
ಬೆಂಗಳೂರು(ಡಿ.6): ಹೈದರಾಬಾದ್ ಕರ್ನಾಟಕ ಆರಂಭದಿಂದಲೂ ಕಾಂಗ್ರೆಸ್ನ ಭದ್ರಕೋಟೆ. ಮೇರು ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರ ಪ್ರಭಾವ ಹಾಗೂ ಈ ಕ್ಷೇತ್ರಕ್ಕೆ ವಿಶೇಷ ಸ್ಥಾನಮಾನ ಕೊಡಿಸುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಈಗಲೂ ಪಕ್ಷದ ಜನಪ್ರಿಯತೆಯನ್ನು ಕಾಯ್ದುಕೊಂಡಿದೆ. ತೀವ್ರ ಪ್ರಯತ್ನಪಟ್ಟರೂ ಬಿಜೆಪಿ ಹಾಗೂ ಜೆಡಿಎಸ್ ಈ ಪ್ರದೇಶದಲ್ಲಿ ಭದ್ರವಾಗಿ ಇನ್ನು ಕಾಲೂರಲು ಆಗಿಲ್ಲ. ಈ ಮಾತನ್ನು ಸಮೀಕ್ಷೆ ಸಮರ್ಥಿಸುತ್ತದೆ.
ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳ 40 ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಕಡಿಮೆ ಕಳೆದ 2013 ರ ಚುನಾವಣೆಯ ಫಲಿತಾಂಶ ಪುನರಾವರ್ತನೆಯಾಗುವಂತೆ ಕಾಣುತ್ತಿದೆ ಎಂದೇ ಸಮೀಕ್ಷೆ ಹೇಳುತ್ತಿದೆ. ಈ ಸಮೀಕ್ಷೆಯ ಪ್ರಕಾರ ಈ ಬಾರಿ ಪಕ್ಷೇತರರ ಶಕ್ತಿ ಕುಂದುವಂತೆ ಕಾಣುತ್ತಿದೆ. ಕಳೆದ ಬಾರಿ ಶೇ.32.3 ಮತಗಳಿಕೆ ಮೂಲಕ ಏಳು ಸ್ಥಾನಗಳಲ್ಲಿ ವಿಜೃಂಭಿಸಿದ್ದ ಇತರರಿಗೆ ಈ ಬಾರಿ ಶೇ.17ರಷ್ಟು ಮಾತ್ರ ಮತಗಳಿಕೆ ಸಾಧ್ಯತೆ ಇದ್ದು, ಸೀಟು ಗಳಿಕೆ ನಾಲ್ಕಕ್ಕೆ ಕುಸಿದಿದೆ. ಇತರರ ಈ ಕುಂದಿದ ಶಕ್ತಿ ಮೂರು ಪ್ರಮುಖ ಪಕ್ಷಗಳಿಗೆ ತುಸು ಬಲ ಹೆಚ್ಚಿಸಲಿದೆ. ಇದನ್ನು ಹೊರತುಪಡಿಸಿದರೆ ಈ ಪ್ರದೇಶ ಬಹುತೇಕ ಕಳೆದ ಬಾರಿಯ ರಿಪೀಟ್ ಶೋದಂತೆ ಕಾಣುತ್ತಿದೆ. 2013ರ ಚುನಾವಣೆಯಲ್ಲಿ ಶೇ.34.7 ಮತಗಳಿಕೆ ಮೂಲಕ 23 ಸ್ಥಾನ ಗಳಿಸಿದ್ದ ಕಾಂಗ್ರೆಸ್ಗೆ ಈ ಬಾರಿ ಮತ ಗಳಿಕೆ ಶೇ.32 ಆಗುವ ಸಂಭವವಿದೆ. ಅಂದರೆ, ಶೇ.2ರಷ್ಟು ಮತಗಳಿಕೆ ಕುಸಿಯಬಹುದು. ಆದಾಗ್ಯೂ ಕಾಂಗ್ರೆಸ್ ಒಂದು ಸ್ಥಾನ ಹೆಚ್ಚಿಸಿಕೊಂಡಿದೆ. ಅಂದರೆ, ಈ ಬಾರಿ 24 ಸ್ಥಾನಗಳನ್ನು ಗಳಿಸುವ ಭವಿಷ್ಯ ನುಡಿಯಲಾಗಿದೆ. ಅದೇ ರೀತಿ ಜೆಡಿಎಸ್ ಕೂಡ ಮತಗಳಿಕೆಯಲ್ಲಿ ಕಳೆದ ಬಾರಿಗಿಂತ ಈ ಬಾರಿ ತುಸು ಕಡಿಮೆ ಯಾಗಿದ್ದರೂ ಸಂಖ್ಯೆ ಹೆಚ್ಚಿಸಿಕೊಳ್ಳಲಿದೆ.
