ರಾಜ್ಯದ ಜನರೇ ಎಚ್ಚರ : ಮುಂದುವರಿಯಲಿದೆ ಕೊರೆವ ಭಾರಿ ಚಳಿ

Published : Jan 09, 2018, 01:00 PM ISTUpdated : Apr 11, 2018, 12:57 PM IST
ರಾಜ್ಯದ ಜನರೇ ಎಚ್ಚರ :  ಮುಂದುವರಿಯಲಿದೆ ಕೊರೆವ ಭಾರಿ ಚಳಿ

ಸಾರಾಂಶ

ರಾಜ್ಯಾದ್ಯಂತ ಕೊರೆಯುವ ಚಳಿಯ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಹೆಚ್ಚು ಗಾಳಿ ಬೀಸುತ್ತಿದ್ದು, ಚಳಿ ಅನುಭವ ಮತ್ತಷ್ಟು ಹೆಚ್ಚಾಗಿದೆ. ಇನ್ನೂ 2-3 ದಿನ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು (ಜ.09): ರಾಜ್ಯಾದ್ಯಂತ ಕೊರೆಯುವ ಚಳಿಯ ನಡುವೆ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಹೆಚ್ಚು ಗಾಳಿ ಬೀಸುತ್ತಿದ್ದು, ಚಳಿ ಅನುಭವ ಮತ್ತಷ್ಟು ಹೆಚ್ಚಾಗಿದೆ. ಇನ್ನೂ 2-3 ದಿನ ಇದೇ ವಾತಾವರಣ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಡಿಸೆಂಬರ್ ಕೊನೆಯ ವಾರದಲ್ಲಿ ಮೈಕೊರೆಯುತ್ತಿದ್ದ ಚಳಿಯ ತೀವ್ರತೆ ಕಳೆದ ಒಂದು ವಾರದಿಂದ ಕಡಿಮೆ ಆಗಿತ್ತು. ಇದೀಗ ಸೋಮವಾರ ಬೆಳಗ್ಗೆಯಿಂದ ಮತ್ತೆ ಚಳಿಯ ತೀವ್ರತೆ ಹೆಚ್ಚಾಗಿದ್ದು, ಕನಿಷ್ಠ ಉಷ್ಣಾಂಶದಲ್ಲಿ ಯಾವುದೇ ಏರುಪೇರು ಉಂಟಾಗಿಲ್ಲ. ಆದರೂ ಕಡಿಮೆ ತಾಪಮಾನ ಇದ್ದಾಗ ಗಾಳಿ ಬೀಸಿದರೆ ಚಳಿಯ ಅನುಭವ ಹೆಚ್ಚಾಗಲಿದೆ.

ಹೀಗಾಗಿಯೇ ಸೋಮವಾರ ಚಳಿಯ ಅನುಭವ ತೀವ್ರವಾಗಿ ಕಂಡು ಬಂದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ವಿಜಯಪುರದಲ್ಲಿ 10.5 ಡಿಗ್ರಿ ಕನಿಷ್ಠ ತಾಪಮಾನ ದಾಖಲಾಗಿದೆ. ಬೆಂಗಳೂರು ನಗರದಲ್ಲಿ ಸರಾಸರಿ ಕನಿಷ್ಠ ತಾಪಮಾನ 16 ಡಿಗ್ರಿಗೆ ಬದಲಾಗಿ 14 ಡಿಗ್ರಿ ದಾಖಲಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 12.4 ಡಿಗ್ರಿ ದಾಖಲಾಗಿದೆ. ಜನವರಿ 14ರವರೆಗೂ ಇದೇ ವಾತಾವರಣ ಮುಂದುವರೆಯಲಿದ್ದು, ಬಳಿಕ 1 ಡಿಗ್ರಿಯಷ್ಟು ತಾಪಮಾನ ಹೆಚ್ಚಾಗಲಿದೆ.

ಈ ಬಗ್ಗೆ ‘ಕನ್ನಡಪ್ರಭ’ಕ್ಕೆ ಪ್ರತಿಕ್ರಿಯಿಸಿದ ಹವಾಮಾನ ಇಲಾಖೆ ಬೆಂಗಳೂರು ವಲಯದ ನಿರ್ದೇಶಕ ಸುಂದರ್ ಮೇತ್ರಿ, ಕಳೆದ ಒಂದು ವಾರದಿಂದಲೂ ಇದೇ ತಾಪಮಾನ ಇದ್ದರೂ ಸೋಮವಾರ ಹೆಚ್ಚು ಚಳಿಯ ಅನುಭವ ಉಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಕರಾವಳಿಯಲ್ಲಿ ಮೇಲ್ಮೈ ಸುಳಿಗಾಳಿ ಕಾಣಿಸಿಕೊಂಡಿದೆ.

ವಾತಾವರಣದಲ್ಲಾದ ಬದಲಾವಣೆಯಿಂದಾಗಿ ಉತ್ತರ ಹಾಗೂ ಈಶಾನ್ಯ ದಿಕ್ಕಿನಿಂದ ಗಾಳಿ ಬೀಸುತ್ತಿದೆ. ಕನಿಷ್ಠ ತಾಪಮಾನ ಕಳೆದ ವಾರದಿಂದಲೂ ಹೆಚ್ಚುಕಡಿಮೆ ಯಥಾಸ್ಥಿತಿ ಇದೆ. ಆದರೆ ಕನಿಷ್ಠ ತಾಪಮಾನ ಇದ್ದಾಗ ಗಾಳಿ ಬೀಸಿದರೆ ಚಳಿಯ ಅನುಭವ ತೀವ್ರವಾಗುತ್ತದೆ. ಇದೇ ಕಾರಣಕ್ಕೆ ಸೋಮವಾರ ಚಳಿಯ ಅನುಭವ ಹೆಚ್ಚಾಗಿದೆ ಎಂದು ತಿಳಿಸಿದರು. ಅಲ್ಲದೇ, ಮುಂದಿನ ಎರಡು ಮೂರು ದಿನಗಳ ಕಾಲ ಇದೇ ವಾತಾವರಣ ಮುಂದುವರೆಯಲಿದೆ. ಗಾಳಿಯಿಂದಾಗಿ ಚಳಿಯ ತೀವ್ರತೆ ಹೆಚ್ಚಾಗಿ ಅನುಭವಕ್ಕೆ ಬರಲಿದೆ. ಕ್ರಮೇಣ ಚಳಿಯ ಅನುಭವ ಕಡಿಮೆಯಾಗಲಿದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರೇಷ್ಮೆ ಕೃಷಿಯಲ್ಲಿ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ವಿಶೇಷ ಆದ್ಯತೆ: ಸಚಿವ ಕೆ.ವೆಂಕಟೇಶ್ ಘೋಷಣೆ
ಬಸ್‌ಗಳ ಬೆನ್ನಲ್ಲೇ ಈಗ ಬಿಎಂಟಿಸಿ ಟಿಕೆಟ್ ಹಿಂದೆಯೂ ಜಾಹೀರಾತು: ಆದಾಯ ಹೆಚ್ಚಳಕ್ಕೆ ಸಂಸ್ಥೆ ಮಾಸ್ಟರ್ ಪ್ಲಾನ್!