23ಕ್ಕೆ ಸಿದ್ದು ನಾಮಪತ್ರ : ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧೆ

By Suvarna Web DeskFirst Published Apr 3, 2018, 8:22 AM IST
Highlights

ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.23ರಂದು ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.

ಮೈಸೂರು : ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಣೆ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏ.23ರಂದು ನಾಮಪತ್ರ ಸಲ್ಲಿಸುವುದಾಗಿ ಪ್ರಕಟಿಸಿದ್ದಾರೆ.

ಮೈಸೂರಿನ ಹಾರೋಹಳ್ಳಿಯಲ್ಲಿ ಚುನಾವಣೆ ಪ್ರಚಾರದ ವೇಳೆ ಮಾತನಾಡಿದ ಅವರು, ಅಂದು ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಿದ್ದು ಕ್ಷೇತ್ರದ ಜನ ನನಗೆ ಆಶೀರ್ವದಿಸಬೇಕು ಎಂದು ಕೋರಿದರು.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರ ವಿರುದ್ಧ ಟೀಕಾ ಪ್ರಹಾರ ಮುಂದುವರಿಸಿದ ಅವರು, ಅಮಿತ್‌ ಶಾ ಒಂದು ಪಕ್ಷದ ಅಧ್ಯಕ್ಷ. ಅವರು ತಮ್ಮ ಕೆಲಸ ಮಾಡಿ ಹೋಗಿದ್ದಾರೆ. ಅಂತಿಮವಾಗಿ ಜನರ ಮನಸ್ಥಿತಿ ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಮೋದಿ, ಶಾ ಇಬ್ಬರೂ ನೂರು ಬಾರಿ ರಾಜ್ಯಕ್ಕೆ ಬಂದ್ರೂ ಕಾಂಗ್ರೆಸ್‌ ಗೆಲುವನ್ನು ತಡೆಯಲು ಸಾಧ್ಯವಿಲ್ಲ ಎಂದರು.

ಚಾಜ್‌ರ್‍ಶೀಟ್‌ ಸುಳ್ಳಿನ ಕಂತೆ: ಇನ್ನು ರಾಜ್ಯ ಬಿಜೆಪಿಯು ಭಾನುವಾರ ಬಿಡುಗಡೆಗೊಳಿಸಿರುವ ಚಾಜ್‌ರ್‍ಶೀಟ್‌ ಸುಳ್ಳಿನ ಕಂತೆ. ಇದು ರಾಜಕೀಯ ಗಿಮಿಕ್‌ ಅಷ್ಟೆ. ಈ ವಿಷಯದಲ್ಲಿ ಕೇಂದ್ರ ಕಾನೂನು ಸಚಿವರು ದಿಕ್ಕುತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಪರಿಶಿಷ್ಟಪಂಗಡಕ್ಕೆ ತಳವಾರ-ಪರಿವಾರ ಪರ್ಯಾಯ ಪದಗಳನ್ನು ಸೇರಿಸಲು ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡಿದ್ದು ನಾವು. ನಾವು ಕಳುಹಿಸದೆ ಅಂಗೀಕೃತವಾಗುತ್ತಾ? ಇದು ಕೇವಲ ಮಂತ್ರಿಮಂಡಲದಲ್ಲಿ ಮಾತ್ರ ಒಪ್ಪಿಗೆ ಸಿಕ್ಕಿದೆ. ಇನ್ನೂ ಲೋಕಸಭೆ, ರಾಜ್ಯಸಭೆಯಲ್ಲಿ ಅಂಗೀಕೃತವಾಗಬೇಕಿದೆ. ಚುನಾವಣೆ ಹತ್ತಿರವಾದ ಹಿನ್ನೆಲೆಯಲ್ಲಿ ಇದನ್ನು ಜಾರಿಗೆ ತರಲು ಹೊರಟಿದ್ದಾರೆ ಎಂದರು.

ದಲಿತರು ಮುಖ್ಯಮಂತ್ರಿ ಆಗಬೇಕು ಎಂದು ಕನಸು ಕಾಣುವುದರಲ್ಲಿ ತಪ್ಪೇನಿದೆ? ಹಾಗೆಂದ ಮಾತ್ರಕ್ಕೆ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಈಗ ದಲಿತ ಸಿಎಂ ವಿಷಯ ಪ್ರಸ್ತಾಪವೇ ಇಲ್ಲ. ಎಲ್ಲವೂ ಹೈಕಮಾಂಡ್‌ಗೆ ಬಿಟ್ಟವಿಷಯ.

- ಸಿದ್ದರಾಮಯ್ಯ, ಮುಖ್ಯಮಂತ್ರಿ

ತಮಿಳುನಾಡು ಬಂದ್‌ ರಾಜಕೀಯ ಗಿಮಿಕ್‌

ಕಾವೇರಿ ನೀರಿಗೆ ಸಂಬಂಧಿಸಿದಂತೆ ತಮಿಳುನಾಡು ಕರೆ ನೀಡಿರುವ ಬಂದ್‌ ರಾಜಕೀಯ ಗಿಮಿಕ್‌ ಆಗಿದ್ದು ಅಲ್ಲಿನ ಸಂಸದರ ಒತ್ತಡಕ್ಕೆ ಮಣಿದು ಕಾವೇರಿ ನಿರ್ವಹಣಾ ಮಂಡಳಿ ರಚಿಸಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ತಮಿಳುನಾಡಿಗೆ 177.27 ಟಿಎಂಸಿ ನೀರು ಕೊಡಬೇಕು ಎಂದು ಸುಪ್ರಿಂ ಕೋರ್ಟ್‌ ಹೇಳಿದೆ. ಅಲ್ಲದೆ ಆರು ವಾರದಲ್ಲಿ ಕಾವೇರಿ ನಿರ್ವಹಣಾ ಮಂಡಳಿ ರಚನೆ ಕುರಿತು ತೀರ್ಮಾನಿಸಬೇಕು ಎಂದಿದೆ. ಈ ಸಂಬಂಧ ನಾವು ನಮ್ಮ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಿದ್ದು ಕೇಂದ್ರ ಸರ್ಕಾರ ಸಮಯಾವಕಾಶ ಕೋರಿದೆ. ಇನ್ನು ಮೇಕೆದಾಟು ಯೋಜನೆ ಸಂಬಂಧ ಡಿಪಿಆರ್‌ ತಯಾರಾಗಿದ್ದು, ಕೇಂದ್ರ ಸರ್ಕಾರ ಅನುಮತಿ ನೀಡಬೇಕು ಎಂದು ಅವರು ತಿಳಿಸಿದರು.

click me!