ಕಳೆದ ಬಾರಿ ಶೇ.16.1ರ ಮತಗಳ ಮೂಲಕ 5 ಕ್ಷೇತ್ರಗಳಲ್ಲಿ ಗೆಲುವು ಕಂಡಿದ್ದ ಜೆಡಿಎಸ್ನ ಮತ ಗಳಿಕೆ ಈ ಬಾರಿ ಶೇ.15 (ಶೇ.1ರಷ್ಟು ಕುಸಿತ) ಆಗಲಿದ್ದರೂ ಸ್ಥಾನ ಗಳಿಕೆ 6ಕ್ಕೆ ಹೆಚ್ಚಿದೆ. ಆದರೆ, ಬಿಜೆಪಿ ಮಾತ್ರ ಶೇಕಡಾವಾರು ಮತ ಹಾಗೂ ಸೀಟು ಎರಡರಲ್ಲೂ ಅಲ್ಪ ಗಳಿಕೆ ಕಾಣುವಂತಿದೆ. ಕಳೆದ ಬಾರಿ ಶೇ.16.9ರ ಮತಗಳಿಕೆ ಮೂಲಕ 5 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಈ ಬಾರಿ ಶೇ.19ರ ಮತಗಳಿಕೆ ಮೂಲಕ ಆರು ಸೀಟು ಗಳಿಸುವ ಸಂಭವವಿದೆ. ಈ ಭಾಗದಲ್ಲಿ ಕಾಂಗ್ರೆಸ್ ಅನ್ನು ಯಾರಿಗಾದರೂ ಸೋಲಿಸುವ ಸಾಮರ್ಥ್ಯ ವಿದ್ದರೆ ಅದು ಕಾಂಗ್ರೆಸ್ಸಿಗೆ ಮಾತ್ರ! ಕಾಂಗ್ರೆಸ್ನ ಒಳಜಗಳ ಈ ಬಾರಿ ಮುಳುವಾಗುವ ಸಾಧ್ಯತೆಯಿದೆ. ಪಕ್ಷದ ಹಲವು ಶಾಸಕರು ಪಕ್ಷ ತಮ್ಮನ್ನು ಗೌರವವಾಗಿ ನಡೆಸಿಕೊಂಡಿಲ್ಲ ಎಂಬ ಭಾವನೆ ಹೊಂದಿದ್ದಾರೆ.
ಈ ಶಾಸಕರಿಗೆ ಗಾಳ ಹಾಕಲು ಬಿಜೆಪಿ ಹಾಗೂ ಜೆಡಿಎಸ್ ಕಾಯುತ್ತಲೇ ಇವೆ. ಈ ವಿಚಾರದಲ್ಲಿ ಬಿಜೆಪಿ ಒಂದು ಹೆಜ್ಜೆ ಮುಂದಿದೆ. ಅದೇ ರೀತಿ ಈ ಭಾಗದಲ್ಲಿ ನಡೆದ ಸಮೀಕ್ಷೆಯಲ್ಲಿ ಶೇ.18ರಷ್ಟು ಮತದಾರರು ತಮ್ಮ ನಿಲುವನ್ನು ಇನ್ನೂ ಸ್ಪಷ್ಟಪಡಿಸಿಲ್ಲ. ಇದು ಸಹ ನಿರ್ಣಾಯಕ. ಜತೆಗೆ, ಲಿಂಗಾಯತ ಧರ್ಮ ವಿಚಾರವೂ ಪರಿಣಾಮ ಬೀರುವ ಸಂಭವವಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.