ ಪ್ರವಾಸದಲ್ಲಿಯೇ ಇದ್ದರು ಎಂಬುದು ಇಲ್ಲಿ ಗಮನಾರ್ಹ.

click me!