
ಬೆಂಗಳೂರು (ಜೂ.27): ಸಿದ್ದರಾಮಯ್ಯ ಸಂಪುಟದಲ್ಲಿ ಮೂರು ಸಚಿವ ಸ್ಥಾನಗಳು ಸದ್ಯಕ್ಕೆ ಖಾಲಿ ಇವೆ. ಮಹದೇವ ಪ್ರಸಾದ್ ನಿಧನದಿಂದಾಗಿ ಒಂದು ಸ್ಥಾನ ತೆರವಾಗಿದ್ದರೆ, ಹೆಚ್ ವೈ ಮೇಟಿ ರಾಸಲೀಲೆ ಆರೋಪದ ಹಿನ್ನಲೆಯಲ್ಲಿ ರಾಜೀನಾಮೆ ನೀಡಿದ್ದರು. ಹೈಕಮಾಂಡ್ ಸೂಚನೆ ಮೇರೆಗೆ ಗೃಹ ಖಾತೆಗೆ ಪರಮೇಶ್ವರ್ ರಾಜೀನಾಮೆ ನೀಡಿದ್ದರು. ಈ ಮೂವರಿಂದ ತೆರವಾಗಿದ್ದ ಸ್ಥಾನಕ್ಕೆ ಯಾರನ್ನ ತರಬೇಕು ಅನ್ನೋದೇ ಸಿಎಂ ಸಿದ್ದರಾಮಯ್ಯಗೆ ದೊಡ್ಡ ತಲೆ ನೋವಾಗಿದೆ.
ಇನ್ನು ಖಾಲಿ ಇರುವ ಸಹಕಾರ, ಅಬಕಾರಿ ಮತ್ತು ಗೃಹ ಖಾತೆಗಳು ಮಹತ್ವದ ಖಾತೆಗಳೇ ಆಗಿವೆ. ಈ ಹಿಂದೆ ಈ ಖಾತೆಗಳನ್ನು ನಿಭಾಯಿಸಿದವರೆಲ್ಲ ಹಿರಿಯರು ಮತ್ತು ಸಮರ್ಥರೇ ಆಗಿದ್ದಾರೆ. ಆದರೆ ಈ ಬಾರಿ ಸಮರ್ಥರಾರು ಸಿಗುತ್ತಿಲ್ಲ. ಅದರಲ್ಲೂ ಗೃಹ ಖಾತೆ ಬೇಡವೇ ಬೇಡ ಅಂತಾ ಕಡ್ಡಿ ಮುರಿದವರಂತೆ ಹಿರಿಯರು ಹೇಳುತ್ತಿದ್ದಾರೆ. ಇನ್ನೇನು ಚುನಾವಣೆ ವರ್ಷವಾದ್ದರಿಂದ ಸಮರ್ಥರಿಗೆ ಗೃಹ ಇಲಾಖೆ ಜವಾಬ್ದಾರಿ ನೀಡಬೇಕು ಅನ್ನೋದು ಸಿಎಂ ಅನಿಸಿಕೆ. ಆದ್ದರಿಂದ ಹಿರಿಯ ಸಚಿವರಾದ ರಮೇಶಕುಮಾರ್, ಆರ್ ವಿ ದೇಶಪಾಂಡೆ, ಹೆಚ್ ಸಿ ಮಹದೇವಪ್ಪ, ರಾಮಲಿಂಗಾರೆಡ್ಡಿ ಅವರನ್ನ ಸಿಎಂ ಗೃಹ ಇಲಾಖೆ ಹೊಣೆ ಹೊತ್ತುಕೊಳ್ಳುವಂತೆ ಕೇಳಿದ್ದಾರೆ. ಆದರೆ ಇವರೆಲ್ಲಾ ನಿರಾಕರಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಕೆಂಪಯ್ಯ. ಗೃಹ ಇಲಾಖೆಯಲ್ಲಿ ಕೆಂಪಯ್ಯ ಹೇಳಿದಂತೆ ಎಲ್ಲವೂ ನಡೆಯುತ್ತದೆ. ಹಾಗಾಗಿ ಇಲಾಖೆ ಹೊಣೆ ಹೊತ್ತು ಏನ್ಮಾಡೋದಿದೆ ಅನ್ನೋದು ಇವರ ವಾದ. ಕೆಂಪಯ್ಯರನ್ನ ಇಲಾಖೆಯಿಂದ ದೂರ ಇಡೋದಾದ್ರೆ ನಾವು ರೆಡಿ. ಇಲ್ಲವಾದಲ್ಲಿ ನಮ್ಮನ್ನ ನಮ್ಮ ಪಾಡಿಗೆ ಬಿಡಿ ಅನ್ನೋ ರೀತಿಯಲ್ಲಿ ಹಿರಿಯ ಸಚಿವರು ಸಿಎಂ ಸಿದ್ದರಾಮಯ್ಯಗೆ ಹೇಳಿದ್ದಾರೆ ಎನ್ನಲಾಗಿದೆ. ಹೀಗಾಗಿ ಗೃಹ ಇಲಾಖೆ ಜವಾಬ್ದಾರಿ ಹೊರೋದಕ್ಕೆ ಕೆಂಪಯ್ಯ ಪ್ರಮುಖ ಅಡ್ಡಿಯಾಗಿದ್ದಾರೆ. ಸಿದ್ದರಾಮಯ್ಯ ಕೆಂಪಯ್ಯರನ್ನ ದೂರ ಇಡಲ್ಲ. ಸಮರ್ಥರು ಯಾರು ಆ ಇಲಾಖೆಯ ಜವಾಬ್ದಾರಿ ಹೊರಲ್ಲ. ಅಲ್ಲಿಗೆ ಹಗ್ಗವೂ ಹರಿಯಲ್ಲ. ಕೋಲು ಮುರಿಯಲ್ಲ ಅನ್ನೋ ಸ್ಥಿತಿ ಗೃಹ ಖಾತೆ ವಿಚಾರದಲ್ಲಿ ನಿರ್ಮಾಣವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.